ಭೋಪಾಲ್: ಕಾಂಗ್ರೆಸ್‌ನಲ್ಲಿನ ಆಂತರಿಕ ಭಿನ್ನಾಪಿಪ್ರಾಯದಿಂದ ಕರ್ನಾಟಕದಲ್ಲಿ ಸರ್ಕಾರ ಪತನವಾದಂತೆ ಮಧ್ಯಪ್ರದೇಶದಲ್ಲೂ ಸರ್ಕಾರ ಪತನವಾಗಬಹುದು. ಕಾಂಗ್ರೆಸ್‌ನಲ್ಲಿನ ಆಂತರಿಕ ಸಂಘರ್ಷದಿಂದ ಸರ್ಕಾರ ಬಿದ್ದರೆ ಅದಕ್ಕೆ ನಮ್ಮನ್ನು ದೂಷಿಸಬೇಡಿ. ಕರ್ನಾಟಕದಲ್ಲಿ ಉಂಟಾಗಿರುವ ಪರಿಸ್ಥಿತಿ ಇತರ ರಾಜ್ಯಗಳಲ್ಲೂ ಪ್ರತಿಧ್ವನಿಸಬಹುದು ಎಂದು ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಕಾಂಗ್ರೆಸ್ ಮತ್ತು ಜೆಡಿಎಸ್‌ನ ಹಲವಾರು ಶಾಸಕರು ಈ ತಿಂಗಳ ಆರಂಭದಲ್ಲಿ ಸ್ಪೀಕರ್ ಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದರು. ಮಂಗಳವಾರ ಸಂಜೆ ವಿಧಾನಸೌಧದಲ್ಲಿ ಬಹುಮತ ಕಳೆದುಕೊಂಡ ಎಚ್‌. ಡಿ. ಕುಮಾರಸ್ವಾಮಿ ಸರ್ಕಾರ ಪತನವಾಗಿದೆ. ಕರ್ನಾಟಕದಲ್ಲಿ ಮೈತ್ರಿ  ಸರಕಾರ 14 ತಿಂಗಳ ಅಧಿಕಾರಾವಧಿ ಹೊಂದಿತ್ತಾದರೂ ಪಕ್ಷದಲ್ಲಿನ ಆಂತರಿಕ ಬಿರುಕುಗಳು ಅಲ್ಲಿನ ಇಂದಿನ ಪರಿಸ್ಥಿತಿಯನ್ನು ವ್ಯಾಖ್ಯಾನಿಸಿವೆ. ಅಂತಹ ಬಿರುಕುಗಳು ಮಧ್ಯಪ್ರದೇಶದ ಕಾಂಗ್ರೆಸ್‌ನಲ್ಲಿಯೂ ಇದೇ ಎಂದು ಶಿವರಾಜ್ ಹೇಳಿದ್ದಾರೆ. 


"ಮಧ್ಯಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಬಿಎಸ್‌ಪಿ-ಎಸ್‌ಪಿ ಬೆಂಬಲವಿದೆ. ಆದರೆ, ಬಾಹ್ಯ ಬೆಂಬಲದ ಹೊರತಾಗಿ ಕಾಂಗ್ರೆಸ್‌ನಲ್ಲಿ ಆಂತರಿಕ ಸಂಘರ್ಷ ಇದ್ದು ಕರ್ನಾಟಕದಲ್ಲಿ ಸಂಭವಿಸಿದಂತೆ ರಾಜ್ಯದಲ್ಲೂ ರಾಜಕೀಯ ಬಿಕ್ಕಟ್ಟು ಸಂಭವಿಸಿದಲ್ಲಿ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ" ಎಂದು ಅವರು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದರು.


ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಕರ್ನಾಟಕದಲ್ಲಿ ಅತೃಪ್ತ ಶಾಸಕರು ಬಿಜೆಪಿಗೆ ಪಕ್ಷಾಂತರಗೊಳ್ಳಲಿದ್ದಾರೆ ಎಂದು ಪದೇ ಪದೇ ಆರೋಪಿಸುತ್ತಿವೆ. ಆದರೆ ತಮ್ಮ ಪಕ್ಷಗಳೊಳಗಿನ ಭಿನ್ನಾಭಿಪ್ರಾಯ, ತಪ್ಪುಗಳಿಗೆ ಇತರೆ ಪಕ್ಷವನ್ನು ದೂಷಿಸಬಾರದು ಎಂದು ಶಿವರಾಜ್ ವಾಗ್ದಾಳಿ ನಡೆಸಿದ್ದಾರೆ.


"ನಾವು ಇಲ್ಲಿ (ಮಧ್ಯಪ್ರದೇಶ) ಸರ್ಕಾರದ ಪತನಗೊಳಿಸುವಂತ ಯಾವುದೇ ಪ್ರಯತ್ನವನ್ನು ಮಾಡುವುದಿಲ್ಲ. ಆದರೆ ಕಾಂಗ್ರೆಸ್ ನಾಯಕರು ತಮ್ಮ ಸರ್ಕಾರಗಳ ಪತನಕ್ಕೆ ಕಾರಣವಾದರೆ ಅದಕ್ಕೆ ನಾವು ಜವಾಬ್ದಾರರಲ್ಲ" ಎಂದು ಅವರು ಹೇಳಿದರು.