ಪ್ರಜಾಪ್ರಭುತ್ವಕ್ಕೆ ಗಟ್ಟಿ ಅಡಿಪಾಯ ಹಾಕಿದವರು ಜವಾಹರ್ ಲಾಲ್ ನೆಹರು: ದೇವೇಗೌಡ
ಸ್ವಾತಂತ್ರ ತಂದು ಕೊಟ್ಟ ಪಕ್ಷ ಕಾಂಗ್ರೆಸ್ ದಿನದಿಂದ ದಿನಕ್ಕೆ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ- ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ
ಬೆಂಗಳೂರು: ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಗಟ್ಟಿ ಅಡಿಪಾಯ ಹಾಕಿದವರು ಪಂಡಿತ್ ಜವಾಹರಲಾಲ್ ನೆಹರು. ಆದರೆ ಇತ್ತೀಚಿನ ದಿನಗಳಲ್ಲಿ ನೆಹರು ಅವರ ಕೊಡುಗೆ ಬಗ್ಗೆ ಲಘುವಾಗಿ ಮಾತನಾಡೋದನ್ನ ನೋಡುತ್ತಿದ್ದೇವೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ವಿಷಾದ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ದೇವೇಗೌಡ ಅವರು, ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಗಟ್ಟಿ ಅಡಿಪಾಯ ಹಾಕಿದವರು ಪಂಡಿತ್ ಜವಾಹರಲಾಲ್ ನೆಹರು. ಆದರೆ, ಇತ್ತೀಚಿಗೆ ಅವರ ಬಗ್ಗೆ ಸಂಸತ್ ನಲ್ಲಿ ಲಘುವಾಗಿ ಮಾತನಾಡಲಾಗುತ್ತಿದೆ. ನಾವು ಏಕೆ ಇಂತಹ ಸ್ಥಿತಿಗೆ ಬಂದಿದ್ದೇವೆ ಎಂದು ಪ್ರಶ್ನಿಸಿದರು.
ಸ್ವಾತಂತ್ರ ತಂದು ಕೊಟ್ಟ ಪಕ್ಷ ಕಾಂಗ್ರೆಸ್ ದಿನದಿಂದ ದಿನಕ್ಕೆ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಾ ಬಂದಿದೆ. ನಾನು ಕೂಡ ಮೂಲ ಕಾಂಗ್ರೆಸ್ಸಿಗ, ರಾಜಕಾರಣದಲ್ಲಿ ಸಾಕಷ್ಟು ನೋವುಗಳನ್ನ ಉಂಡಿದ್ದೇನೆ. ಉತ್ತರ ಭಾರತದಲ್ಲಿ ಹಿಂದಿ ಭಾಷೆಯ ಪ್ರಭಾವದಿಂದ ಮತ್ತು ಆ ಭಾಗದ ರಾಜಕೀಯ ಪ್ರಭಾವದಿಂದಾಗಿ ಆ ಭಾಗಕ್ಕೆ ಪ್ರಾಶಸ್ತ್ಯ ಸಿಗುತ್ತಿದೆ. ದಕ್ಷಿಣ ಭಾರತದ ನಾಯಕರನ್ನ ಗುರುತಿಸೋ ಪ್ರಯತ್ನಗಳು ನಡೆಯಲಿಲ್ಲ.
9 ರಾಜ್ಯಗಳಲ್ಲಿ ಅಂದು ರಾಜಕೀಯ ಏರು ಪೇರುಗಳಿದ್ದವು. ಅಂತಹ ಕಾಲದಲ್ಲಿ ಇಂದಿರಾಗಾಂಧಿ ಕೆಲ ಜನಪ್ರಿಯ ಕಾರ್ಯಕ್ರಮಗಳನ್ನ ಜಾರಿ ತಂದರು. ಆ ಯೋಜನೆಗಳನ್ನು ವಿರೋಧಿಸುವ ಗುಂಪು ಕೂಡ ಇತ್ತು ಎಂದು ದೇವೇಗೌಡರು ತಿಳಿಸಿದರು.