ಸಿಎಂ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣ ಬಳಸುತ್ತಿಲ್ಲ ಎಂಬ ಹೇಳಿಕೆ ಸುಳ್ಳು-ಬಿಜೆಪಿ
ಸಿದ್ದರಾಮಯ್ಯ ಕರ್ನಾಟಕದ ಜನರಿಗೆ 5 ವರ್ಷಗಳಿಂದ ಸುಳ್ಳು ಹೇಳಿದ್ದಾರೆ. ಅವರು ಮುಖ್ಯ ಚುನಾವಣಾ ಅಧಿಕಾರಿಗಳಿಗೂ ಸುಳ್ಳು ಹೇಳುವ ಮೂಲಕ ತಮ್ಮ ಸುಳ್ಳಿನ ಪರಂಪರೆ ಮುಂದುವರೆಸಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿದೆ.
ಬೆಂಗಳೂರು: ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸುವಾಗ ಕೊಟ್ಟಿರುವ ಪ್ರಮಾಣ ಪತ್ರದಲ್ಲಿ ಸಾಮಾಜಿಕ ಜಾಲ ತಾಣ ಬಳಸುತ್ತಿಲ್ಲ ಎಂದು ಮುಖ್ಯಮಂತ್ರಿಯವರು ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಇನ್ನು ಈ ಬಗ್ಗೆ ಟ್ವಿಟ್ ಮಾಡಿರುವ ಕರ್ನಾಟಕ ಬಿಜೆಪಿ, ಸಿದ್ದರಾಮಯ್ಯ ಕರ್ನಾಟಕದ ಜನರಿಗೆ 5 ವರ್ಷಗಳಿಂದ ಸುಳ್ಳು ಹೇಳಿದ್ದಾರೆ. ಅವರು ತಾವು ಯಾವುದೇ ಟ್ವಿಟ್ಟರ್ ಮತ್ತು ಫೇಸ್ ಬುಕ್ ಖಾತೆ ಹೊಂದಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿಗಳಿಗೂ ಸುಳ್ಳು ಹೇಳುವ ಮೂಲಕ ತಮ್ಮ ಸುಳ್ಳಿನ ಪರಂಪರೆ ಮುಂದುವರೆಸಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ ಅವರ ಮಾಧ್ಯಮ ಕಾರ್ಯದರ್ಶಿ, ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸುವಾಗ ಕೊಟ್ಟಿರುವ ಪ್ರಮಾಣ ಪತ್ರದಲ್ಲಿ ಸಾಮಾಜಿಕ ಜಾಲ ತಾಣ ಬಳಸುತ್ತಿಲ್ಲ ಎಂದು ಮುಖ್ಯಮಂತ್ರಿಯವರು ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಸಾಮಾಜಿಕ ಜಾಲ ತಾಣದಲ್ಲಿ ಮುಖ್ಯಮಂತ್ರಿಯವರು ಸರ್ಕಾರಿ ಹಾಗೂ ಖಾಸಗಿ ಖಾತೆಯನ್ನು ನಿರ್ವಹಿಸುತ್ತಿದ್ದರು. ನೀತಿ ಸಂಹಿತೆ ಘೋಷಣೆಯಾದ ಬಳಿಕ ಸರ್ಕಾರದ ಪರವಾಗಿದ್ದ ಖಾತೆ ಸ್ಥಗಿತವಾಗಿದೆ. ವೈಯಕ್ತಿಕ ಖಾತೆ ಮಾತ್ರ ಮುಂದುವರಿದಿದೆ.
ಈ ಸಂಬಂಧ ಪರಿಷ್ಕೃತ ಪ್ರಮಾಣ ಪತ್ರವನ್ನು ಚುನಾವಣಾಧಿಕಾರಿಗಳಿಗೆ ಸೋಮವಾರ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.