ಚುನಾವಣೋತ್ತರ ಸಮೀಕ್ಷೆಗಳ ಚಿಂತೆ ಬಿಡಿ, ಅವು ಮನೋರಂಜನೆಗಾಗಿ ಅಷ್ಟೇ : ಸಿದ್ದರಾಮಯ್ಯ
ಎಕ್ಸಿಟ್ ಪೋಲ್ ಸಮೀಕ್ಷೆಗಳು ಬಿಜೆಪಿಗೆ ಬಹುಮತ, ಅತಂತ್ರ ಸರ್ಕಾರ ರಚನೆ ಎಂದೆಲ್ಲಾ ಹೇಳಿದ್ದು, ಇದರಿಂದ ಜನತೆ ವಿಚಲಿತರಾಗದಂತೆ ಸಿದ್ದರಾಮಯ್ಯ ಹೇಳಿದ್ದಾರೆ.
ನವದೆಹಲಿ: ಕರ್ನಾಟಕ ವಿಧಾನಸಭೆಗೆ ಶನಿವಾರ ನಡೆದ ಚುನಾವಣೆ ಬೆನ್ನಲ್ಲೇ ಹೊರಬಿದ್ದ ಬಹುತೇಕ ಎಕ್ಸಿಟ್ ಪೋಲ್ ಸಮೀಕ್ಷೆಗಳು ಬಿಜೆಪಿಗೆ ಬಹುಮತ, ಅತಂತ್ರ ಸರ್ಕಾರ ರಚನೆ ಎಂದೆಲ್ಲಾ ಹೇಳಿದ್ದು, ಇದರಿಂದ ಜನತೆ ವಿಚಲಿತರಾಗದಂತೆ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ: ಪೂರ್ಣಗೊಂಡ ಮತದಾನ; ಮೇ 15ಕ್ಕೆ ಫಲಿತಾಂಶ
ರಾಷ್ಟ್ರೀಯ ಸುದ್ದಿವಾಹಿನಿಗಳಾದ ಎಬಿಪಿ, ಸಿ- ವೋಟರ್, ನ್ಯೂಸ್ ಎಕ್ಸ್ ಸಿಎನ್ಎಕ್ಸ್, ಚಾಣಕ್ಯ, ರಿಪಬ್ಲಿಕ್ ಟಿವಿ ಸಮೀಕ್ಷೆಗಳು ಬಿಜೆಪಿಗೆ 100-110 ಸ್ಥಾನಗಳನ್ನು ನೀಡಿವೆ. ಮತ್ತೊಂದೆಡೆ ಟೈಮ್ಸ್ ನೌ, ಎನ್ಡಿಟಿವಿ, ಆಜ್ ತಕ್ ಸುದ್ದಿ ವಾಹಿನಿಗಳು ಕಾಂಗ್ರೆಸ್ ಪಕ್ಷ 100-118 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿವೆ. ಆದರೆ, ಯಾವ ಸುದ್ದಿವಾಹಿನಿಗಳ ಚುನಾವಣೋತ್ತರ ಸಮೀಕ್ಷೆಗಳೂ ಕಾಂಗ್ರೆಸ್ ಅಥವಾ ಬಿಜೆಪಿ ಸಂಪೂರ್ಣ ಬಹುಮತ ಗಳಿಸುವ ಭವಿಷ್ಯ ನುಡಿದಿಲ್ಲ. ಹಾಗಾಗಿ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆಯೇ ಎಂಬ ಆತಂಕ ಮನೆ ಮಾಡಿದೆ.
ಕರ್ನಾಟಕ ವಿಧಾನಸಭಾ ಚುನಾವಣೋತ್ತರ ಸಮೀಕ್ಷೆ
ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಮತ್ತು ಮುಖ್ಯಮಂತ್ರಿ ಅಭ್ಯರ್ಥಿ ಸಿದ್ದರಾಮಯ್ಯ, ಸುದ್ದಿ ವಾಹಿನಿಗಳ Exit Poll ಬಗ್ಗೆ ಪಕ್ಷದ ಕಾರ್ಯಕರ್ತರು ಹೆಚ್ಚು ತಲೆಕೆಡಿಸಿಕೊಳ್ಳುವುದು ಬೇಡ. ಎಲ್ಲರೂ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ದಣಿದಿದ್ದೀರಿ. ಮೇ 15ರವರೆಗೆ ಕಾಯೋಣ. ಎಲ್ಲರ ಆಶೀರ್ವಾದದಿಂದ ಒಳ್ಳೆಯದೇ ಆಗುತ್ತದೆ. ನಾವು ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.