ಅಮರಾವತಿ: ಭಾರತದ ಶ್ರೀಮಂತ ಸಂಸದನಿಗೆ ಮತ್ತೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ದೊರೆತಿದ್ದು, 2014 ರ ಲೋಕಸಭೆ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷ(ಟಿಡಿಪಿ)ದ ಟಿಕೆಟ್ ಪಡೆದು ಗುಂಟೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಗಲ್ಲಾ ಜಯದೇವ್ ಮತ್ತೊಮ್ಮೆ ಲೋಕಸಭೆ ಚುನಾವಣೆಯಲ್ಲಿ ಗುಂಟೂರಿನ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.


COMMERCIAL BREAK
SCROLL TO CONTINUE READING

2014 ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ 620 ಕೋಟಿ ರೂ. ಆಸ್ತಿ ಘೋಷಿಸುವ ಮೂಲಕ ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದ ಅಮರಾ ರಾಜ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕ ಗಲ್ಲಾ ಜಯದೇವ್, YSRCP ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಿ ವಿಜಯಿಯಾಗಿದ್ದರು. ಇಂದು ಬೆಳಿಗ್ಗೆ ಟಿಡಿಪಿ ಪಕ್ಷವು 25 ಲೋಕಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದು, ಶ್ರೀಮಂತ ಸಂಸದನಿಗೆ ಮತ್ತೆ ಮಣೆ ಹಾಕಿದೆ.


2019ರ ಲೋಕಸಭೆ ಚುನಾವಣೆಗೆ 25 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವ ಟಿಡಿಪಿ, ಗಲ್ಲಾ ಜಯದೇವ್ ಅವರಿಗೆ ಗುಂಟೂರಿನಿಂದ ಟಿಕೆಟ್ ನೀಡಿದ್ದು, ಮಾಜಿ ಕೇಂದ್ರ ಸಚಿವ ಅಶೋಕ್ ಗಜಪತಿ ರಾಜುಗೆ ವಿಜಿನಗರದಿಂದ ಟಿಕೆಟ್ ನೀಡಿದೆ. 


ಆಂಧ್ರ ಪ್ರದೇಶದಲ್ಲಿ ಲೋಕಸಭಾ ಚುನಾವಣೆ ಜೊತೆಗೆ ವಿಧಾನಸಭಾ ಚುನಾವಣೆ ಕೂಡಾ ನಡೆಯಲಿದ್ದು, ಆಂಧ್ರಪ್ರದೇಶದ 175 ವಿಧಾನಸಭಾ ಕ್ಷೇತ್ರಗಳು ಹಾಗೂ 25 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 11 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.