ನವದೆಹಲಿ: ದೆಹಲಿಯ ಶಾಹೀನ್ ಬಾಗ್ ನಲ್ಲಿ ಕೆಲ ಸ್ಥಳೀಯ ನಾಗರಿಕರು ಬಂದ್ ಮಾಡಲಾಗಿರುವ ರಸ್ತೆಯನ್ನು ತೆರವುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆಗೆ ಇಳಿದಿದ್ದಾರೆ. CAA ಕಾಯ್ದೆಯನ್ನು ವಿರೋಧಿಸಿ ಕಳೆದ 50 ದಿನಗಳಿಂದ ಕೆಲ ಪ್ರತಿಭಟನಾಕಾರರು ರಸ್ತೆಗಿಳಿದ ಕಾರಣ ಈ ಪ್ರಮುಖ ರಸ್ತೆಯನ್ನು ಬಂದ್ ಮಾಡಲಾಗಿದೆ.


COMMERCIAL BREAK
SCROLL TO CONTINUE READING

ಶಾಹೀನ್ ಬಾಗ್ ನಲ್ಲಿ ನಡೆಸಲಾಗುತ್ತಿರುವ ಪ್ರದರ್ಶನದ ಕಾರಣ ತಾವು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿರುವುದಾಗಿ ಪ್ರತಿಭಟನಾಕಾರರು ಹೇಳಿದ್ದಾರೆ. ಸದ್ಯ ಈ ಪ್ರತಿಭಟನಾಕಾರರು ವ್ಯಾಪಕ ಘೋಷಣೆಗಳನ್ನು ಕೂಗುತ್ತಿದ್ದಾರೆ. ಆದರೆ, ಪೊಲೀಸರು ಅವರನ್ನು ಧರಣಿ ನಡೆಸುತ್ತಿರುವವರ ಸ್ಥಳದಿಂದ ದೂರವಿಡುವಲ್ಲಿ ಯಶಸ್ವಿಯಾಗಿದ್ದಾರೆ.


ಶಾಹೀನ್ ಬಾಗ್ ನಲ್ಲಿ ದೀರ್ಘಾವಧಿಯಿಂದ CAA ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ಮತ್ತು ಆಂದೋಲನ ನಡೆಸಲಾಗುತ್ತಿದ್ದು, ದೇಶಾದ್ಯಂತ ಇದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಶಾಹೀನ್ ಬಾಗ್ ಬಳಿಕ ದೇಶದ ವಿವಿಧ ನಗರಗಳಲ್ಲಿಯೂ ಕೂಡ ಪ್ರತಿಭಟನೆ ಆರಂಭಗೊಂಡಿವೆ.


CAA ಕಾನೂನಿನ ಅಡಿ ಕೇಂದ್ರ ಸರ್ಕಾರ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶಗಳಿಂದ ಭಾರತಕ್ಕೆ ವಲಸೆ ಬಂದ ಅಲ್ಪಸಂಖ್ಯಾತ ಹಿಂದೂ, ಜೈನ, ಬೌದ್ಧ, ಸಿಖ್, ಪಾರ್ಸಿ ಹಾಗೂ ಕ್ರಿಶ್ಚಿಯನ್ ಸಮುದಾಯದ ಶರಣಾರ್ಥಿಗಳಿಗೆ ಭಾರತೀಯ ಪೌರತ್ವ ನೀಡುವ ಉದ್ದೇಶದಿಂದ ಕಾನೂನು ಜಾರಿಗೆ ತಂದಿದೆ ಎಂಬುದು ಇಲ್ಲಿ ಉಲ್ಲೇಖನೀಯ.


ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಈ ಕಾಯ್ದೆಗೆ ಅನುಮೋದನೆ ನೀಡಲಾಗಿದ್ದು, ಆ ಬಳಿಕ ದೆಹಲಿಯ ಜಾಮೀಯಾ ಹಾಗೂ ಶಾಹೀನ್ ಬಾಗ್ ಪ್ರದೇಶಗಳಲ್ಲಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ. ಈ ಕಾಯ್ದೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಜನರು ಈ ಕಾಯ್ದೆ ಒಂದು ಅಸಂವಿಧಾನಿಕ ಕಾಯ್ದೆಯಾಗಿದ್ದು, ಧಾರ್ಮಿಕ ಆಧಾರದ ಮೇಲೆ ತಾರತಮ್ಯ ಎಸಗಲಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ.