ತಮಿಳುನಾಡು: ಪ್ರಸಕ್ತ ವರ್ಷದ 10ನೇ ತರಗತಿಯಲ್ಲಿ ಫೇಲ್ ಆದ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೊಡೈಕೆನಾಲ್ ಟ್ರಿಪ್ ಸೌಭಾಗ್ಯ ಸಿಗಲಿದೆ. ಹೌದು, ಇದು ವಿಚಿತ್ರವಾದರೂ ನಿಜ. ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಮಲಯಾಳಿ ನವೋದ್ಯಮಿಯೊಬ್ಬರು ಈ ಆಫರ್ ಘೋಷಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಕೆ. ಸುಧೀಶ್ ಎಂಬ ನವೋದ್ಯಮಿ, 10ನೇ ತರಗತಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ತಮಿಳುನಾಡಿನ ಖ್ಯಾತ ಗಿರಿಧಾಮ ಕೊಡೈಕೆನಾಲ್(Kodaikanal)ವೀಕ್ಷಿಸಲು ಉಚಿತ ಪ್ರವಾಸ ಸೌಲಭ್ಯ ನೀಡುವುದಾಗಿ ತಿಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುವುದಾಗಿ ಅವರು ಹೇಳಿದ್ದಾರೆ.


ಇದನ್ನೂ ಓದಿ: Passport: ಪಾಸ್‌ಪೋರ್ಟ್ ಮಾಡಿಸಲು ಬೇಕಾಗುವ ಅಗತ್ಯ ದಾಖಲೆಗಳಿವು


ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಕೊಡೈಕೆನಾಲ್ ನಲ್ಲಿ ಸುಧೀಶ್ ಅವರು ನಡೆಸುತ್ತಿರುವ ಹೋಮ್ ಸ್ಟೇ(Homestay)ಗಳಲ್ಲಿ ಉಚಿತವಾಗಿ ಉಳಿದುಕೊಳ್ಳಬಹುದಾಗಿದೆ. ಆದರೆ ಇದಕ್ಕೆ ಅವರು ಕೆಲ ಷರತ್ತುಗಳನ್ನು ವಿಧಿಸಿದ್ದಾರೆ. ಅದೇನೆಂದರೆ ಇಲ್ಲಿಗೆ ಪ್ರವಾಸಕ್ಕೆ ಬರಲಿಚ್ಛಿಸುವ ವಿದ್ಯಾರ್ಥಿಗಳು 2 ದಿನಗಳ ಕಾಲ ಮಾತ್ರ ಹೋಮ್ ಸ್ಟೇಗಳಲ್ಲಿ ತಂಗಬಹುದು. ಅಲ್ಲದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲ್ ಆಗಿರುವ ಪ್ರಮಾಣಪತ್ರವನ್ನು ಕಡ್ಡಾಯವಾಗಿ ತೋರಿಸಬೇಕು ಎಂದು ಹೇಳಿದ್ದಾರೆ.


10ನೇ ತರಗತಿ ಫಲಿತಾಂಶ(SSLC Exam Results) ಘೋಷಿಸಿದಾಗಿನಿಂದ ಪಾಸಾದ ವಿದ್ಯಾರ್ಥಿಗಳ ಸಂಭ್ರಮವನ್ನು ನಾವು ಸೋಷಿಯಲ್ ಮೀಡಿಯಾದಲ್ಲಿ ಕಾಣುತ್ತಿದ್ದೇವೆ. ಆದರೆ ಇನ್ನೊಂದು ಬದಿಯಲ್ಲಿ ಫೇಲಾದ ಕಾರಣಕ್ಕೆ ಅಪಹಾಸ್ಯಕ್ಕೊಳಗಾಗುವ ಮತ್ತು ಪೋಷಕರ ಬೈಗುಳಕ್ಕೆ ತುತ್ತಾಗಿ ಅವಮಾನ ಅನುಭವಿಸುವ ವಿದ್ಯಾರ್ಥಿಗಳು ಇದ್ದಾರೆ. ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕಾಗಿದೆ ಎಂದು ಅವರು ಹೇಳುತ್ತಾರೆ.


ಇದನ್ನೂ ಓದಿ: Master Card Ban: ಎಸ್‌ಬಿಐ, ಆಕ್ಸಿಸ್ ಸೇರಿದಂತೆ 5 ಬ್ಯಾಂಕುಗಳ ಕಾರ್ಡ್‌ಗಳ ಮೇಲೆ ಪರಿಣಾಮ


ಮೂಲತಃ ಕೋಚಿಕ್ಕೋಡ್ನ ವಡಕರ ಮೂಲದ ಸುಧೀಶ್ 2006 ರಿಂದ ತಮ್ಮ ಕುಟುಂಬದೊಂದಿಗೆ ಕೊಡೈಕೆನಾಲ್‌(Kodaikanal)ನಲ್ಲಿ ವಾಸಿಸುತ್ತಿದ್ದಾರೆ. ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳ ಜೊತೆಗೆ ಪೋಷಕರು ತಮ್ಮ ಮಕ್ಕಳನ್ನು ಹೋಲಿಕೆ ಮಾಡುತ್ತಾರೆ. ಇದು ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಮತ್ತಷ್ಟು ಸಮಸ್ಯೆ ತಂದೊಡ್ಡುತ್ತದೆ. ಹೀಗಾಗಿ ಇಂತಹ ವಿದ್ಯಾರ್ಥಿಗಳು ಬೆಟ್ಟ-ಗುಡ್ಡಗಳ ಪ್ರಕೃತಿ ಸೌಂದರ್ಯವನ್ನು ಸವಿಯಬೇಕು. ಒತ್ತಡದಿಂದ ಮುಕ್ತಿ ಪಡೆದು ಸ್ವತಂತ್ರವಾಗಿ ನಲಿದಾಡಬೇಕು. ಹೀಗಾಗಿ 10ನೇ ಕ್ಲಾಸ್ ಫೇಲಾದ ವಿದ್ಯಾರ್ಥಿಗಳಿಗೆ ನಾನು ಈ ಆಫರ್ ಘೋಷಿಸಿದ್ದೇನೆ ಎಂದು ಹೇಳಿದ್ದಾರೆ.


ಫೇಸ್‌ಬುಕ್ ನಲ್ಲಿ ಹಾಕಿದ್ದ ಅವರ ಪೋಸ್ಟ್ ಸಖತ್ ವೈರಲ್ ಆಗಿದ್ದು, ಸುಧೀಶ್ ಅವರ ಫೋನ್ ಗೆ ಕರೆಗಳ ಸುರಿಮಳೆಯೇ ಬರುತ್ತಿವೆ. ಕಳೆದ ವರ್ಷ ಎಸ್‌ಎಸ್‌ಎಲ್‌ಸಿ(SSLC) ಫೇಲಾದ ವಿದ್ಯಾರ್ಥಿಯೊಬ್ಬ ಕರೆ ಮಾಡಿ ತಮ್ಮ ತಂದೆಯೊಂದಿಗೆ ಹೋಮ್ ಸ್ಟೇಗೆ ಬರುವುದಾಗಿ ಹೇಳಿದ್ದಾನಂತೆ. ಒಟ್ಟಿನಲ್ಲಿ ನಾನು ಮಾಡುತ್ತಿರುವ ಈ ಕಾರ್ಯದಿಂದ ವಿದ್ಯಾರ್ಥಿಗಳ ಬದುಕಿನಲ್ಲಿ ಆತ್ಮವಿಶ್ವಾಸ ಮೂಡಿದರೆ ಸಾಕು ಎಂದು ಸುಧೀಶ್ ಹೇಳಿಕೊಂಡಿದ್ದಾರೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.