ನವದೆಹಲಿ: ಜಮ್ಮು ಮತ್ತು ಕಾಶ್ಮೀರದಿಂದ ಆರ್ಟಿಕಲ್ 370 ನ್ನು ತೆಗೆದುಹಾಕಿದಾಗಿನಿಂದ, ಭಯೋತ್ಪಾದಕರು ದಾಳಿಗೆ ಸಂಚು ರೂಪಿಸುತ್ತಿದ್ದರೆ, ಮತ್ತೊಂದೆಡೆ, ಅಯೋಧ್ಯೆಯ ತೀರ್ಪಿಗೂ ಬೆದರಿಕೆ ಇದೆ. ಅಯೋಧ್ಯೆಯ ತೀರ್ಪಿನ ಮೊದಲು, ಪಾಕಿಸ್ತಾನದ ಭಯೋತ್ಪಾದಕ ಗುಂಪುಗಳು ಉತ್ತರಪ್ರದೇಶದಲ್ಲಿ ದೊಡ್ಡ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿವೆ. ಈ ಬಗ್ಗೆ ಜೀ ನ್ಯೂಸ್ ಗೆ ಮಾಹಿತಿ ಲಭ್ಯವಾಗಿದೆ. ಗುಪ್ತಚರ ಸಂಸ್ಥೆಗಳಿಂದ ಲಭ್ಯವಾಗಿರುವ್ ಮಾಹಿತಿ ಪ್ರಕಾರ,  ಏಳು ಭಯೋತ್ಪಾದಕರ ಗುಂಪು ನೇಪಾಳ ಮೂಲಕ ಉತ್ತರ ಪ್ರದೇಶವನ್ನು ಪ್ರವೇಶಿಸಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಶ್ರೀ ರಾಮ ಮಂದಿರದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ಹೊರಬರುವ ಮೊದಲು ಭದ್ರತಾ ಸಂಸ್ಥೆಗಳು ಗುಪ್ತಚರ ಸಂಸ್ಥೆಗಳ ಈ ಮಾಹಿತಿಯನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿವೆ. ಅಯೋಧ್ಯೆ ಮತ್ತು ಗೋರಖ್‌ಪುರದಲ್ಲಿ ಭಯೋತ್ಪಾದಕರು ತಲೆಮರೆಸಿಕೊಂಡಿರುವ ಸಾಧ್ಯತೆ ಇದೆ. ಏಳು ಭಯೋತ್ಪಾದಕರಲ್ಲಿ ಐವರು ಭಯೋತ್ಪಾದಕರನ್ನು ಗುರುತಿಸಲಾಗಿದೆ. ಮೊಹಮ್ಮದ್ ಯಾಕೂಬ್, ಅಬು ಹಮ್ಜಾ, ಮೊಹಮ್ಮದ್ ಶಹಬಾಜ್, ನಿಸಾರ್ ಅಹ್ಮದ್ ಮತ್ತು ಮೊಹಮ್ಮದ್ ಕೌಮಿ ಚೌಧರಿ ಎಂಬ ಭಯೋತ್ಪಾದಕರು ಅಯೋಧ್ಯೆ ಮತ್ತು ಗೋರಖ್‌ಪುರದಲ್ಲಿದ್ದಾರೆ ಎಂಬ ವರದಿಗಳು ಬಂದಿವೆ.


ಉತ್ತರಪ್ರದೇಶದಲ್ಲಿ ಭಯೋತ್ಪಾದಕ ದಾಳಿ ಎಚ್ಚರಿಕೆ ನೀಡಿದ ನಂತರ, ರಾಜ್ಯದ ಜಿಲ್ಲೆಗಳಿಗೆ ಕಟ್ಟುನಿಟ್ಟಾದ ಭದ್ರತಾ ವ್ಯವಸ್ಥೆಗೆ ಸೂಚನೆ ನೀಡಲಾಗಿದೆ. ಕಾಶಿ, ಮಥುರಾ, ಅಯೋಧ್ಯೆ ಮತ್ತು ಪೊಲೀಸ್ ತರಬೇತಿ ಕೇಂದ್ರಗಳ ಸುರಕ್ಷತೆಯನ್ನು ಹೆಚ್ಚಿಸಲು ನಿರ್ದಿಷ್ಟವಾಗಿ ಸೂಚಿಸಲಾಗಿದೆ.


ಮತ್ತೊಂದೆಡೆ, ಲಷ್ಕರ್-ಎ-ತೈಬಾ(Lashkar-e-Taiba)  ಅಂತರರಾಷ್ಟ್ರೀಯ ಒತ್ತಡದಿಂದ ತನ್ನನ್ನು ರಕ್ಷಿಸಿಕೊಳ್ಳಲು ಹೊಸ ತಂತ್ರ ರೂಪಿಸುತ್ತಿದೆ. ಈ ಭಯೋತ್ಪಾದಕ ಸಂಘಟನೆಯು ತನ್ನ ಹೆಸರನ್ನು ಬದಲಾಯಿಸಿದೆ. ಲಷ್ಕರ್ ತಮ್ಮ ಹೊಸ ಹೆಸರನ್ನು ಆಲ್ ಇಂಡಿಯಾ ಲಷ್ಕರ್-ಎ-ತೈಬಾ ಎಂದು ಹೆಸರಿಸಿದೆ ಎನ್ನಲಾಗಿದೆ.


ಜಮ್ಮು ಮತ್ತು ಕಾಶ್ಮೀರದಿಂದ ಆರ್ಟಿಕಲ್ 370 ರದ್ದಾದ ನಂತರ, ಈ ಸಂಸ್ಥೆ ಹಿಟ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದು ಭಾರತದ ಅನೇಕ ಪ್ರಸಿದ್ಧ ವ್ಯಕ್ತಿಗಳ ಹೆಸರುಗಳನ್ನು ಒಳಗೊಂಡಿದೆ. ಲಷ್ಕರ್ ಬಿಡುಗಡೆ ಮಾಡಿದ ಪಟ್ಟಿಯು ಪ್ರಧಾನಿ  ನರೇಂದ್ರ ಮೋದಿ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಹಲವು ಗಣ್ಯರ ಹೆಸರನ್ನು ಹೊಂದಿದೆ. ಭದ್ರತಾ ಪಡೆಗಳಿಂದ ಕೊಲ್ಲಲ್ಪಟ್ಟ ಭಯೋತ್ಪಾದಕರಿಗೆ ಪ್ರತೀಕಾರ ತೀರಿಸಿಕೊಳ್ಳಲು ಲಷ್ಕರ್ ಬಯಸಿದೆ ಎಂದು ಹೇಳಲಾಗಿದೆ.