ಜ.13ರಿಂದ ಸುಪ್ರಸಿದ್ಧ ಸುತ್ತೂರು ಜಾತ್ರಾ ಮಹೋತ್ಸವ
ಜ.13ರಂದು ಬೆಳಿಗ್ಗೆ 10.30ಕ್ಕೆ ಸಾಂಸ್ಕೃತಿಕ ಮೇಳ, ಮಾಹಿತಿ ಕೇಂದ್ರ, ರಂಗೋಲಿ ಸ್ಪರ್ಧೆ ಹಾಗೂ ಸೋಬಾನೆ ಪದಗಳ ಸ್ಪರ್ಧೆ ನಡೆಯಲಿದೆ. ಸಂಜೆ 4ಕ್ಕೆ ವಸ್ತುಪ್ರದರ್ಶನ ಹಾಗೂ ಕೃಷಿಮೇಳಕ್ಕೆ ಚಾಲನೆ ದೊರೆಯಲಿದೆ.
ಮೈಸೂರು: ಸುಪ್ರಸಿದ್ಧ ಸುತ್ತೂರಿನ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವವು ಇದೇ ಜ.13 ರಿಂದ 18ರ ವರೆಗೆ ನಡೆಯಲಿದೆ.
ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಈ ಜಾತ್ರಾ ಮಹೋತ್ಸವ ನಡೆಯಲಿದ್ದು, ಈ ಬಾರಿ ಜಾತ್ರಾ ಮಹೋತ್ಸವದ ಅಂಗವಾಗಿ ನೂತನ ರಥ ನಿರ್ಮಾಣ ಮಾಡಲಾಗಿದೆ.
ಜ.13ರಂದು ಬೆಳಿಗ್ಗೆ 10.30ಕ್ಕೆ ಸಾಂಸ್ಕೃತಿಕ ಮೇಳ, ಮಾಹಿತಿ ಕೇಂದ್ರ, ರಂಗೋಲಿ ಸ್ಪರ್ಧೆ ಹಾಗೂ ಸೋಬಾನೆ ಪದಗಳ ಸ್ಪರ್ಧೆ ನಡೆಯಲಿದೆ. ಸಂಜೆ 4ಕ್ಕೆ ವಸ್ತುಪ್ರದರ್ಶನ ಹಾಗೂ ಕೃಷಿಮೇಳಕ್ಕೆ ಚಾಲನೆ ದೊರೆಯಲಿದೆ. ಜ.14ರಂದು ಬೆಳಿಗ್ಗೆ 10.15ಕ್ಕೆ ಸಾಮೂಹಿಕ ವಿವಾಹ ಮಹೋತ್ಸವ, ಮಧ್ಯಾಹ್ನ 3ಕ್ಕೆ ರಾಜ್ಯಮಟ್ಟದ ಭಜನಾ ಮೇಳ, ದೇಸಿ ಆಟಗಳು ಹಾಗೂ ದೋಣಿ ವಿಹಾರ ಸೇರಿದಂತೆ ಹಲವು ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.
ಜ.15ರಂದು ಬೆಳಿಗ್ಗೆ 10.15ಕ್ಕೆ ರಥೋತ್ಸವ ನಡೆಯಲಿದ್ದು, ಬಳಿಕ ಧಾರ್ಮಿಕ ಸಭೆ, ಮಧ್ಯಾಹ್ನ 3ಕ್ಕೆ 50ನೇ ದನಗಳ ಜಾತ್ರೆ ಆರಂಭಿಸಲಾಗುವುದು. 16ರಂದು ಬೆಳಿಗ್ಗೆ 10.30ಕ್ಕೆ ಕೃಷಿ ವಿಚಾರಸಂಕಿರಣ, 17ರಂದು ಬೆಳಿಗ್ಗೆ 11ಕ್ಕೆ ಭಜನಾ ಮೇಳದ ಸಮಾರೋಪ ಸಮಾರಂಭ, ಮಧ್ಯಾಹ್ನ 2ಕ್ಕೆ ಕುಸ್ತಿ ಪಂದ್ಯಗಳು, ಸಂಜೆ 4.30ಕ್ಕೆ ದನಗಳ ಜಾತ್ರೆಯ ಸಮಾರೋಪ, 18ರಂದು ಬೆಳಿಗ್ಗೆ 10.30ಕ್ಕೆ ಕೃಷಿಮೇಳದ ಮುಕ್ತಾಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ನಡೆಯಲಿದೆ.
ಆರು ದಿನಗಳ ಜಾತ್ರೆಯಲ್ಲಿ ಪ್ರತಿ ದಿನವೂ ವಿವಿಧ ಪೂಜಾ ಕಾರ್ಯಗಳು, ಮನರಂಜನಾ ಕ್ರೀಡೆಗಳು, ಧರ್ಮಸಭೆ ಹಾಗೂ ಖ್ಯಾತನಾಮರಿಂದ ನಾಟಕ, ಸಂಗೀತ, ನೃತ್ಯ ಕಾರ್ಯಕ್ರಮಗಳೂ ನಡೆಯಲಿವೆ. ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ನೇತೃತ್ವದಲ್ಲಿ ಈ ಜಾತ್ರಾ ಮಹೋತ್ಸವದ ಎಲ್ಲ ಕಾರ್ಯಗಳೂ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.