ರಾಂಚಿ: ರಾಜ್ಯದ ಎಲ್ಲಾ  14 ಲೋಕಸಭಾ ಸ್ಥಾನಗಳನ್ನೂ ಎನ್‌ಡಿಎ ಗೆಲ್ಲಲಿದೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ರಘುಬರ್ ದಾಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಲೋಕಸಭಾ ಚುನಾವಣೆಯ ಎಲ್ಲಾ ಹಂತಗಳೂ ಪೂರ್ಣಗೊಂಡು ಚುನಾವಣೋತ್ತರ ಸಮೀಕ್ಷೆ ಹೊರಬಿದ್ದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಸಿಎಂ, ಎಕ್ಸಿಟ್ ಪೋಲ್ ಸಮೀಕ್ಷೆಯಲ್ಲಿ ಎನ್‌ಡಿಎ ಮೈತ್ರಿಕೂಟ ಕೇವಲ ಆರು ರಿಂದ ಎಂಟು ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಲಾಗಿದೆ. ಆದರೆ, ನಾವು ಎಲ್ಲಾ 14 ಸ್ಥಾನಗಳನ್ನೂ ಗೆಲ್ಲಲಿದ್ದೇವೆ ಎಂದಿದ್ದಾರೆ. 


"ವಿವಿಧ ಚುನಾವಣೋತ್ತರ ಸಮೀಕ್ಷೆಗಳು ಜಾರ್ಖಂಡ್ ನ ರಾಜಕೀಯ ಚಿತ್ರಣವನ್ನು ವಿಭಿನ್ನ ರೀತಿಯಲ್ಲಿ ಬಿಂಬಿಸಿವೆ. ಒಂದು ಸುದ್ದಿ ವಾಹಿನಿ ಮಾತ್ರ ನಮಗೆ 12 ರಿಂದ 14 ಸ್ಥಾನ ದೊರೆಯಲಿದೆ ಎಂದು ಭವಿಷ್ಯ ನುಡಿದಿದೆ. ಆದರೆ ರಾಜ್ಯದಲ್ಲಿ ಎಲ್ಲಾ 14 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವನ್ನು ನಾವು ಹೊಂದಿದ್ದೇವೆ" ಎಂದು ದಾಸ್ ಹೇಳಿದ್ದಾರೆ.


ಪಕ್ಷದ ಕಾರ್ಯಕರ್ತರ ಮಾಹಿತಿ ಪ್ರಕಾರ ರಾಜ್ಮಹಲ್ ನಲ್ಲಿ ಕಠಿಣ ಸ್ಪರ್ಧೆ ಏರ್ಪಟ್ಟಿದ್ದು, ಶೇ.10 ರಿಂದ ಶೇ.15ರಷ್ಟು ಮುಸ್ಲಿಂ ಸಮುದಾಯದ ಮತಗಳು ನಮಗೆ ದೊರೆಯಲಿವೆ. ಹೀಗಾಗಿ 5,000 ದಿಂದ 10,000 ಮತಗಳ ಅಂತರದಿಂದ ನಾವು ಗೆಲುವು ಸಾಧಿಸಲಿದ್ದೇವೆ. "ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟ 300ಕ್ಕೂ ಅಧಿಕ ಸ್ಥಾನಗಳನ್ನು ಗಳಿಸಲಿದೆ ಎಂದು ಇತ್ತೀಚಿನ ಟ್ರೆಂಡ್ ಸ್ಪಷ್ಟವಾಗಿ ತಿಳಿಸಿದೆ. ನರೇಂದ್ರ ಮೋದಿ ಅವರು 2014 ರಲ್ಲಿ ದೇಶದ ಅಧಿಕಾರ ವಹಿಸಿಕೊಂಡ ಬಳಿಕ ಜನರು ಧನಾತ್ಮಕ ಬದಲಾವಣೆಯನ್ನು ಆಯ್ಕೆ ಮಾಡಿದ್ದಾರೆ. ಅವರು ಪ್ರತಿಪಕ್ಷಗಳ ಋಣಾತ್ಮಕ ರಾಜಕೀಯವನ್ನು ತಿರಸ್ಕರಿಸಿದ್ದಾರೆ" ಎಂದರು.


"ಸ್ವಾತಂತ್ರ್ಯಾನಂತರ  ಮೊದಲ ಬಾರಿಗೆ ಸರ್ಕಾರ ರಚನೆ ಬಗ್ಗೆ ಸಕಾರಾತ್ಮಕ ಅಲೆ ಕಾಣುತ್ತಿದೆ. ರಾಹುಲ್ ಗಾಂಧಿ ಮತ್ತು ಇತರ ವಿರೋಧ ಪಕ್ಷಗಳ ನಾಯಕರು ತಾವು ಚುನಾವಣೆಯಲ್ಲಿ ಸೋಲುತ್ತೇವೆ ಎಂಬುದನ್ನು ಸಮೀಕ್ಷೆಗಳಿಂದ ಅರ್ಥ ಮಾಡಿಕೊಂಡಿದ್ದಾರೆ. ಹಾಗಾಗಿ ರಾಹುಲ್ ಗಾಂಧಿ ಬಲವಾದ ವಿರೋಧ ಪಕ್ಷವನ್ನು ರಚಿಸಲು ಪ್ರಯತ್ನಿಸಬೇಕಿದೆ" ಎಂದು ಸಿಎಂ ರಘುಬರ್ ದಾಸ್ ಲೇವಡಿ ಮಾಡಿದ್ದಾರೆ.