ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ  ' 'ಒಂದು ದೇಶ, ಒಂದು ಪಡಿತರ ಚೀಟಿ''(One Nation One Ration Card)  ಯೋಜನೆ ಶುಕ್ರವಾರದಿಂದ ಪ್ರಾರಂಭವಾಯಿತು. ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಈ ಯೋಜನೆಯನ್ನು ಪ್ರಾರಂಭಿಸಿದರು. ಪ್ರಸ್ತುತ, ಪ್ರಾಯೋಗಿಕ ಯೋಜನೆಯಾಗಿ, ಆಂಧ್ರಪ್ರದೇಶ-ತೆಲಂಗಾಣ ಮತ್ತು ಮಹಾರಾಷ್ಟ್ರ-ಗುಜರಾತ್ ಎಂಬ ಎರಡು ಕ್ಲಸ್ಟರ್ ರಾಜ್ಯಗಳಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಇದರ ನಂತರ, ಆಂಧ್ರಪ್ರದೇಶದ ನಿವಾಸಿಗಳು ಈಗ ತೆಲಂಗಾಣದ ಯಾವುದೇ ಪಡಿತರ ಅಂಗಡಿಯಿಂದ ಮತ್ತು ತೆಲಂಗಾಣದ ನಿವಾಸಿಗಳು ಆಂಧ್ರಪ್ರದೇಶದ ಯಾವುದೇ ಪಡಿತರ ಅಂಗಡಿಯಿಂದ ಆಹಾರ ಧಾನ್ಯಗಳನ್ನು ತೆಗೆದುಕೊಳ್ಳಬಹುದಾಗಿದೆ. ಗುಜರಾತ್ ಮತ್ತು ಮಹಾರಾಷ್ಟ್ರದ ನಿವಾಸಿಗಳಿಗೂ ಇದೇ ರೀತಿಯ ನಿಯಮ ಅನ್ವಯವಾಗುತ್ತದೆ.


COMMERCIAL BREAK
SCROLL TO CONTINUE READING

2020 ರ ಜೂನ್ ವೇಳೆಗೆ ದೇಶಾದ್ಯಂತ ಜಾರಿಗೆ ತರುವ ಗುರಿ:
ಕ್ರಮೇಣ ಈ ಯೋಜನೆಯನ್ನು ದೇಶಾದ್ಯಂತ ಜಾರಿಗೆ ತರಲಾಗುವುದು. ದೇಶಾದ್ಯಂತ ಈ ಯೋಜನೆಯ ಅನುಷ್ಠಾನದ ನಂತರ, ಫಲಾನುಭವಿಗಳು ತಮ್ಮ ಧಾನ್ಯದ ಪಾಲನ್ನು ದೇಶದ ಯಾವುದೇ ಪಡಿತರ ಅಂಗಡಿಯಿಂದ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. 'ಒಂದು ದೇಶ, ಒಂದು ಪಡಿತರ ಚೀಟಿ' ಯೋಜನೆಯನ್ನು 2020 ರ ಜೂನ್ ವೇಳೆಗೆ ದೇಶಾದ್ಯಂತ ಸಂಪೂರ್ಣವಾಗಿ ಜಾರಿಗೆ ತರುವ ಗುರಿಯನ್ನು ಸರ್ಕಾರ ಹೊಂದಿದೆ. 


ಜೂನ್ ಕೊನೆಯ ವಾರದಲ್ಲಿ, ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಭೆ ನಡೆಸಿದ ನಂತರ ಈ ಯೋಜನೆಯನ್ನು ಜಾರಿಗೆ ತರಲು ಒಂದು ವರ್ಷ ಕಾಲಾವಕಾಶ ನೀಡಿದ್ದರು.


ಈ ಯೋಜನೆಯನ್ನು 'ಒಂದು ದೇಶ - ಒಂದು ತೆರಿಗೆ' ಮಾದರಿಯಲ್ಲಿ ಪ್ರಾರಂಭಿಸಲಾಗುತ್ತಿದೆ. ಈ ಯೋಜನೆಯ ಅನುಷ್ಠಾನದ ನಂತರ, ಬಡವರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋದರೆ, ಅವರಿಗೆ ಪಡಿತರ ಪಡೆಯುವಲ್ಲಿ ತೊಂದರೆ ಇರುವುದಿಲ್ಲ. ನಕಲಿ ಪಡಿತರ ಚೀಟಿಯನ್ನು ನಿಷೇಧಿಸಲು ಸಹ ಇದು ಸಹಾಯ ಮಾಡುತ್ತದೆ. ಇದಲ್ಲದೆ, ಎಲ್ಲಾ ಪಡಿತರ ಚೀಟಿಗಳನ್ನು ಆಧಾರ್ ಕಾರ್ಡ್‌ಗೆ ಸಂಪರ್ಕಿಸುವ ಮತ್ತು ಪಾಯಿಂಟ್ ಆಫ್ ಸೇಲ್, ಪಿಒಎಸ್ ಯಂತ್ರದ ಮೂಲಕ ಆಹಾರ ಧಾನ್ಯಗಳನ್ನು ವಿತರಿಸುವ ವ್ಯವಸ್ಥೆಯು ಅಂತಿಮ ಹಂತದಲ್ಲಿದೆ.