ಬೆಂಗಳೂರು : ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರದಲ್ಲಿನ ಇಲಾಖೆಗಳ ನಡುವೆ, ಸಚಿವರ ನಡುವೆ, ಶಾಸಕರ ನಡುವೆ ಭ್ರಷ್ಟಾಚಾರ ವಿಚಾರದಲ್ಲಿ ಪೈಪೋಟಿ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು. 


COMMERCIAL BREAK
SCROLL TO CONTINUE READING

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಂಗಳೂರಿನ ಕೆಂಗೇರಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ದ ಸಂಪೂರ್ಣ ವಾಗ್ದಾಳಿ ನಡೆಸಿದರು. 


ಕಳೆದ 5 ವರ್ಷಗಳ ಅಧಿಕಾರವಧಿಯಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ರಾಜ್ಯವನ್ನೇ ಲೂಟಿ ಮಾಡಿದೆ. Steel ಬ್ರಿಡ್ಜ್ ಯೋಜನೆ ನೆಪದಲ್ಲಿ ಜನರ ಹಣವನ್ನೇ steal (ಲೂಟಿ) ಮಾಡಲು ಹೊರಟಿತ್ತು. ಆ ಸ್ಟೀಲ್ ಬ್ರಿಡ್ಜ್ ಅಡಿಯಲ್ಲಿ ಹಣದ ಹೊಳೆಯಾಗಿ ಗಂಗಾ ದೇವಿ ಹರಿಯಲು ಹೊರಟಿದ್ದಳು. ಆದರೆ ಬೆಂಗಳೂರು ನಾಗರಿಕರ ಹೋರಾಟದಿಂದಾಗಿ ಆ ಯೋಜನೆಯನ್ನು ಸರ್ಕಾರ ಕೈಬಿಟ್ಟಿತು ಎಂದು ಮೋದಿ ಹೇಳಿದರು.


ಬೆಳಿಗ್ಗೆಯಿಂದ ಬಳ್ಳಾರಿ, ಕಲಬುರ್ಗಿಯಲ್ಲಿ ಆ ಪ್ರದೇಶಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದ ಮೋದಿ, ಸಂಜೆ ಬೆಂಗಳೂರಿನಲ್ಲಿ ಇಡೀ ಬೆಂಗಳೂರಿಗೆ ಕಾಂಗ್ರೆಸ್ ಸರ್ಕಾರ ನೀಡಿದ ಕೊಡುಗೆಗಳೇನು ಎಂಬುದನ್ನು ವ್ಯಂಗ್ಯವಾಗಿ ವಿವರಿಸಿದರು. ಮೋದಿ ಹೇಳಿದ ಕಾಂಗ್ರೆಸ್ ಸರ್ಕಾರದ 5 ಕೊಡುಗೆಗೆಳು ಹೀಗಿವೆ...


1. ಯುವಕರಿಂದ, ಯುವ ಶಕ್ತಿಯಿಂದ ಬೆಂಗಳೂರು ಸಿಲಿಕಾನ್ ವ್ಯಾಲಿ ಎಂದೇ ಗುರುತಿಸಿಕೊಂದಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 5 ವರ್ಷಗಳಲ್ಲಿ ಬೆಂಗಳೂರನ್ನು 'Valley of Sin' ಪಾಪದ ಕಣಿವೆಯಾಗಿ ಮಾರ್ಪಡಿಸಿದೆ. 


2. ಪ್ರಕೃತಿ ಪ್ರೇಮಿಗಳು, ಬೆಂಗಳೂರಿನ ಆಡಳಿತಗಾರರು ಬೆಂಗಳೂರನ್ನು ಬಹಳ ವರ್ಷಗಳಿಂದ ಗಾರ್ಡೆನ್ ಸಿಟಿ ಮಾಡಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಈ 5 ವರ್ಷದಲ್ಲಿ ಬೆಂಗಳೂರನ್ನು ಗಾರ್ಬೇಜ್ ಸಿಟಿ ಮಾಡಿದೆ. ಎಲ್ಲೆಂದರಲ್ಲಿ ಕಸ, ಕಡ್ಡಿಗಳು ಕಂಡು ಕೊಳಚೆ ಪ್ರದೇಶವಾಗಿ ಪರಿವರ್ತನೆ ಮಾಡಿದೆ.


3. ಬೆಂಗಳೂರಿನ ಯುವಕರು ಬೆಂಗಳೂರನ್ನು ಇಡೀ ವಿಶ್ವವೇ ಗುರುತಿಸುವಂತೆ ಕಂಪ್ಯೂಟರ್ ರಾಜಧಾನಿಯಾಗಿ ಮಾಡಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಬೆಂಗಳೂರನ್ನು ಕ್ರೈಂ ಸಿಟಿ ಆಗಿ ಮಾಡಿದೆ. ವಿಶ್ವದಲ್ಲಿ ಭಾರತದ ಶ್ರೇಯಾಂಕ ಹೆಚ್ಚಾಗುತ್ತಿದ್ದರೂ, ರಾಜ್ಯದಲ್ಲಿ ಕ್ರೈಂ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಬೆಂಗಳೂರಿಗೆ ಬರಲು ಜನ ಹಿಂಜರಿಯುತ್ತಿದ್ದಾರೆ. 


4. ಬೆಂಗಳೂರಿನಲ್ಲಿ ಕಾಸ್ಮೊಪಾಲಿಟನ್ ಸಂಸ್ಕೃತಿ ಇತ್ತು. ಆದರೆ ಕಾಂಗ್ರೆಸ್ ಸರ್ಕಾರ ಗೊಂದಲದ ಗೂಡಾಗಿಸಿದೆ. ಕಾಂಗ್ರೆಸ್ ಸರ್ಕಾರ ಇಲ್ಲಿನ ಹೊತ್ತಿ ಉರಿಯುತ್ತಿರುವ ಕೆರೆಗಳನ್ನು ರಕ್ಷಿಸುವ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಒಂದು ಕಾಲದಲ್ಲಿ ಬೆಂಗಳೂರು "city of lakes" ಆಗಿತ್ತು. ಆದರೆ, ಈ ಸರ್ಕಾರ ಬೆಂಗಳೂರನ್ನು "city of burning lakes" ಮಾಡಿದೆ.


5. ಇಡೀ ವಿಶ್ವದಲ್ಲೇ ಬೆಂಗಳೂರು Sartup hub ಎಂದೇ ಖ್ಯತಿಯಾಗಿತ್ತು. ಆದರೆ, ಈಗ Pot of Hub(ಗುಂಡಿಗಳ ನಗರ) ಆಗಿ ಕಾಂಗ್ರೆಸ್ ಮಾಡಿದೆ. ಇದರಿಂದ ಸುಗಮ ಸಂಚಾರ ಅಸಾಧ್ಯವಾಗಿದ್ದು, ಹಲವರು ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದು ನರೇಂದ್ರ ಮೋದಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 


ಹಾಗಾಗಿ ಸ್ವಚ್ಛ, ಸುಂದರ, ಸುರಕ್ಷಿತ ಕರ್ನಾಟಕ ನಿರ್ಮಾಣಕ್ಕೆ, ಕರ್ನಾಟಕದ ಭವಿಷ್ಯವನ್ನು ಉಜ್ವಲಗೊಳಿಸುವ ಸುವರ್ಣಾವಕಾಶ ನಿಮ್ಮ ಕೈಲಿದೆ. ಮೇ 12ರಂದು ಕಮಲದ ಚಿಹ್ನೆಗೆ ಮತ ಹಾಕುವ ಮೂಲಕ ಭ್ರಷ್ಟಾಚಾರಕ್ಕೆ ಅಂತ್ಯ ಹಾಡಿ. ಕಾಂಗ್ರೆಸ್ ಪಕ್ಷದವರು ಈ ಬಾರಿ ಚುನಾವಣೆಯಲ್ಲಿ ತ್ರಿಶಂಕು ಫಲಿತಾಂಶ ಬರುತ್ತದೆ ಎದ್ನು ವದಂತಿ ಹಬ್ಬಿಸುತ್ತಿದ್ದಾರೆ. ಇದರ ಅರ್ಥ ಬಿಜೆಪಿ ಸಂಪೂರ್ಣ ಬಹುಮತದಿಂದ ಗೆಲ್ಲುತ್ತೆ ಎಂದು ಅರ್ಥ ಎಂದು ಹೇಳಿದ ಮೋದಿ, ಕರ್ನಾಟಕದ ನಾಲ್ಕೂ ದಿಕ್ಕುಗಳಲ್ಲಿ ಬಿಜೆಪಿ ಪರ ಎದ್ದಿರುವ ಅಲೆಯಿಂದ 'ಕಾಂಗ್ರೆಸ್ ಮುಕ್ತ ಕರ್ನಾಟಕ'ವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.