ಬಿಜೆಪಿ ಚುನಾವಣೆ ಲಾಭಕ್ಕಾಗಿ ಧರ್ಮವನ್ನು ಸಾಧನವಾಗಿ ಬಳಸಿಕೊಳ್ಳುತ್ತಿದೆ -ಮಮತಾ ಬ್ಯಾನರ್ಜೀ
ಬಿಜೆಪಿ ಚುನಾವಣೆಯಲ್ಲಿ ಜನರನ್ನು ತಪ್ಪು ದಾರಿಗೆಳೆಯಲು ಧರ್ಮವನ್ನು ಬಳಸಿಕೊಳ್ಳುತ್ತಿದೆ ಎಂದು ಮಮತಾ ಬ್ಯಾನರ್ಜೀ ಬಿಜೆಪಿ ವಿರುದ್ದ ಕಿಡಿ ಕಾರಿದ್ದಾರೆ.
ನವದೆಹಲಿ: ಬಿಜೆಪಿ ಚುನಾವಣೆಯಲ್ಲಿ ಜನರನ್ನು ತಪ್ಪು ದಾರಿಗೆಳೆಯಲು ಧರ್ಮವನ್ನು ಬಳಸಿಕೊಳ್ಳುತ್ತಿದೆ ಎಂದು ಮಮತಾ ಬ್ಯಾನರ್ಜೀ ಬಿಜೆಪಿ ವಿರುದ್ದ ಕಿಡಿ ಕಾರಿದ್ದಾರೆ.
ರಾಮನವಮಿ ಪ್ರಯುಕ್ತ ಪಶ್ಚಿಮ ಬಂಗಾಳದಾದ್ಯಂತ ಬಿಜೆಪಿ ರ್ಯಾಲಿಯನ್ನು ಹಮ್ಮಿಕೊಳ್ಳುವ ಮೂಲಕ ರಾಜ್ಯದಲ್ಲಿನ ಶಾಂತಿ ವಾತಾವರಣಕ್ಕೆ ಭಂಗ ತರಲು ಯತ್ನಿಸುತ್ತಿದೆ ಎಂದು ಮಮತಾ ಆರೋಪಿಸಿದರು.
"ಬಿಜೆಪಿಯು ಧರ್ಮದ ಹೆಸರಿನಲ್ಲಿ ಜನರನ್ನು ತಪ್ಪು ದಾರಿ ಮಾಡಿಕೊಡುತ್ತದೆ, ಚುನಾವಣೆಗಿಂತ ಮುಂಚೆ ಅವರು ಬಂಗಾಳದಲ್ಲಿ ಜನರನ್ನು ವಿಭಜಿಸಲು ಒಂದು ಸಾಧನವಾಗಿ ಬಳಸುತ್ತಿದ್ದಾರೆ.ಬಂಗಾಳದ ಸಂಸ್ಕೃತಿ ಹಿಂಸೆಯ ರಾಜಕೀಯವನ್ನು ಎಂದಿಗೂ ಬೆಂಬಲಿಸುವುದಿಲ್ಲ ಅವರು ಕತ್ತಿಗಳು ಮತ್ತು ಗರಗಸಗಳೊಂದಿಗೆ ರ್ಯಾಲಿಯನ್ನು ಕೈಗೊಳ್ಳುತ್ತಿದ್ದಾರೆ" ಎಂದು ಮಮತಾ ಬ್ಯಾನರ್ಜೀ ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
"ಯಾರ ಕುತ್ತಿಗೆಯನ್ನು ಕತ್ತಿಗಳಿಂದ ಕತ್ತರಿಸಬೇಕೆಂದು ನೀವು ಬಯಸುವಿರಾ? ಯಾರ ತಲೆ ಮುಖವನ್ನು ಹೊಡೆಯಲು ಬಯಸುತ್ತೀರಿ?" ಎಂದು ಪಕ್ಷದ ದಾರ್ಜೀಲಿಂಗ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಮರ್ ಸಿಂಗ್ ರೈ ಅವರ ಪರ ಪ್ರಚಾರದ ರ್ಯಾಲಿಯಲ್ಲಿ ಪ್ರಶ್ನಿಸಿದರು.
ಇದೇ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ ಎನ್ಆರ್ಸಿಗೆ ಅವಕಾಶ ನೀಡುವುದಿಲ್ಲ ಎಂದು ಪುನರುಚ್ಚರಿಸಿದರು.