GN Saibaba: ವಿಚಾರವಾದಿ, ಮಾನವಹಕ್ಕು ಹೋರಾಟಗಾರ ಪ್ರೊ.ಜಿ.ಎನ್.ಸಾಯಿಬಾಬಾ ಅವರು ಅಕ್ಟೋಬರ್ 12ರಂದು ನಿಧನರಾಗಿದ್ದಾರೆ. 58 ವಯೋಮಾನದ ಅವರದ್ದು ಖಂಡಿತ ಸಾಯುವ ವಯಸ್ಸಲ್ಲ. ಈ ಸಾವು ಸಾವಲ್ಲ, ಪ್ರಭುತ್ವ ಪ್ರಾಯೋಜಿತ ಸಂಚಿನ ಕೊಲೆ...  ಸಾಯಿಬಾಬಾರನ್ನು ಒಂದಲ್ಲಾ ಎರಡಲ್ಲಾ ಬರೋಬ್ಬರಿ 10 ವರ್ಷಗಳ ಕಾಲ ವಿನಾಕಾರಣ ಜೈಲಿನಲ್ಲಿ ಬಂಧಿಸಿಡಲಾಗಿತ್ತು. ಅವರ ಕುಟುಂಬದವರು ಅನೇಕ ಬಾರಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರೂ ಬಿಡುಗಡೆ ಮಾಡದೇ ಬಂಧೀಖಾನೆಯಲ್ಲಿ ನರಕದರ್ಶನ ಮಾಡಿಸಲಾಯಿತು. 


COMMERCIAL BREAK
SCROLL TO CONTINUE READING

ಚಿಕ್ಕ ವಯಸ್ಸಿನಿಂದಲೂ ಪೊಲಿಯೋ ಪೀಡಿತರಾಗಿದ್ದ ಸಾಯಿಬಾಬರ ಕಾಲುಗಳು ಸ್ವಾದೀನ ಕಳೆದುಕೊಂಡಿದ್ದವು. ಗಾಲಿಖುರ್ಚಿಯೇ ಚಲನೆಯ ಸಂಗಾತಿಯಾಗಿತ್ತು. ರಕ್ತನಾಳದ ಊತ, ನರಮಂಡಲ ಸಂಬಂಧಿತ ಖಾಯಿಲೆ, ತೀವ್ರ ರಕ್ತದೊತ್ತಡಗಳಿಂದ ಬಾಧೆಗೊಳಗಾಗಿ ಬಳಲುತ್ತಿದ್ದರು. ಇಂತಹ ಅಂಗವೈಕಲ್ಯ ಇರುವ ವ್ಯಕ್ತಿಗೆ ಹೆದರಿದ ಪ್ರಧಾನಿ ಮೋದಿ ಸರ್ಕಾರವು ಅವರನ್ನು ಜೈಲಿಗೆ ದೂಡಿ ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸದೇ ಮಾನವತಾವಾದಿಯನ್ನು ಅಮಾನವೀಯವಾಗಿ ಹಿಂಸಿಸಿತು. ಇಷ್ಟಕ್ಕೂ ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಸಾಯಿಬಾಬಾರವರು ಭಯೋತ್ಪಾದಕರಾಗಿರಲಿಲ್ಲ, ಸಂಚು, ವಂಚನೆ, ಕೊಲೆ, ಸುಲಿಗೆ ಮಾಡಿರಲಿಲ್ಲ. ಅಪ್ಪಟ ದೇಶಪ್ರೇಮಿಯಾಗಿದ್ದ ಅವರು ದೇಶದ್ರೋಹ ಮಾಡಲೂ ಸಾಧ್ಯವಿರಲಿಲ್ಲ. ಆದರೂ ಕ್ರೂರ ಪ್ರಭುತ್ವ ನೆಟ್ಟಗೆ ನಡೆಯಲೂ ಬಾರದ ವ್ಯಕ್ತಿಯನ್ನು ಬಂಧಿಖಾನೆಯಲ್ಲಿ ಬಂಧಿಸಿಟ್ಟಿತು ಏಕೆ?


ಏಕೆಂದರೆ.. ಸಾಯಿಬಾಬಾ ಮಹಾನ್ ಮಾನವತಾವಾದಿಯಾಗಿದ್ದರು, ಮಾನವ ಹಕ್ಕುಗಳ ಮೇಲಿನ ದಮನದ ವಿರುದ್ಧ ಧ್ವನಿ ಎತ್ತುತ್ತಿದ್ದರು. ದಮನಿತ ಜನರ ಪರವಾಗಿ ಲೇಖನ ಬರೆದು ಸರ್ಕಾರಿ ಯಂತ್ರಾಂಗದ ದೌರ್ಜನ್ಯವನ್ನು ಖಂಡಿಸುತ್ತಿದ್ದರು. ಪ್ರಧಾನಿ ಮೋದಿ ಸರಕಾರದ ಜನವಿರೋಧಿ ನೀತಿಯನ್ನು ಪ್ರಶ್ನಿಸುತ್ತಿದ್ದರು. ಇದೇ ಆಳುವ ವ್ಯವಸ್ಥೆಗೆ ನುಂಗಲಾರದ ತುತ್ತಾಯಿತು. ಹೇಗಾದರೂ ಮಾಡಿ ಜನರನ್ನು ಎಚ್ಚರಿಸುವ ಧ್ವನಿಯನ್ನೇ ದಮನಿಸಲು ಸುಳ್ಳು ಆರೋಪ ಹೊರಿಸಲಾಯ್ತು. 'ನಕ್ಸಲ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆ' ಎಂದು ಕೇಸ್ ದಾಖಲಿಸಿದ ಮಹಾರಾಷ್ಟ್ರದ ಪೊಲೀಸರು 2014ರಲ್ಲಿ ಬಂಧಿಸಿದರು. ದೆಹಲಿ ವಿಶ್ವವಿದ್ಯಾಲಯದ ರಾಮ್ ಲಾಲ್ ಆನಂದ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಸಾಯಿಬಾಬಾರನ್ನು ವೃತ್ತಿಯಿಂದ ಅಮಾನತ್ತುಗೊಳಿಸಲಾಯ್ತು. 10 ವರ್ಷಗಳ ಕಾಲ ಅನಾರೋಗ್ಯಪೀಡಿತ ವ್ಯಕ್ತಿಯನ್ನು ಪ್ರಭುತ್ವ ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿತು. ಕನಿಷ್ಟ ಅಗತ್ಯ ಚಿಕಿತ್ಸೆಯನ್ನೂ ಕೊಡಿಸದೇ ನಿರ್ಲಕ್ಷಿಸಿತು. 


ಇಷ್ಟೆಲ್ಲಾ ದೌರ್ಜನ್ಯಕ್ಕೆ ಒಳಗಾದರೂ ಸಾಯಿಬಾಬಾರವರು ಸರ್ಕಾರದ ಕ್ಷಮಾಪಣೆ ಕೇಳಲಿಲ್ಲ. ತಪ್ಪಾಯಿತು ಎಂದು ಒಪ್ಪಿಕೊಳ್ಳಲಿಲ್ಲ. ಪ್ರಭುತ್ವದ ಪರ ಬಹುಪರಾಕ್ ಹೇಳಲಿಲ್ಲ. ಜನರ ಪರವಾದ ನಿಲುವಿನಿಂದ ವಿಮುಖವಾಗಲಿಲ್ಲ. ಪ್ರಭುತ್ವದ ಬೆದರಿಕೆಗೆ ಬಗ್ಗಲಿಲ್ಲ. ಅವರ ದೇಹದ 90% ಭಾಗ ಅಂಗವ್ಯಕಲ್ಯಕ್ಕೆ ಒಳಗಾಗಿ ತೀವ್ರ ಸ್ವರೂಪದ ಅನಾರೋಗ್ಯ ಕಾಡುತ್ತಿದ್ದರೂ ಕಾನೂನು ಹೋರಾಟ ಮಾಡುವುದನ್ನು ನಿಲ್ಲಿಸಲಿಲ್ಲ.
ಕೊನೆಗೂ ಸತ್ಯಕ್ಕೆ ಜಯ ಸಿಕ್ಕಿತು. ಕಾನೂನು ಹೋರಾಟದಲ್ಲಿ ನ್ಯಾಯ ಸಾಯಿಬಾಬಾರ ಪರವಾಗಿತ್ತು. ಸಾಯಿಬಾಬಾರವರ ವಿರುದ್ದ ಯಾವುದೇ ಸಾಕ್ಷಗಳಿಲ್ಲ ಎಂದು ತೀರ್ಪಿತ್ತ ಬಾಂಬೆ ಹೈಕೋರ್ಟ್ 2024ರಲ್ಲಿ ಜೈಲಿನಿಂದ ಬಿಡುಗಡೆ ಮಾಡಿತು. ಅಷ್ಟರಲ್ಲಿ ಸಾಯಿಬಾಬಾರ ಆರೋಗ್ಯ ತುಂಬಾ ಹದಗೆಟ್ಟಿತ್ತು. ಬಂಧಿಖಾನೆಯಿಂದ ಬಿಡುಗಡೆಯಾದ 7 ತಿಂಗಳ ನಂತರ ಜನರಿಗಾಗಿ ಮಿಡಿದ ಹೃದಯವಂತನ ಜೀವ ತಣ್ಣಗಾಯಿತು. ಪ್ರಭುತ್ವದ ಕ್ರೌರ್ಯಕ್ಕೆ ಇನ್ನೊಬ್ಬ ಹೋರಾಟಗಾರನ ಜೀವ ಬಲಿಯಾಗಿತು. ಜನಹೋರಾಟದ ದಾರಿಯಲ್ಲಿ ಸಾಯಿಬಾಬಾರವರ ಹೆಸರು ದಾಖಲಾಯಿತು.


ಪ್ರೊ.ಸಾಯಿಬಾಬರ ಸಾವನ್ನು ಸಾವು ಎಂದು ಹೇಳಲು ಸಾಧ್ಯವೇ ಇಲ್ಲ. ಇದೊಂದು ಪ್ರಭುತ್ವ ಪ್ರಾಯೋಜಿತ ಪಿತೂರಿ. ಎಚ್ಚೆತ್ತ ಧ್ವನಿಯನ್ನು ಮೌನವಾಗಿಸುವ ಸರ್ಕಾರಿ ಶಡ್ಯಂತ್ರ. ಸಾಯಿಬಾಬಾರವರ ಮೇಲೆ ಸುಳ್ಳು ಕೇಸು ದಾಖಲಿಸಿ ನಕಲಿ ಸಾಕ್ಷಿಗಳನ್ನು ಸೃಷ್ಟಿಸಿದ ಮಹಾರಾಷ್ಟ್ರ ಪೊಲೀಸರು, ಪೊಲೀಸರ ಮೇಲೆ ಒತ್ತಡ ಹೇರಿ ಸಾಯಿಬಾಬಾರನ್ನು ಜೈಲಿಗೆ ಕಳುಹಿಸಿದ ಮಹಾರಾಷ್ಟ್ರದ ಬಿಜೆಪಿ ಸರ್ಕಾರ, ಶಾಸಕಾಂಗ, ಕಾರ್ಯಾಂಗದ ಮೇಲೆ ಒತ್ತಾಯ ಹೇರಿದ ಕೇಂದ್ರದ ಮೋದಿ ಸರ್ಕಾರ, ವೈದ್ಯಕೀಯ ಚಿಕಿತ್ಸೆ ಕೊಡಿಸದೇ ಅಮಾನವೀಯತೆ ಮೆರೆದ ಜೈಲಾಧಿಕಾರಿಗಳು ಹಾಗೂ ಅನಾರೋಗ್ಯಪೀಡಿತ ವ್ಯಕ್ತಿಗೆ ಜಾಮೀನು ಕೊಡದೇ 10 ವರ್ಷಗಳ ಕಾಲ ನ್ಯಾಯನಿರ್ಣಯ ಕೊಡುವಲ್ಲಿ ವಿಳಂಬ ಮಾಡಿದ ನ್ಯಾಯಾಂಗ ವ್ಯವಸ್ಥೆ.. ಈ ಎಲ್ಲರೂ ಎಲ್ಲವೂ ಸಾಯಿಬಾಬಾರವರ ಕೊಲೆಗೆ ಕಾರಣೀಕರ್ತರು. ಜನಪರ ಹೋರಾಟಗಾರನ ವಿರುದ್ಧ ಇಡೀ ವ್ಯವಸ್ಥೆಯೇ ತಿರುಗಿಬಿದ್ದು ೧೦ ವರ್ಷಗಳ ಕಾಲ ಹಿಂಸಿಸಿ ಅವರ ಸಾವಿಗೆ ಕಾರಣವಾಗಿದ್ದು ಅತ್ಯಂತ ಅಮಾನವೀಯ. 


ಜನಪರ ಹೋರಾಟದ ಹಾದಿಯಲಿ ಸಾಗಿ, ಪ್ರಭುತ್ವದ ದಮನಕ್ಕೊಳಗಾಗಿ ಹುತಾತ್ಮರಾದ ಸಾಯಿಬಾಬಾರವರಿಗೆ ಲಾಲ್ ಸಲಾಂ. ಕ್ರಾಂತಿಕಾರಿ ಸಾಯಿಬಾಬಾ ಅಮರ್ ರಹೆ.. ಸೆರೆಮನೆ ಕುರಿತು ಪ್ರೊ. ಸಾಯಿಬಾಬಾರವರು ಬರೆದ " Why Do You Fear My Way So Much"  ಕವನ ಸಂಕಲನದ ಈ ಒಂದು ಕವನವನ್ನು ಶಿವಸುಂದರ್ ಅವರು ಅನುವಾದ ಮಾಡಿದ್ದಾರೆ. 


ನಿಜವಾದ ಸೆರೆಮನೆ ಇರುವುದು ಎಲ್ಲಿ?


ಗೆಳೆಯಾ,
ನಿಜವಾದ ಸೆರೆಮನೆ ಇರುವುದು.. 


ಆಳೆತ್ತರದ ಗೋಡೆಗಳ ಹಿಂದೆಯೂ ಅಲ್ಲ...
ಏಕಾಂತ ಶಿಕ್ಷೆಯಲ್ಲೂ  ಅಲ್ಲ...
ಪಹರೆಯ ಗಸ್ತಿನ 
ನಡುಗಿಸುವ  ಗುಡುಗಿನಲ್ಲೂ ಅಲ್ಲ..


ಕೂಡಿಹಾಕುವ ಲಾಕಪ್ಪಿನಲ್ಲೂ ಅಲ್ಲ
ಬಣಗುಟ್ಟುವ ಹಗಲುಗಳೂ ಅಲ್ಲ
ಬರಿದಾದ ಇರುಳುಗಳೂ
ಅಲ್ಲ 


ಗೆಳೆಯನೇ...
ನಿಜವಾದ ಸೆರೆಮನೆಯಿರುವುದು..
ನ್ಯಾಯಾಧೀಶರ ಮೇಜಿನ ಮೇಲೆ 
ಮೆರೆಯುತ್ತಿರುವ ಸುಳ್ಳುಗಳ
ನೆರಳಲ್ಲಿ...


ಗೆಳೆಯ,
ನಿಜವಾದ ಸೆರೆಮನೆಯಿರುವುದು...
ಜನರ ಶತ್ರುಗಳು 
ನನ್ನ ಬಗ್ಗೆ ಹರಡಿದ ಕಟ್ಟುಕತೆಗಳಲ್ಲಲ್ಲ  ..


ಅಥವಾ
ನ್ಯಾಯವಿಚಾರಣೆಯೆಂಬ  
ತಂತ್ರ-ಕುತಂತ್ರಗಳಲ್ಲೂ  ಅಲ್ಲ..


ನಿಜವಾದ ಸೆರೆಮನೆಯಿರುವುದು...
ಕೋಟಿಕೋಟಿ ಜನಗಳು 
ಅನ್ಯಾಯದುರಿಯಲ್ಲಿ  ಬೇಯುತ್ತಿದ್ದರೂ 
ಬೀಗ ಒಡೆಯದ ಮೌನದಲ್ಲಿ .. 


ಕೆಲವು ಮೌನಗಳು ಹೇರಲ್ಪಟ್ಟವು..
ಉಳಿದವು
ನಮಗೆ ನಾವೇ ಹೇರಿಕೊಂಡವು!


ಕೆಲವು ನಿಶೇಧಗಳಿಗೆ 
ಆದೇಶವಿದ್ದರೆ..
ಉಳಿದವೆಲ್ಲ 
ವಿಧೇಯರಾಗಿ ನಾವೇ 
ವಿಧಿಸಿಕೊಂಡವು...!


ನಿಜ ಸೆರೆಯ
ಈ ಜಾಲ 
ಬೇಧಿಸುವುದು ಹೇಗೆ ಗೆಳೆಯ ? 
ನಿಜವಾದ ಸೆರೆ 
ಲಾಠಿ ಹುಟ್ಟಿಸುವ ಭೀತಿಯಲ್ಲಿಲ್ಲ .. 


ಬದಲಿಗೆ .. 
ಮಾತಿಲ್ಲದವರಿಗೆ ಮಾತುಕೊಟ್ಟವರೊಳಗೆ 
ಇಣುಕುವ  ಭೀತಿಯಲ್ಲಿದೆ .. 
ಜರ್ಜರವಾಗಿ ಜೀರ್ಣಾವಸ್ಥೆಯಲ್ಲಿರುವ 
ನೈತಿಕತೆಯಲ್ಲಿ ದೆ ..
ಬಿಡುಗಡೆಗಾಗಿ ಮಾಡಿದ 
ಕೂಡು ಹೋರಾಟಗಳ ವಿಸ್ಮೃತಿಯಲ್ಲಿದೆ..


ಗೆಳೆಯ,
ನಮ್ಮ ಸುಂದರ ಲೋಕವನ್ನು 
ನಿಜವಾದ  ಸೆರೆಮನೆಯಾಗಿಸುವುದು 
ಇವು.. 


- ಶಶಿಕಾಂತ ಯಡಹಳ್ಳಿ, ಅಂಕಣಕಾರರು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.