Make in India: Airbus ಜೊತೆಗೂಡಿ ವಾಯುಸೇನೆಗೆ ಯುದ್ಧ ವಿಮಾನ ತಯಾರಿಸಲಿರುವ ಟಾಟಾ

C295 Aircraft: ಪ್ರಸ್ತುತ ಯೋಜನೆಯ ಮಹತ್ವವೆಂದರೆ ಇದೇ ಮೊದಲ ಬಾರಿಗೆ ಒಂದು ಖಾಸಗಿ ಸಂಸ್ಥೆ, ಅಥವಾ ಟಾಟಾ ಮತ್ತು ಏರ್‌ಬಸ್ ಎಂಬ ಎರಡು ಖಾಸಗಿ ಸಂಸ್ಥೆಗಳ ಸಹಯೋಗದಿಂದ ಮಿಲಿಟರಿ ವಿಮಾನಗಳ ನಿರ್ಮಾಣವಾಗುತ್ತಿದೆ. ​

Written by - Zee Kannada News Desk | Last Updated : Jan 4, 2023, 10:59 AM IST
  • ಭಾರತೀಯ ರಕ್ಷಣಾ ವಲಯದಲ್ಲಿ ‘ಮೇಕ್ ಇನ್ ಇಂಡಿಯಾ’ ಯೋಜನೆಯಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಪ್ಲಾನ್
  • ಭಾರತೀಯ ವಾಯುಪಡೆಗಾಗಿ C295 ಯುದ್ಧ ವಿಮಾನ ನಿರ್ಮಿಸಲಿರುವ ಏರ್‌ಬಸ್ ಮತ್ತು ಟಾಟಾ ಸಂಸ್ಥೆ
  • ಚೀನಾ-ಪಾಕಿಸ್ತಾನ ಸೇರಿ ವೈರಿ ರಾಷ್ಟ್ರಗಳನ್ನು ಮಟ್ಟಹಾಕಲು ಭಾರತದ ಮಾಸ್ಟರ್ ಪ್ಲಾನ್
Make in India: Airbus ಜೊತೆಗೂಡಿ ವಾಯುಸೇನೆಗೆ ಯುದ್ಧ ವಿಮಾನ ತಯಾರಿಸಲಿರುವ ಟಾಟಾ  title=
C295 ಯುದ್ಧ ವಿಮಾನ

ಬೆಂಗಳೂರು: ಕಳೆದ ವರ್ಷ ಅಕ್ಟೋಬರ್ 30ರಂದು ಪ್ರಧಾನಿ ನರೇಂದ್ರ ಮೋದಿಯವರು ಗುಜರಾತಿನ ಪ್ರಸಿದ್ಧ ಪ್ರದೇಶವಾದ ವಡೋದರಾ ಅಥವಾ ಬರೋಡಾದಲ್ಲಿ ಒಂದು ಮಹತ್ವದ ಯೋಜನೆಗೆ ಅಡಿಗಲ್ಲು ಹಾಕಿದರು. ಆ ಯೋಜನೆ ಭಾರತ ರಕ್ಷಣಾ ವಲಯದಲ್ಲಿ ‘ಮೇಕ್ ಇನ್ ಇಂಡಿಯಾ’ ಯೋಜನೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಉದ್ದೇಶಿಸಿತ್ತು.

ಭಾರತೀಯ ವಾಯುಪಡೆಗಾಗಿ C295 ವಿಮಾನವನ್ನು ಏರ್‌ಬಸ್ ಸಂಸ್ಥೆ ಮತ್ತು ಟಾಟಾ ಏರೋಸಿಸ್ಟಮ್‌ಗಳ ಜ‌ಂಟಿ ಯೋಜನೆಯಾಗಿ, ಟಾಟಾ ಏರೋಸಿಸ್ಟಮ್ ಭಾರತದಲ್ಲಿ ಏರ್‌ಬಸ್ ಸ್ಥಳೀಯ ಸಹಯೋಗಿಯಾಗಿ ಉತ್ಪಾದಿಸಲಿವೆ. ಈ ರೀತಿ ದೇಶೀಯವಾಗಿ ಏರ್‌ಬಸ್ ನಂತಹಾ ಪ್ರಸಿದ್ಧ ಸಂಸ್ಥೆ ವಿಮಾನವನ್ನು ಉತ್ಪಾದಿಸುವುದು ಒಂದು ವಿಮರ್ಶಾತ್ಮಕ ವಿಚಾರವಾಗಿದೆ. ಏರ್‌ಬಸ್ ಸಂಸ್ಥೆ ಭಾರತೀಯ ವಾಯುಪಡೆಗೆ 56 C295 ಸಾಗಾಣಿಕಾ ವಿಮಾನಗಳನ್ನು ಉತ್ಪಾದಿಸುವ ಅಥವಾ ಪೂರೈಸುವ ಯೋಜನೆ ಮೊದಲ ಬಾರಿಗೆ 2011ರಲ್ಲಿ ಯೋಚಿಸಲಾಗಿತ್ತು. ಭಾರತೀಯ ವಾಯುಪಡೆಗೆ ತನ್ನ 'ಆವ್ರೋ' ಸಾಗಾಣಿಕಾ ವಿಮಾನಗಳಿಗೆ ವಯಸ್ಸಾಗುತ್ತಿದೆ, ತಮ್ಮ ಕಾರ್ಯಾಚರಣೆಯ ಅಂತ್ಯಕ್ಕೆ ಬರುತ್ತಿವೆ ಎಂದು ಅರಿವಾದಾಗ ಅವುಗಳ ಬದಲಿಗೆ ಇನ್ನೂ ಆಧುನಿಕ, ಹೆಚ್ಚು ಸಮರ್ಥವಾದ, ಭಾರತದಲ್ಲಿ ಮತ್ತು ವಿದೇಶಗಳಲ್ಲಿ ವಾಯುಪಡೆಯ ಬೇರೆ ಬೇರೆ ಕಾರ್ಯಗಳನ್ನು ನಡೆಸಬಲ್ಲ ಸಾಗಾಣಿಕಾ ವಿಮಾನದ ಅಗತ್ಯವಿದೆ ಎಂದು ತಿಳಿಯಿತು.

ಇದಕ್ಕಾಗಿ ಹುಡುಕಾಟ 2011ಕ್ಕೂ ಮೊದಲೇ ಆರಂಭವಾಯಿತು. 2011ರಲ್ಲಿ ಏರ್‌ಬಸ್ ಸಂಸ್ಥೆಯ C295 ವಿಮಾನ ಭಾರತೀಯ ವಾಯುಪಡೆಯ ಕಾರ್ಯಗಳಿಗೆ ಸೂಕ್ತವಾದ, ಸರಿಯಾದ ಬೆಲೆಯ ವಿಮಾನ ಎಂದು ನಿರ್ಧರಿಸಲಾಯಿತು. ಟಾಟಾ ಸಂಸ್ಥೆಯೂ ಈ ಯೋಜನೆಯ ಭಾಗವಾಗಲು ಮುಂದೆ ಬಂತು. ನಿಜ ಹೇಳಬೇಕೆಂದರೆ ಭಾರತ ಇಂತಹ ಯೋಜನೆಯನ್ನೇ ಎದುರು ನೋಡುತ್ತಿತ್ತು. ಆದರೆ ಟಾಟಾ ಸಂಸ್ಥೆಯ ಪ್ರಸ್ತಾಪ ಯಾಕೋ ಮುಂದುವರಿಯುವ ಹಾಗೆ ಕಾಣಲಿಲ್ಲ. ರಕ್ಷಣಾ ಸಚಿವಾಲಯದ ಒಂದಷ್ಟು ಅಧಿಕಾರಿಗಳು ಮತ್ತು ವಾಯುಪಡೆಯ ಅಧಿಕಾರಿಗಳಿಗೆ ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಬಿಡಿಭಾಗಗಳ ಪೂರೈಕೆಯು ಟಾಟಾ ಮತ್ತು ಏರ್‌ಬಸ್ ಸಂಸ್ಥೆಗಳ ಜಂಟಿ ನಿರ್ಮಾಣ ಯೋಜನೆ ಹೇಗೆ ಕಾರ್ಯರೂಪಕ್ಕೆ ಬರಬಹುದು ಎಂಬ ಮಾಹಿತಿಯ ಕೊರತೆಯಿತ್ತು. ಅದರೊಡನೆ ಅದಕ್ಕೆ ರಾಜಕೀಯ ಕಾರಣಗಳೂ ಇದ್ದವು. ಈ ಯೋಜನೆ ಎಲ್ಲಿ ಚಾಲ್ತಿಗೆ ಬರುತ್ತದೆ? ಇದಕ್ಕೆ ಬೇಕಾಗುವ ಹಣ ಎಲ್ಲಿಂದ ಬರುತ್ತದೆ? ಭಾರತೀಯ ವಾಯುಪಡೆಯ ಪಾಲಿಗೆ ಅತ್ಯಂತ ಹೊಸ ಮಾದರಿಯದಾದ ಇಂತಹ ಯೋಜನೆಗೆ ನಿಯಂತ್ರಕರು ಮತ್ತು ಆಡಿಟರ್‌ಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದು ಒಂದು ಪ್ರಶ್ನೆಯಾಗಿತ್ತು. ಅದು ಯಾವ ಕಾರಣಕ್ಕೋ ಏನೋ, ಈ ಯೋಜನೆಯ ಫೈಲ್‌ಗಳು ಹಲವು ವರ್ಷಗಳ ಕಾಲ ಬಾಕಿ ಇರಿಸಲಾಗಿತ್ತು. 2021ರಲ್ಲಿ ಭಾರತ ಸರ್ಕಾರ ಈ ಯೋಜನೆಯ ಜಾರಿಗೆ ನಿರ್ಧಾರ ಕೈಗೊಳ್ಳುವ ತನಕ ಯೋಜನೆ ಕತ್ತಲಲ್ಲೇ ಇತ್ತು. ಆದರೆ 2021ರಲ್ಲಿ ಸರ್ಕಾರ ಯೋಜನೆಗೆ ಉತ್ತೇಜನ ನೀಡುವ ನಿರ್ಧಾರ ಕೈಗೊಂಡಿತು.

ಇದನ್ನೂ ಓದಿ: ಇನ್ಮುಂದೆ ಈ 49 ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯನಿರ್ವಹಿಸಲ್ಲ WhatsApp- ಈ ಪಟ್ಟಿಯಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ ಇದೆಯೇ?

2021ರಲ್ಲಿ ಭಾರತ ಸರ್ಕಾರ C295 ಮಾದರಿಯ 56 ಸಾಗಾಣಿಕಾ ವಿಮಾನಗಳ ಖರೀದಿಗೆ 3 ಬಿಲಿಯನ್ ಡಾಲರ್ ವೆಚ್ಚ ಮಾಡಲು ತೀರ್ಮಾನಿಸಿತು. ಅದಕ್ಕಾಗಿ ಒಪ್ಪಂದಕ್ಕೂ ಸಹಿ ಹಾಕಲಾಯಿತು. ಈ ಯೋಜನೆಯ ತೀರ್ಮಾನ ಕೈಗೊಂಡು 1 ದಶಕದ ಬಳಿಕ ಚಾಲ್ತಿಗೆ ಬಂದರೂ, ಈ ಬೆಲೆ ನಿಜಕ್ಕೂ ಉತ್ತಮವೇ ಆಗಿತ್ತು. ಆದ್ದರಿಂದ ಭಾರತೀಯ ವಾಯುಪಡೆ ಅದನ್ನು ತಕ್ಷಣವೇ ಒಪ್ಪಿಕೊಂಡಿತು. ರಾಷ್ಟ್ರೀಯ ಭದ್ರತಾ ಮಂಡಳಿಯ ಸಹಾಯ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ರಕ್ಷಣಾ ಸಚಿವಾಲಯವನ್ನು ಮತ್ತು ಪ್ರಧಾನ ಮಂತ್ರಿಗಳ ಕಚೇರಿಯನ್ನು ಈ ಯೋಜನೆಗಾಗಿ ಒಪ್ಪಿಸಿದ್ದರಿಂದ ಇದು ಜಾರಿಗೆ ಬಂತು.

ಈ ಯೋಜನೆ ಹಲವು ಕಾರಣಗಳಿಂದಾಗಿ ಭಾರತಕ್ಕೆ ಲಾಭದಾಯಕವಾಗಿ ಕಂಡುಬಂದಿತ್ತು. ‘ಆವ್ರೋ’ ಯುದ್ಧ ವಿಮಾನಗಳು ಹಳೆಯದಾಗುತ್ತಾ ಬಂದಿದ್ದರಿಂದ ಭಾರತೀಯ ವಾಯುಪಡೆಗೆ ತುರ್ತಾಗಿ ಹೊಸ ವಿಮಾನಗಳೂ ಬೇಕಿದ್ದವು. ಅದಕ್ಕೂ ಹೆಚ್ಚಾಗಿ ಈ ಯೋಜನೆ ಭಾರತೀಯ ರಕ್ಷಣಾ ಉಪಕರಣಗಳ ಉತ್ಪಾದನೆಗೆ ಒಂದು ಹೊಸ ಅಡಿಪಾಯ ಹಾಕಿಕೊಟ್ಟಿತ್ತು. ಈ ಯೋಜನೆ ಯಾವ ರೀತಿ ನಡೆಯುತ್ತದೆ ಎಂದು ಇಲ್ಲಿ ವಿವರಿಸಲು ಪ್ರಯತ್ನಿಸೋಣ. ಈಗಾಗಲೇ ಹೇಳಿರುವ ಹಾಗೆ ಏರ್‌ಬಸ್ ಮತ್ತು ಟಾಟಾ ಸಂಸ್ಥೆಗಳು 3 ಬಿಲಿಯನ್ ಡಾಲರ್ ಮೌಲ್ಯದ ಒಪ್ಪಂದವನ್ನು ಪಡೆದುಕೊಂಡಿವೆ. ಇದು ಖಾಸಗಿ ಸ್ವಾಮ್ಯದ ಪ್ರಥಮ ಯೋಜನೆಯಾಗಿದ್ದು, ಇದರ ಉತ್ಪಾದನಾ ಘಟಕ ವಡೋದರಾದಲ್ಲಿ ಜಾರಿಗೆ ಬರಲಿದ್ದು, ಇದಕ್ಕಾಗಿ ಪ್ರಧಾನಿ ಮೋದಿಯವರು ಅಡಿಪಾಯ ಹಾಕಿದ್ದರು. ಇದರಿಂದಾಗಿ ಮಿಲಿಟರಿ ವಿಮಾನಗಳು ಭಾರತದಲ್ಲಿ ನಿರ್ಮಾಣವಾಗಲಿವೆ.

ಒಂದು ವೇಳೆ ಕಳೆದ 40 ವರ್ಷಗಳಿಗೂ ಮೊದಲು ಭಾರತ ಏನಾದರೂ ಇಂತಹ ಪರಿಸ್ಥಿತಿಯನ್ನು ಅನುಭವಿಸಿತ್ತೇ ಎಂದು ನೋಡಬೇಕಾದರೆ ನಾವು 1960ರ ದಶಕದ ಮಧ್ಯದಲ್ಲಿ ಮತ್ತು ಕೊನೆಯ ಅವಧಿಯನ್ನು ಗಮನಿಸಬೇಕಾಗುತ್ತದೆ. ಆ ಅವಧಿಯಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಮಾರುತ್ ವಿಮಾನವನ್ನು ನಿರ್ಮಿಸುತ್ತಿತ್ತು. ಅದು ಭಾರತದಲ್ಲಿ ನಿರ್ಮಾಣವಾಗುತ್ತಿದ್ದ ವಿಮಾನಗಳಲ್ಲಿ ಒಂದಾಗಿತ್ತು. ಅದು ಆರಂಭಿಕ ಮಾದರಿಯ ವಿಮಾನವಾಗಿದ್ದು, ವಾಯುಪಡೆ ಆ ಅವಧಿಯಲ್ಲಿ ವಿಮಾನದ ವಿಚಾರದಲ್ಲಿ ಸಮಾಧಾನ ಹೊಂದಿತ್ತು. ಆದರೆ ಆ ವಿಮಾನವೂ ಅಷ್ಟೊಂದು ಯಶಸ್ವಿಯಾಗಲಿಲ್ಲ. ಅದಕ್ಕೆ ಹಲವು ಕಾರಣಗಳೂ ಇವೆ. ಅವುಗಳನ್ನು ಈಗ ವಿವರಿಸಲು ಹೋಗುವುದಿಲ್ಲ. ಆದರೆ ನಾವು ಗಮನಿಸಬೇಕಾದ ಅಂಶವೆಂದರೆ, ಆ ವಿಮಾನವನ್ನು ನಿರ್ಮಿಸಿದ್ದು ಸರ್ಕಾರಿ ಸ್ವಾಮ್ಯದ ಅಥವಾ ಸಾರ್ವಜನಿಕ ವಲಯದ ಸಂಸ್ಥೆಯಾಗಿದ್ದ ಎಚ್ಎಎಲ್.

ಇದನ್ನೂ ಓದಿ: 32 ಇಂಚಿನ ಬೆಲೆಯಲ್ಲಿ 55 ಇಂಚಿನ ಸ್ಮಾರ್ಟ್ ಟಿವಿ.! ಮುಗಿ ಬಿದ್ದು ಖರೀದಿಸುತ್ತಿರುವ ಗ್ರಾಹಕರು .!

ಪ್ರಸ್ತುತ ಯೋಜನೆಯ ಮಹತ್ವವೆಂದರೆ ಇದೇ ಮೊದಲ ಬಾರಿಗೆ ಒಂದು ಖಾಸಗಿ ಸಂಸ್ಥೆ, ಅಥವಾ ಟಾಟಾ ಮತ್ತು ಏರ್‌ಬಸ್ ಎಂಬ ಎರಡು ಖಾಸಗಿ ಸಂಸ್ಥೆಗಳ ಸಹಯೋಗದಿಂದ ಮಿಲಿಟರಿ ವಿಮಾನಗಳ ನಿರ್ಮಾಣವಾಗುತ್ತಿದೆ. ಈ ಒಪ್ಪಂದದ ಪ್ರಕಾರ, 56 ವಿಮಾನಗಳ ಪೈಕಿ 16 ವಿಮಾನಗಳನ್ನು ಏರ್‌ಬಸ್ ಸ್ಪೇನಿನ ತನ್ನ ಕಾರ್ಖಾನೆಯಿಂದ ಹಾರಾಡಬಲ್ಲ ಸ್ಥಿತಿಯಲ್ಲಿ ಒದಗಿಸಲಿದೆ. ಮುಂದಿನ 40 ವಿಮಾನಗಳನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತದೆ. ಹಾಗಂತ ಈ ವಿಮಾನಗಳ ವಿನ್ಯಾಸವೂ ಏರ್‌ಬಸ್ ನಿರ್ಮಾಣದ ಮೂಲ ವಿನ್ಯಾಸವೇ ಆಗಿರುತ್ತದೆ. ಆದರೆ ಬಾಕಿ ನಿರ್ಮಾಣ ಕೆಲಸಗಳು ಭಾರತದಲ್ಲಿ ಮುಂದಿನ 10 ವರ್ಷಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದೆ.

ಹಾಗಂತ ಈ 40 ವಿಮಾನಗಳಲ್ಲಿ ಹಲವನ್ನು ಸೆಮಿ ನಾಕ್‌ಡೌನ್ ಮತ್ತು ಸಂಪೂರ್ಣ ನಾಕ್‌ಡೌನ್ ಅಸೆಂಬ್ಲಿಗಳ ರೂಪದಲ್ಲಿ ಸ್ಪೇನ್‌ನಿಂದ ಆಮದು ಮಾಡಿಕೊಂಡು, ಭಾರತದಲ್ಲಿ ಜೋಡಿಸಲಾಗುತ್ತದೆ. ಆದರೆ ಆ ಬಳಿಕದ 30 ವಿಮಾನಗಳು ಸಂಪೂರ್ಣವಾಗಿ ಭಾರತದಲ್ಲೇ ಉತ್ಪಾದಿಸಲ್ಪಡುತ್ತವೆ. ಇದಕ್ಕಾಗಿ ಹಲವು MSMEಗಳು, ಪೂರೈಕೆದಾರರು ಟಾಟಾ ಮತ್ತು ಏರ್‌ಬಸ್ ಸಂಸ್ಥೆಗಳೊಡನೆ ಕೈಜೋಡಿಸಲಿವೆ. ಈ ಮೂಲಕ ಯೋಜನೆ ದೇಶಾದ್ಯಂತ ಮಹತ್ವ ಪಡೆಯಲಿದೆ. ಹಲವು ಸಂಸ್ಥೆಗಳು ಇದಕ್ಕಾಗಿ ಬಿಡಿಭಾಗಗಳನ್ನು ಒದಗಿಸಲಿವೆ. ಒಂದು ಅಂದಾಜಿನ ಪ್ರಕಾರ ವಿಮಾನದ 13,400 ಭಾಗಗಳು ಮತ್ತು 4,600 ಸಬ್ ಅಸೆಂಬ್ಲಿಗಳು ದೇಶೀಯವಾಗಿ ನಿರ್ಮಾಣವಾಗುವ C295ಗಾಗಿ ಭಾರತದ MSMEಗಳಿಂದ ನಿರ್ಮಿಸಲ್ಪಡುತ್ತವೆ. ಇದು ನಿಜಕ್ಕೂ ದೊಡ್ಡ ಸಂಖ್ಯೆಯಾಗಿದೆ. ಆದರೆ ಟಾಟಾ ಮತ್ತು ಏರ್‌ಬಸ್ ಸಂಸ್ಥೆಗಳಿಗೆ ಇದೇ ಮೊದಲ ಬಾರಿಗೆ ಭಾರತೀಯ MSMEಗಳು ಪೂರೈಕೆ ಮಾಡುತ್ತಿವೆ. ಇಲ್ಲಿಯ ತನಕ ಕೆಲವು ಭಾರತೀಯ MSMEಗಳು ಅಪಾಚೆ ಹೆಲಿಕಾಪ್ಟರ್‌ಗಳಿಗೆ ಫ್ಯೂಸ್‌ಲೇಜ್‌ಗಳು ಮತ್ತು ಕೆಲವು ಬೋಯಿಂಗ್ ವಿಮಾನಗಳಿಗೆ ಎಂಪನ್ನೇಜ್‌ಗಳನ್ನು ಉತ್ಪಾದಿಸಿವೆ. ಭಾರತದ ಕೆಲವು MSMEಗಳು ಚಿನೂಕ್ ಹೆಲಿಕಾಪ್ಟರ್‌ಗಾಗಿ ಏರೋಸ್ಟ್ರಕ್ಚರ್ ನಿರ್ಮಾಣ ಮಾಡಿವೆ. ಈ ಮೊದಲು ಭಾರತ ಅವುಗಳನ್ನು ಅಮೆರಿಕಾದಿಂದ ಪಡೆದುಕೊಳ್ಳುತ್ತಿತ್ತು. ಆದರೆ 5 ವರ್ಷಗಳಿಂದ ಅವನ್ನು ಭಾರತದಲ್ಲಿ ನಿರ್ಮಿಸಲಾಗುತ್ತಿದೆ.

ಆದ್ದರಿಂದ ಭಾರತ ಅಥವಾ ಭಾರತೀಯ MSMEಗಳು ಲಾಕ್‌ಹೀಡ್ ಮಾರ್ಟಿನ್, ಬೋಯಿಂಗ್, ರೇಥಿಯೋನ್, ಅಥವಾ MBDA ಸಂಸ್ಥೆಗಳ ಮೂಲಕ ಜಾಗತಿಕ ಪೂರೈಕೆ ಸರಪಳಿಯ ಭಾಗವಾಗುವುದು ಈಗಾಗಲೇ ಆರಂಭವಾಗಿದೆ. ಆದರೆ ಭಾರತದಲ್ಲಿ C295 ನಿರ್ಮಾಣವಾಗುವುದು ಈ ವಲಯಕ್ಕೆ ಮತ್ತು ಭಾರತೀಯ MSMEಗಳಿಗೆ ಹೆಚ್ಚಿನ ಉತ್ತೇಜನ ನೀಡಲಿದೆ. ಇದು ಈ ಯೋಜನೆಯ ಮಹತ್ವವಾಗಿದೆ. ಇದಕ್ಕೂ ಹೆಚ್ಚಾಗಿ, ಭಾರತೀಯ ಮಾಲಕತ್ವದ, ಭಾರತ ಸರ್ಕಾರಿ ಸ್ವಾಮ್ಯದ ಅಥವಾ ಭಾಗಶಃ ಸ್ವಾಮ್ಯದ ಸಂಸ್ಥೆಗಳಾದ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ ಅಥವಾ ಇತರ ಸಂಸ್ಥೆಗಳು ಇಲೆಕ್ಟ್ರಾನಿಕ್ಸ್ ಸೂಟ್‌ಗಳನ್ನು ಒದಗಿಸಲಿವೆ. ಭಾರತೀಯ ವಾಯುಪಡೆಗೆ ಅತ್ಯಂತ ಆಧುನಿಕ ಸಾಗಾಣಿಕಾ ವಿಮಾನಕ್ಕೆ ರಕ್ಷಣಾ ಇಲೆಕ್ಟ್ರಾನಿಕ್ಸ್ ಅನ್ನು ಭಾರತೀಯ ಸಂಸ್ಥೆಗಳು ನಿರ್ಮಿಸಲಿವೆ. ಆದ್ದರಿಂದ 125ಕ್ಕೂ ಹೆಚ್ಚಿನ MSMEಗಳು C295 ಉತ್ಪಾದನೆಯಲ್ಲಿ ಪೂರೈಕೆ ಸರಪಳಿಯ ಶಾಶ್ವತ ಪೂರೈಕೆದಾರರಾಗಿರುತ್ತವೆ. ಇದು ನಿಜಕ್ಕೂ ಒಂದು ದೊಡ್ಡ ಸಂಖ್ಯೆಯೇ ಆಗಿದೆ. ಈ ಸಂಸ್ಥೆಗಳಿಗೆ ಯೋಜನೆ ಪರಿಣತಿ, ಅಗತ್ಯ ಪ್ರಮಾಣಪತ್ರ, ಅತ್ಯಂತ ನಿಖರವಾದ ಸಬ್ ಅಸೆಂಬ್ಲಿಗಳು ಮತ್ತು ಉಪಕರಣಗಳನ್ನು ನಿರ್ಮಿಸುವ ಅನುಭವ ನೀಡಿ, ಜಾಗತಿಕ ಮಟ್ಟದಲ್ಲಿ ಬೆಳೆಯಲು ಅವಕಾಶ ಮಾಡಿಕೊಡುತ್ತದೆ. ಇದು ಭಾರತೀಯ MSME ವಲಯಕ್ಕೆ ದೊಡ್ಡ ಸಹಾಯವಾಗಿದೆ. ಈ ಯೋಜನೆಯ ಇನ್ನೊಂದು ಅಂಶವೆಂದರೆ, ಇದಕ್ಕಾಗಿ ಭಾರತದಲ್ಲಿನ ಉತ್ಪಾದನಾ ಘಟಕದ ಸಮೀಪದಲ್ಲೇ MRO ಅಂದರೆ ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಪರೀಕ್ಷಾ ವ್ಯವಸ್ಥೆ ಮಾಡಲಾಗುತ್ತದೆ. ಪ್ರಸ್ತುತ ಜಗತ್ತಿನಲ್ಲಿ 40ಕ್ಕೂ ಹೆಚ್ಚು ದೇಶಗಳ ವಾಯುಪಡೆಗಳು ಸಾಗಾಣಿಕೆಗೆ C295 ಅಥವಾ ಅದರ ವಿಭಿನ್ನ ಆವೃತ್ತಿಗಳ ವಿಮಾನಗಳನ್ನು ಬಳಸುತ್ತಿವೆ. ಅವೆಲ್ಲಕ್ಕೂ MRO ವ್ಯವಸ್ಥೆ ಬೇಕಾಗುತ್ತದೆ. ಈಗ 30 ಅಥವಾ 40 C295 ವಿಮಾನಗಳ ನಿರ್ಮಾಣ ಮಾತ್ರವಲ್ಲದೆ, ಎಲ್ಲ C295 ವಿಮಾನಗಳ MRO ಭಾರತದಲ್ಲೇ ನಡೆಯಬಹುದು.

ಇದನ್ನೂ ಓದಿ: ಅತಿ ಹೆಚ್ಚು ಮಾರಾಟವಾಗುತ್ತಿರುವುದು ಈ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಗಳೇ !

ಇವೆಲ್ಲ ಕಾರಣಗಳಿಂದ ಆದಾಯವೂ ಹೆಚ್ಚುತ್ತದೆ. ಅದರೊಡನೆ ಈ ಜಂಟಿ ಯೋಜನೆಯ ಮೂಲಕ ವಿದೇಶಗಳಿಗೆ ರಫ್ತು ಮಾಡುವ C295 ವಿಮಾನಗಳನ್ನೂ ಭಾರತದಲ್ಲಿ ನಿರ್ಮಿಸಬಹುದು. ಈ ರೀತಿ ಸಂಪೂರ್ಣವಾಗಿ ಭಾರತದಲ್ಲಿ ನಿರ್ಮಾಣಗೊಂಡ C295 ವಿಮಾನಗಳನ್ನು ರಫ್ತು ಮಾಡುವ ಜೊತೆಗೆ, ಭಾರತೀಯ ಸಂಸ್ಥೆಗಳು ಅಥವಾ ಭಾರತೀಯ MRO ಗಳಿಸುವ ಪರಿಣತಿಯ ಮೂಲಕ ಬೇರೆ ದೇಶಗಳು ತಮ್ಮ ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಪರಿಶೀಲನೆಗೆ ಕಳುಹಿಸಿದಾಗ ಭಾರತಕ್ಕೆ ವಿದೇಶೀ ಆದಾಯವೂ ಲಭ್ಯವಾಗುತ್ತದೆ. ಅಂದರೆ ಈ ಜಂಟಿ ಯೋಜನೆಯ ಮೂಲಕ ನಾವು ಪರಿಣತಿಯನ್ನು ಪಡೆಯುತ್ತೇವೆ, ವಿದೇಶಿ ಆದಾಯ ಗಳಿಸುತ್ತೇವೆ ಮತ್ತು ಕೇವಲ ಭಾರತೀಯ ವಾಯುಪಡೆ ಮತ್ತು ಭಾರತೀಯ ಸೇನೆಗೆ ಮಾತ್ರವಲ್ಲದೆ, ಜಾಗತಿಕವಾಗಿ ಏರೋಸ್ಪೇಸ್ ಮತ್ತು ರಕ್ಷಣಾ ಕೇಂದ್ರವಾಗಿ ಭಾರತ ಹೊರಹೊಮ್ಮುವ ಗೌರವವನ್ನೂ ಗಳಿಸುತ್ತೇವೆ. ಈ ಯೋಜನೆಯ ಜಾರಿಯಿಂದ ಆಗುವ ಹಲವು ಪ್ರಯೋಜನಗಳಲ್ಲಿ ಇವು ಕೆಲವು. ಇದು ಭಾರತದ ಆತ್ಮನಿರ್ಭರತೆ ಮತ್ತು ರಕ್ಷಣಾ ಕ್ಷೇತ್ರದಲ್ಲಿನ ಸ್ವಾವಲಂಬನೆಗೆ ಸಹಕಾರಿಯಾಗುವ ಮೂಲಕ ಭಾರತದ ಪಾಲಿಗೆ ಮಹತ್ತರ ಯೋಜನೆ ಎನಿಸಲಿದೆ. ಈಗಾಗಲೇ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಈ ನಿಟ್ಟಿನಲ್ಲಿ ಯಶಸ್ಸು ಕಾಣುತ್ತಿದೆ.

ಈ ವಿಮಾನದ ಕಾರ್ಯತಂತ್ರದ ಮಹತ್ವ ಏನೆಂದರೆ, ಒಂದು ಬಾರಿ ಹಳೆಯದಾದ ಆವ್ರೋ ಸಾಗಾಣಿಕಾ ವಿಮಾನಗಳ ಬದಲಿಗೆ C295 ಚಾಲ್ತಿಗೆ ಬಂದರೆ, ಕನಿಷ್ಠ ಪಕ್ಷ ಮುಂದಿನ 4 ದಶಕಗಳ ಕಾಲ ಅವುಗಳು ಸೇವೆ ಸಲ್ಲಿಸಲಿವೆ. ಅದಕ್ಕಿಂತ ಹೆಚ್ಚಾಗಿ ಭಾರತಕ್ಕೆ ಏರ್‌ಲಿಫ್ಟ್ ಅಗತ್ಯತೆಯೂ ಹೆಚ್ಚಾಗಲಿದೆ. ಮುಂದಿನ 20 ವರ್ಷಗಳಲ್ಲಿ ಭಾರತ ಚೀನಾದಿಂದ ಇನ್ನಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನಾವು ಈಗಾಗಲೇ 2020-21ರಲ್ಲಿ ಗಮನಿಸಿರುವಂತೆ ಹೆಚ್ಚಿನ ಏರ್ ಲಿಫ್ಟ್ ಕಾರ್ಯಾಚರಣೆಗಳು ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಮತ್ತು ಹಿಮಾಲಯದ ತಪ್ಪಲಿನಲ್ಲಿ ನಡೆಯಲಿವೆ. ಆದ್ದರಿಂದ ಯಾವುದೇ ಹೊಸ ವಿಮಾನವಾದರೂ ಅದು ಭಾರತದ ಏರ್ ಲಿಫ್ಟ್ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಮತ್ತು ಸಾಗಾಣಿಕಾ ಸರಪಳಿಯನ್ನು ಗಟ್ಟಿಗೊಳಿಸಲಿದೆ. ಇದು ಸೇನೆಯನ್ನು ಒಂದು ವಲಯದಿಂದ ಇನ್ನೊಂದಕ್ಕೆ ಸಾಗಿಸಲು ಸಹಕಾರಿಯಾಗಲಿದೆ.

ಚೀನಾವನ್ನು ಗಮನದಲ್ಲಿಟ್ಟುಕೊಂಡು ಪೂರ್ವ ಮತ್ತು ಈಶಾನ್ಯ ವಲಯಗಳಲ್ಲಿ ಕಾರ್ಯಾಚರಣೆ ನಡೆಸಬೇಕಾಗುತ್ತದೆ. ಒಂದು ವೇಳೆ ಪಾಕಿಸ್ತಾನವೂ ಕೆಣಕುವಂತೆ ನಡೆದುಕೊಳ್ಳಲು ಆರಂಭಿಸಿದರೆ ಆಗ ನಾವೂ ಪಡೆಗಳನ್ನು ಉತ್ತರದ ಗಡಿಗಳಿಂದ ಪಶ್ಚಿಮ ಗಡಿಗಳಿಗೆ ಸಾಗಿಸಬೇಕಾಗುತ್ತದೆ. ಆಗ ವಿಮಾನಗಳು ಅಗತ್ಯ ಪರಿಸ್ಥಿತಿಯಲ್ಲಿ ವಾಯುಪಡೆಗೆ ಕ್ಷಿಪ್ರ ಸಾಗಾಣಿಕೆಗೆ ಸಹಕಾರಿಯಾಗುತ್ತದೆ ಅದರೊಡನೆ ಬೇರೆ ಬೇರೆ ರೀತಿಯ ವಿಮಾನಗಳ ಲಭ್ಯತೆಯು ಒಂದೇ ಮಾದರಿಯ ವಿಮಾನದ ಮೇಲೆ ಅವಲಂಬಿತವಾಗುವುದನ್ನು ತಪ್ಪಿಸುತ್ತದೆ. ಆ ಮೂಲಕ ಇದು ಭಾರತದಲ್ಲಿ ನಿರ್ಮಾಣ ಹಾಗೂ ನಿರ್ವಹಣೆ ಆಗುವುದರಿಂದ ಮೂಲ ಪೂರೈಕೆದಾರ ವಿಮಾನ ಅಥವಾ ಉಪಕರಣಗಳ ಪೂರೈಕೆಯಲ್ಲಿ, ನಿರ್ವಹಣೆ ಮತ್ತು ದುರಸ್ತಿಯಲ್ಲಿ, ಬಿಡಿಭಾಗಗಳ ಬದಲಿಸುವಿಕೆಯಲ್ಲಿ ತಡ ಮಾಡುವ ಥರದ ತೊಂದರೆಯಾಗುವುದಿಲ್ಲ. ಕಾರ್ಯತಂತ್ರದ ವಿಚಾರಕ್ಕೆ ಬಂದರೆ ಇದು C295 ಉತ್ಪಾದನೆಯ ಪ್ರಯೋಜನಗಳಾಗಿವೆ.

ಇನ್ನು ಕೌಶಲ್ಯ, ಅತ್ಯುನ್ನತ ತಂತ್ರಜ್ಞಾನದ ಅಗತ್ಯತೆಯ ಕುರಿತ ಅರಿವು, ವಿಮಾನ ನಿರ್ಮಾಣಗಳ ವಿಚಾರದಲ್ಲಿ ಇದು ಕೇವಲ ಒಂದು ಆರಂಭಿಕ ಹೆಜ್ಜೆಯಾಗಿದೆ. ಆದರೆ ಭಾರತ ಮುಂದಿನ ದಿನಗಳಲ್ಲಿ ಯುದ್ಧ ವಿಮಾನ ನಿರ್ಮಾಣದ ಸಾಮರ್ಥ್ಯ ಹೊಂದಬೇಕಾದರೆ, ಆಗ ಹೆಚ್ಚು ಶಕ್ತಿ ಅಥವಾ ಹೆಚ್ಚಿನ ಸಾಮರ್ಥ್ಯ, ಕೌಶಲಗಳ ಅಗತ್ಯವಿರುತ್ತದೆ. ಆ ನಿಟ್ಟಿನಲ್ಲಿ ನೋಡಿದಾಗ ಸರ್ಕಾರ ಇನ್ನೂ ನಿಧಾನವಾಗಿರುವ ಹಾಗೆ ಕಾಣುತ್ತದೆ. ಸರ್ಕಾರಕ್ಕೆ ಏನೇನು ಮಾಡಬೇಕು ಎಂಬ ಕುರಿತು ಮಾಹಿತಿ ಇರಲಿಲ್ಲ ಎನಿಸುತ್ತದೆ. ಆದರೆ ಈಗ ಭಾರತಕ್ಕೆ ಈ ಯೋಜನೆ ಬಂದಿರುವ ಕಾರಣ ಐಟಿಐಗಳು ಮತ್ತು ಸರ್ಕಾರದ ವಿಶೇಷ ಕೌಶಲ ಕಾರ್ಯಕ್ರಮಗಳು ಇನ್ನೂ ಹೆಚ್ಚಿನ ಉತ್ತೇಜನ ಪಡೆಯಲಿವೆ. ಆ ಮೂಲಕ ಪದವಿ ಮಾತ್ರ ಅಗತ್ಯವಲ, ಕೌಶಲ ಅದಕ್ಕಿಂತ ಮುಖ್ಯವಾದದ್ದು ಎಂಬ ಅರಿವೂ ಯುವ ಜನತೆಯಲ್ಲಿ ಮೂಡಲಿದೆ. ಏಕೆಂದರೆ ಪದವಿ ಪ್ರಮಾಣಪತ್ರವಿದ್ದು, ಅದರೊಡನೆ ಕೌಶಲ್ಯ ಇಲ್ಲವಾದಲ್ಲಿ ಅದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರದ ಕೆಲವು ವಿಭಾಗಗಳಿಗೆ ಈ ಅರಿವು ಮೂಡಿದೆ. ಈ ವಿಚಾರವನ್ನು ಇಂತಹ ವಲಯದಲ್ಲಿ ಕೆಲಸ ಮಾಡಲು ಬಯಸುವ ಜನರ ಬಳಿಗೂ ತಲುಪಿಸಬೇಕಿದೆ.

ಭಾರತೀಯರಲ್ಲಿ ಸ್ಟ್ರೀಟ್ ಸ್ಮಾರ್ಟ್‌ನೆಸ್‌ ಅಥವಾ ಸ್ಥಳೀಯ ಕೌಶಲ್ಯಗಳ ಕೊರತೆ ಇಲ್ಲವೆಂದು ನಾನು ನಂಬುತ್ತೇನೆ. ನಾವು ಜುಗಾಡ್‌ಗಳು ಅಥವಾ ಜುಗ್ಗರು ಎಂದು ಉತ್ತರ ಭಾರತದಲ್ಲಿ ಕರೆಯುತ್ತಾರೆ. ನಾವು ಅನುಭವಿಸುವ ಸಾಕಷ್ಟು ಸಮಸ್ಯೆಗಳಿವೆ ಈ ಜಿಪುಣತನ ಒಳ್ಳೆಯ ಪರಿಹಾರವಾಗಿದೆ! ಆದರೆ ಕೇವಲ ಅಷ್ಟು ಮಾತ್ರ ಸಾಕಾಗುವುದಿಲ್ಲ. ನೀವು ಸರಿಯಾದ ಪ್ರಶ್ನೆ ಕೇಳಿದ್ದಕ್ಕೆ ನಾನು ನಿಮಗೆ ಧನ್ಯವಾದ ಸಲ್ಲಿಸುತ್ತೇನೆ. ಈ ನಿಟ್ಟಿನಲ್ಲೇ ಭಾರತ ಸಿದ್ಧತೆ ನಡೆಸಬೇಕಿದೆ. ಭಾರತ ಮತ್ತು ಖಾಸಗಿ ವಲಯ, ಅಂದರೆ ಸರ್ಕಾರ ಮತ್ತು ಖಾಸಗಿ ವಲಯ ಈ ಕೌಶಲಗಳನ್ನು ಮುಂದೆ ತರಬೇಕಿದೆ.

✍ ಗಿರೀಶ್ ಲಿಂಗಣ್ಣ

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G

Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News