ನವದೆಹಲಿ: ಪ್ರತಿಪಕ್ಷಗಳ ವಿರೋಧದ ನಡುವೆಯೂ ಮೋದಿ ನೇತೃತ್ವದ ಸರ್ಕಾರ ಐತಿಹಾಸಿಕ ನಿರ್ಣಯವಾದ ಜಮ್ಮು-ಕಾಶ್ಮೀರ ಪುನರ್ ರಚನೆ ಮಸೂದೆ ಸೋಮವಾರ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ.


COMMERCIAL BREAK
SCROLL TO CONTINUE READING

ಮಸೂದೆಯ ಪರವಾಗಿ 125 ಮತಗಳು ಬಂದಿದ್ದರೆ, 61 ಮತಗಳು ವಿರೋಧವಾಗಿ ಚಲಾಯಿಸಲಾಗಿದೆ. ರಾಜ್ಯಸಭಾ ಸಭಾಧ್ಯಕ್ಷ ಎಂ.ವೆಂಕಯ್ಯನಾಯ್ಡು ಅವರು ಮಸೂದೆ ಅಂಗೀಕಾರವನ್ನು ಘೋಷಿಸಿ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು. ಕೇಂದ್ರ ಸರ್ಕಾರ ಈ ಮಸೂದೆಯನ್ನು ಬುಧವಾರ ಲೋಕಸಭೆಯಲ್ಲಿ ಮಂಡಿಸಲಿದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರ ಆಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಗೃಹ ಸಚಿವ ಅಮಿತ್ ಶಾಗೆ ಅಭಿನಂದಿಸಿದರು.


ಇದಕ್ಕೂ ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರತಿಪಕ್ಷ ನಾಯಕರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಸಾಮಾನ್ಯವಾದ ಕೂಡಲೇ ಪೂರ್ಣ ರಾಜ್ಯ ಸ್ಥಾನಮಾನ ನೀಡಲಾಗುವುದು ಎಂದು ಸ್ಪಷ್ಟಪಡಿಸಿ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ಅನುಚ್ಛೇದ 370 ಮತ್ತು 35 ಎ ರದ್ದುಗೊಳಿಸಲಾಗಿದೆ. ಹೊಸ ಕಾನೂನಿನ ಪ್ರಕಾರ, ಸೆಕ್ಷನ್ 370 ರ ಎಲ್ಲಾ ವಿಭಾಗಗಳು ರಾಜ್ಯದಲ್ಲಿ ಅನ್ವಯಿಸುವುದಿಲ್ಲ ಎಂದು ಘೋಷಿಸಿದರು. 


ಈ ಮಸೂದೆಯ ಪ್ರಕಾರ, ಇದುವರೆಗೂ ಒಂದು ರಾಜ್ಯವಾಗಿ ಕಾರ್ಯನಿರ್ವಹಿಸುತ್ತಿದ್ದ ಜಮ್ಮು ಮತ್ತು ಕಾಶ್ಮೀರ, ಇನ್ಮುಂದೆ ವಿಧಾನಸಭೆಯನ್ನು ಒಳಗೊಂಡ ಕೇಂದ್ರಾಡಳಿತ ಪ್ರದೇಶವಾಗಲಿದೆ. ಅಂತೆಯೇ ಲಡಾಖ್ ಅನ್ನು ಜಮ್ಮು-ಕಾಶ್ಮೀರದಿಂದ ಬೇರ್ಪಡಿಸಿ ಅದನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಲಾಗಿದೆ. ಈ ಮೂಲಕ ಜಮ್ಮು-ಕಾಶ್ಮೀರದಲ್ಲಿ ವಿಧಾನಸಭೆಗೆ ಅವಕಾಶ ನೀಡಲಾಗಿದೆ, ಆದರೆ ಲಡಾಖ್ ನಲ್ಲಿ ಕೇಂದ್ರ ಸರ್ಕಾರವೇ ಆಡಳಿತ ನಡೆಸಲಿದೆ.