ನವದೆಹಲಿ: ನೆರೆ ರಾಷ್ಟ್ರಗಳಾದ ಚೀನಾ, ಪಾಕಿಸ್ತಾನ ಮತ್ತು ನೇಪಾಳದ ಜೊತೆಗೆ ಏರ್ಪಟ್ಟ ಬಿಕ್ಕಟ್ಟಿನ ನಡುವೆಯೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ದೊಡ್ಡ ಘೋಷಣೆಯೊಂದನ್ನು ಮಾಡಿದ್ದಾರೆ. ರಕ್ಷಣಾ ಕ್ಷೇತ್ರದಲ್ಲಿನ ಒಟ್ಟು 101 ಉಪಕರಣಗಳ ಆಮದನ್ನು ಭಾರತ ನಿಷೇಧಿಸಿದೆ ಎಂದು ರಾಜನಾಥ್ ಸಿಂಗ್ ಘೋಷಿಸಿದ್ದಾರೆ. ರಕ್ಷಣಾ ಕ್ಷೇತ್ರದಲ್ಲಿ ತೆಗೆದುಕೊಂಡ ಹಲವು ನಿರ್ಧಾರಗಳಿಗೆ ಸಂಬಂಧಿಸಿದ ಟ್ವೀಟ್ ಮಾಡಿರುವ ಸಿಂಗ್,  ರಕ್ಷಣಾ ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿಯಾಗಲಿದೆ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಉತ್ಪಾದನೆಯನ್ನು ಹೆಚ್ಚಿಸಲಾಗುವುದು ಎಂದು ಅವರು ಘೋಷಿಸಿದ್ದಾರೆ. ನಿಷೇಧಿಸಲ್ಪಟ್ಟ ಈ 101 ರಕ್ಷಣಾ ಸಾಧನಗಳನ್ನು ಭಾರತದಲ್ಲಿಯೇ ತಯಾರಿಸಲಾಗುವುದು ಮತ್ತು ದೇಶೀಯ ಕಂಪನಿಗಳಿಂದ ಅವುಗಳನ್ನು 52 ಸಾವಿರ ಕೋಟಿ ರೂ.ಗೆ ಖರೀದಿಸಲಾಗುವುದು ಎಂದು ಸಿಂಗ್ ಹೇಳಿದ್ದಾರೆ.



COMMERCIAL BREAK
SCROLL TO CONTINUE READING

ರಕ್ಷಣಾ ಸಚಿವಾಲಯವು ಈಗ ಸ್ವಾವಲಂಬಿ ಭಾರತ ಅಭಿಯಾನಕ್ಕೆ ಒತ್ತು ನೀಡಲು ಸಿದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ನಿರ್ಧಾರದಿಂದ ಭಾರತದ ರಕ್ಷಣಾ ಉದ್ಯಮಕ್ಕೆ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಯ ಅವಕಾಶ ಸಿಗಲಿದೆ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ. 



ಈ ಆಮದು ನಿಷೇಧಿಸಲು ಪಟ್ಟಿಗೆ ಹೆಚ್ಚಿನ ರಕ್ಷಣಾ ಉಪಕರಣಗಳನ್ನು ಹಂತಹಂತವಾಗಿ ಸೇರಿಸಲಾಗುವುದು ಹಾಗೂ ಆಮದು ನಿಷೇಧಕ್ಕೆ ಒಳಪಟ್ಟ ಮಿಲಿಟರಿ ಉಪಕರಣಗಳನ್ನು ದೇಶೀಯ ಮಟ್ಟದಲ್ಲಿ ಉತ್ಪಾದನೆ ಮಾಡಲು ಗಡುವನ್ನು ಖಚಿತಪದಿಸಲಾಗುವುದು ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.



"ಆಮದು ನಿಷೇಧಕ್ಕೆ ಒಳಪಟ್ಟ ರಕ್ಷಣಾ ಉಪಕರಣಗಳ ಪಟ್ಟಿಯಲ್ಲಿ ಸೇರಿಸಲಾದ 101 ಉಪಕರಣಗಳಲ್ಲಿ ತೋಪು, ಅಸಾಲ್ಟ್ ರೈಫಲ್, ಸರಕು ಸಾಗಾಣಿಕೆಯ ವಿಮಾನಗಳು ಶಾಮೀಲಾಗಿವೆ. 101 ರಕ್ಷಣಾ ಉಪಕರಣಗಳ ನಿಷೇಧದಿಂದ ಭಾರತೀಯ ರಕ್ಷಣಾ ಉದ್ಯಮಕ್ಕೆ ಭಾರಿ ಲಾಭವಾಗಲಿದೆ" ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.