ಕೇಂದ್ರದ ರೈತಪರ ಯೋಜನೆಗೆ ಶೇ.50 ಹಣ ಭರಿಸಿರುವುದು ಕರ್ನಾಟಕ ಸರ್ಕಾರ: ಮೋದಿಗೆ ಸಿದ್ದು ತಿರುಗೇಟು
ಪ್ರಧಾನಿ ಮೋದಿ ಅವರು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ಶೇ.50 ಹಣವನ್ನು ಭರಿಸಿರುವುದು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎಂದು ತಿರುಗೇಟು ನೀಡಿದ್ದಾರೆ.
ಬೆಂಗಳೂರು : ಪ್ರಧಾನಿ ಮೋದಿ ಅವರು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ಕರ್ನಾಟಕ ಸರ್ಕಾರ ಯಾವುದೇ ಸಹಕಾರ ನೀಡಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಈ ಯೋಜನೆಗೆ ಶೇ.50 ಹಣವನ್ನು ಭರಿಸಿರುವುದು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎಂದು ತಿರುಗೇಟು ನೀಡಿದ್ದಾರೆ.
ಇಂದು ಬೆಳಿಗ್ಗೆ ಪ್ರಧಾನಿ ಮೋದಿ ಅವರು ಬಿಜೆಪಿ ಕರ್ನಾಟಕ ರೈತ ಮೋರ್ಚಾ ಕಾರ್ಯಕರ್ತರೊಂದಿಗೆ ನಮೋ ಆಪ್ ಮೂಲಕ ನಡೆಸಿದ ಸಂವಾದದಲ್ಲಿ ಮಾತನಾಡುತ್ತಾ ಕರ್ನಾಟಕದಲ್ಲಿ ಫಸಲ್ ಬಿಮಾ ಯೋಜನೆಯ ಅನುಷ್ಟಾನದ ಬಗ್ಗೆ, ರಾಜ್ಯ ಸರ್ಕಾರದ ನಿರಾಸಕ್ತಿಯ ಬಗ್ಗೆ ದೂರು ಬರುತ್ತಿದ್ದವು. ಒಂದು ವೇಳೆ ಬರಗಾಲದಲ್ಲಿ ರಾಜ್ಯ ಸರ್ಕಾರ ಸಕ್ರಿಯವಾಗಿ ಕೆಲಸ ಮಾಡಿದ್ದಿದ್ದರೆ ರೈತರ ಹಲವಾರು ಸಂಕಷ್ಟಗಳಿಗೆ ಪರಿಹಾರ ಸಿಗುತ್ತಿತ್ತು. ಆದರೆ, ಪ್ರಧಾನ್ ಮಂತ್ರಿ ಫಸಲ್ ಬಿಮಾ ಯೋಜನಾ ಇಂದ ರೈತರಿಗೆ ಸಾಕಷ್ಟು ಲಾಭವಿದೆ. ಆದರೆ ಕರ್ನಾಟಕದಲ್ಲಿನ ಸಿದ್ದರಾಮಯ್ಯ ಸರ್ಕಾರ ಈ ಯೋಜನೆಯನ್ನು ಜನರಿಗೆ ಕಲ್ಪಿಸುವ ಕೆಲಸಮಾಡಿಲ್ಲ. ಅಲ್ಲದೆ, ಬಿಜೆಪಿ ಸಂಸದರು ಈ ನಿಟ್ಟಿನಲ್ಲಿ ಕೆಲಸಕ್ಕೆ ಮುಂದಾದಾಗ ಸರಿಯಾದ ಸಹಕಾರವನ್ನೂ ನೀಡದೆ, ಕಾಂಗ್ರೆಸ್ ರೈತರನ್ನು ಕಡೆಗಣಿಸಿದೆ ಎಂದು ಹೇಳಿದ್ದರು.
ಇದೀಗ ಇದ್ದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರಧಾನಿ ಫಸಲ್ ಬಿಮಾ ಯೋಜನೆಗೆ ಕರ್ನಾಟಕ ಸರ್ಕಾರ ಶೇ.50 ವೆಚ್ಚವನ್ನು ಭರಿಸಿದೆ. ಇಡೀ ದೇಶದಲ್ಲೇ ವಿಮೆಯ ಮೊತ್ತವನ್ನು ರೈತರ ಖಾತೆಗೆ ನೇರವಾಗಿ ಪಾವತಿಸಲು ಐಟಿ ನಿಯೋಜಿಸಿದ ಏಕೈಕ ಸರ್ಕಾರ ಎಂದರೆ ಅದು ಕರ್ನಾಟಕ ಸರ್ಕಾರ. ಅಲ್ಲದೆ, ಬೆಳೆ ವಿಮೆ ಯೋಜನೆಯೂ ಕೂಡ ಈ ಹಿಂದೆ ಯುಪಿಎ ಸರ್ಕಾರ ಜಾರಿಗೊಳಿಸಿದ ಯೋಜನೆಯೇ ಹೊರತು ನಿಮ್ಮ ಸರ್ಕಾರ ಅಲ್ಲ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.