ತಿರುವನಂತಪುರಂ: ಕಾಲೇಜು ಆವರಣವನ್ನು ಸ್ವಚ್ಛಗೊಳಿಸುತ್ತಿದ್ದ ವ್ಯಕ್ತಿಯ ಕುತ್ತಿಗೆಗೆ ಹೆಬ್ಬಾವು ಸುತ್ತಿಕೊಂಡ ಘಟನೆ ಕೇರಳದ ತಿರುವನಂತಪುರಂನಲ್ಲಿ ಮಂಗಳವಾರ ನಡೆದಿದೆ. 


COMMERCIAL BREAK
SCROLL TO CONTINUE READING

ಎಂ ನರೆಗಾ ಯೋಜನೆಯಡಿ ತಿರುವನಂತಪುರಂನ ನಯ್ಯಾರ್‌ನಲ್ಲಿರುವ ಕೇರಳ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ ಆವರಣದಲ್ಲಿ ಭುವಚಂದ್ರನ್ ನಾಯರ್(58) ಎಂಬ ವ್ಯಕ್ತಿ ಅಲ್ಲಿ ಬೆಳೆದಿದ್ದ ಪೊದೆಗಳನ್ನು ಕತ್ತರಿಸುತ್ತಿದ್ದ ಸಮಯದಲ್ಲಿ ದೂರದಲ್ಲಿ ಬಟ್ಟೆ ಬಿದ್ದಿರುವುದನ್ನು ಕಂಡಿದ್ದಾರೆ. ಬಳಿಕ ಅದನ್ನು ತೆಗೆಯಲು ಹತ್ತಿರ ಹೋದಾಗ ಅದು ಬಟ್ಟೆಯಲ್ಲ ಹೆಬ್ಬಾವು ಎಂದು ಅರಿವಾಗಿ ಹೌಹಾರಿದ್ದಾರೆ.


ಆದರೆ, ಅಷ್ಟಕ್ಕೇ ಸುಮ್ಮನಾಗದ ಭುವನಚಂದ್ರನ್ ಹಾಗೂ ಅಲ್ಲಿದ್ದ ಇತರ ಕೆಲಸಗಾರರು ಬರೋಬ್ಬರಿ 10 ಅಡಿ ಉದ್ದದ ಹೆಬ್ಬಾವನ್ನು ಒಂದು ಚೀಲದಲ್ಲಿ ಹಾಕಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲು ನಿರ್ಧರಿಸಿ, ಅದನ್ನು ಎತ್ತಿ ಹಾಕುತ್ತಿದ್ದ ಸಮಯದಲ್ಲಿ ಇದ್ದಕ್ಕಿದ್ದಂತೆ ಆ ಹೆಬ್ಬಾವು ಚಂದ್ರನ್ ಅವರ ಕುತ್ತಿಗೆಗೆ ಸುತ್ತಿಕೊಂಡು ಬಿಗಿಯಾಗಿಸಿದೆ. ಆದರೆ, ಕೂಡಲೇ ಅಲ್ಲಿದ್ದವರು ಆ ಹಾವನ್ನು ಬಿಡಿಸಿ, ಆತನ ಪ್ರಾಣ ಉಳಿಸಿದ್ದಾರೆ. 


ಬಳಿಕ ಆ ಬೃಹತ್ ಹೆಬ್ಬಾವನ್ನು ಚೀಲದಲ್ಲಿ ಹಾಕಿ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಏತನ್ಮಧ್ಯೆ, ಕುತ್ತಿಗೆಯಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಭುವನಚಂದ್ರನ್ ಅವರನ್ನು ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.