ನವದೆಹಲಿ: ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಮತ್ತು ಒಂದು ಕಾಲದಲ್ಲಿ ಇತರರ ರಕ್ತಹರಿಸಿದ್ದ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಈಗ ಪ್ರಾಣ ಭಯದಿಂದ ನಡುಗಿದ್ದಾನೆ. ದೆಹಲಿಯ ತಿಹಾರ್ ಜೈಲಿನಲ್ಲಿರುವ ಬಿಷ್ಣೋಯ್, ಸಿಧು ಮುಸೇವಾಲಾ ಹತ್ಯೆ ಪ್ರಕರಣದಲ್ಲಿ ಜೈಲಿನಿಂದ ಹೊರಬಂದರೆ ಪಂಜಾಬ್ ಪೊಲೀಸರು ಎಲ್ಲಿ ಎನ್‌ಕೌಂಟರ್ ಮಾಡುತ್ತಾರೋ ಅನ್ನೋ ಭಯದಲ್ಲಿದ್ದಾನಂತೆ. ಈ ಆತಂಕದಿಂದ ಆತ ಈ ಹಿಂದೆ ದೆಹಲಿ ಹೈಕೋರ್ಟ್‌ನ ಮೊರೆ ಹೋಗಿದ್ದನಂತೆ. ಅಲ್ಲಿಂದ ಅರ್ಜಿ ತಿರಸ್ಕೃತಗೊಂಡ ಬಳಿಕ ಇದೀಗ ಪಂಜಾಬ್-ಹರಿಯಾಣ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾನೆ.


COMMERCIAL BREAK
SCROLL TO CONTINUE READING

ನನ್ನ ಜೀವಕ್ಕೆ ಅಪಾಯವಿದೆ: ಲಾರೆನ್ಸ್ ಬಿಷ್ಣೋಯ್


ಜೈಲಿನ ಹೊರಗೆ ನನಗೆ ಜೀವ ಬೆದರಿಕೆ ಇದೆ ಎಂದು ಲಾರೆನ್ಸ್ ಬಿಷ್ಣೋಯ್ ತಮ್ಮ ವಕೀಲರಾದ ಸಂಗ್ರಾಮ್ ಸರೋನ್ ಮತ್ತು ಶುಭ್‌ಪ್ರೀತ್ ಕೌರ್ ಮೂಲಕ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದ್ದಾನೆ. ಆದ್ದರಿಂದ ಮಾನಸಾ ಜಿಲ್ಲೆಯ ಸ್ಥಳೀಯ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಬೇಕು, ಇದರಲ್ಲಿ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಪಂಜಾಬ್ ಪೊಲೀಸರು ವಿಚಾರಣೆಗೆ ವಾರೆಂಟ್ ಹೊರಡಿಸಿದ್ದಾರೆ. ಈ ಪ್ರಕರಣದಲ್ಲಿ ತಾನು ನಿರಪರಾಧಿ ಎಂದು ಬಿಷ್ಣೋಯ್ ತನ್ನ ವಕೀಲರ ಮೂಲಕ ತಿಳಿಸಿದ್ದು, ಪಂಜಾಬ್ ಪೊಲೀಸರು ಬೇಕಾದರೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಬಹುದು ಎಂದು ಹೇಳಿಸಿದ್ದಾನೆ.


ಇದನ್ನೂ ಓದಿ: ಜೀ5 ಚಂದಾದಾರರಿಗೆ ಸಿಹಿ ಸುದ್ದಿ...ನಾಳೆಯಿಂದಲೇ ನೋಡಿ RRR..!


ಪಂಜಾಬ್-ಹರಿಯಾಣ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ


ಲಾರೆನ್ಸ್ ಬಿಷ್ಣೋಯ್ ತನ್ನ ವಕೀಲರ ಮೂಲಕ ತನ್ನ ಜೀವಕ್ಕೆ ಅಪಾಯವಿದ್ದು, ತಾನು ಹೊರಗಡೆ ಕಾಣಿಸಿಕೊಂಡರೆ ಏನು ಬೇಕಾದರೂ ಆಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾನೆ. ಗಾಯಕ ಮೂಸೆವಾಲಾ ಕೊಲೆ ಪ್ರಕರಣದಲ್ಲಿ ತನ್ನನ್ನು ಸಿಲುಕಿಸಲಾಗುತ್ತಿದೆ ಎಂದು 35 ವರ್ಷದ ಬಿಷ್ಣೋಯ್ ಅರ್ಜಿಯಲ್ಲಿ ತಿಳಿಸಿದ್ದಾನೆ. ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ, ಬಲವಂತವಾಗಿ ಮೂಸೆವಾಲಾ ಕೊಲೆ ಪ್ರಕರಣಕ್ಕೆ ಎಳೆದು ತರಲಾಗುತ್ತಿದೆ ಎಂದು ಹೇಳಿದ್ದಾನೆ. ಈತನ ಅರ್ಜಿಯ ಬಗ್ಗೆ ಹೈಕೋರ್ಟ್ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಮತ್ತು ಈ ಪ್ರಕರಣದ ವಿಚಾರಣೆಯನ್ನು ಇನ್ನೂ ನಡೆಸಬೇಕಾಗಿದೆ.


ಎನ್‌ಐಎ ಅಥವಾ ಸಿಬಿಐನಿಂದ ತನಿಖೆ ನಡೆಯಬೇಕು


ಏತನ್ಮಧ್ಯೆ ಪಂಜಾಬ್ ಕಾಂಗ್ರೆಸ್‌ನ ನಿಯೋಗವು ಬುಧವಾರ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರನ್ನು ಭೇಟಿ ಮಾಡಿ ಮೂಸೆವಾಲಾ ಹತ್ಯೆ ಪ್ರಕರಣವನ್ನು ಎನ್‌ಐಎ ಅಥವಾ ಸಿಬಿಐನಿಂದ ತನಿಖೆಗೆ ಒತ್ತಾಯಿಸಿತು. ನಿಯೋಗದ ನೇತೃತ್ವ ವಹಿಸಿರುವ ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಮರೀಂದರ್ ಸಿಂಗ್ ರಾಜಾ ವಾಡಿಂಗ್, ‘ಗಾಯಕನ ಹತ್ಯೆಯು ಸಾಮಾನ್ಯ ಘಟನೆಯಲ್ಲ. ಆದರೆ, ದಾಳಿಕೋರರು ಕಾನೂನಿಗೆ ಹೆದರದೆ ಯೋಜಿತ ಪಿತೂರಿ ನಡೆಸಿ ಗುಂಡಿನ ದಾಳಿ ನಡೆಸಿದ್ದಾರೆಂದು ಹೇಳಿದ್ದಾರೆ. ಈ ಪ್ರಕರಣದಲ್ಲಿ 3 ದಿನ ಕಳೆದರೂ ಆರೋಪಿಗಳ ಬಗ್ಗೆ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿಲ್ಲ.


ಇದನ್ನೂ ಓದಿ: ಕ್ರಿಕೆಟ್ ಕಾಶಿ ಲಾರ್ಡ್ಸ್ ಗ್ರೌಂಡ್ ಇಟ್ಟಿಗೆ ಮೇಲೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೆಸರು..!


ಎಎಪಿ ಸರ್ಕಾರ ರಾಜ್ಯಕ್ಕೆ ವಿನಾಶಕಾರಿ!


ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಜಾ ವಾಡಿಂಗ್, ‘ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಆಮ್ ಆದ್ಮಿ ಪಕ್ಷ(ಎಎಪಿ)ದ ಸರ್ಕಾರವು ರಾಜ್ಯಕ್ಕೆ ‘ವಿನಾಶಕಾರಿ’ಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕೊಲೆ ಪ್ರಕರಣದಿಂದ ರಾಜ್ಯ ಸರ್ಕಾರದ ಮೇಲೆ ಯಾರಿಗೂ ನಂಬಿಕೆ ಇಲ್ಲ, ಹೀಗಾಗಿ ಈ ಕೊಲೆ ಪ್ರಕರಣವು ಯಾವುದಾದರೂ ಕೇಂದ್ರೀಯ ಸಂಸ್ಥೆಯ ಮೂಲಕ ನ್ಯಾಯಯುತ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಈ ನಿಯೋಗದಲ್ಲಿ ಪಂಜಾಬ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಾಜ್ವಾ, ಪಕ್ಷದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಭರತ್ ಭೂಷಣ್ ಆಶು, ರಾಜ್‌ಕುಮಾರ್ ಚಬ್ಬೇವಾಲ್, ಸುಖ್ಜಿಂದರ್ ಸಿಂಗ್ ರಾಂಧವಾ ಮತ್ತು ಬಲ್ಬೀರ್ ಸಿಂಗ್ ಸಿಧು ಇದ್ದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.