ನವದೆಹಲಿ:ಲೈಂಗಿಕ ಅಪರಾಧಗಳಿಂದ ಮಕ್ಕಳಿಗೆ ರಕ್ಷಣೆ ನೀಡುವ (ಪೋಕ್ಸೋ) ಕಾಯ್ದೆಯಡಿ ಆತ್ಯಾಚಾರದ ಶಿಕ್ಷೆಗೆ ಗುರಿಯಾದ ಆರೋಪಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸುವ ಹಕ್ಕು ಇರಬಾರದು ಎಂದು ರಾಷ್ಟ್ರಪತಿ ರಾಮನಾಥ್ ಕೊವಿಂದ್ ಶುಕ್ರವಾರ (ಡಿಸೆಂಬರ್ 6) ಹೇಳಿದ್ದಾರೆ. ರಾಜಸ್ಥಾನದ ಸಿರೋಹಿಯಲ್ಲಿ ನಡೆದ ಕಾರ್ಯಕ್ರಮವೊಂದರ ವೇಳೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಹೈದರಾಬಾದ್ ಗ್ಯಾಂಗ್ ರೇಪ್ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿದಂತೆ ಪೊಲೀಸರು ಇಂದು ಬೆಳಗ್ಗೆ ನಡೆಸಿರುವ ಎನ್ಕೌಂಟರ್ ಹಿನ್ನೆಲೆಯಲ್ಲಿ ರಾಮನಾಥ್ ಕೊವಿಂದ್ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.


ಹೈದರಾಬಾದ್ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಅಪರಾಧ ಸ್ಥಳಕ್ಕೆ ಕರೆದೊಯ್ಯುತ್ತಿದ್ದ ವೇಳೆ ಆರೋಪಿಗಳು ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದು, ಬಳಿಕ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ನಾಲ್ವರೂ ಸಾವನ್ನಪ್ಪಿದ್ದು ಇಲ್ಲಿ ಗಮನಾರ್ಹ.


ಹೈದರಾಬಾದ್‌ನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಮತ್ತು ಅಪರಾಧ ನಡೆದ ಸ್ಥಳವಾಗಿರುವ ಶಾದ್‌ನಗರದಲ್ಲಿ ಈ ಎನ್‌ಕೌಂಟರ್ ನಡೆದಿದೆ. ತನಿಖೆಯ ಭಾಗವಾಗಿ ನಡೆದ ಘಟನೆಗಳ ಮರುಸೃಷ್ಟಿಗೆ ಪೊಲೀಸರು ಆರೋಪಿಗಳಾದ ಮೊಹಮ್ಮದ್, ಜೊಲ್ಲು ಶಿವ, ಜೊಲ್ಲು ನವೀನ್ ಮತ್ತು ಚಿಂತಕುಂತ ಚೆನ್ನಕೇಶಾವುಲು ಅವರನ್ನು ಘಟನಾ ಸ್ಥಳಕ್ಕೆ ಕರೆದೊಯ್ದಿದ್ದರು. ಈ ವೇಳೆ ಅವರು ಅವರು ಪೊಲೀಸರ ಮೇಲೆ ಹಲ್ಲೆ ಮಾಡುವುದರ ಜೊತೆಗೆ ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಜೊತೆಗೆ ಅವರು ಪೊಲೀಸ್ ಅಧಿಕಾರಿಗಳಿಂದ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆಂದು ವರದಿಯಾಗಿದ್ದು, ನಂತರ ಪೊಲೀಸರು ಆತ್ಮರಕ್ಷಣೆಗಾಗಿ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಕಳೆದ ನವೆಂಬರ್ 27ರ ರಾತ್ರಿ ಆರೋಪಿಗಳು ಸಂತ್ರಸ್ತೆಯ ದೇಹವನ್ನು ಎಸೆದು ಬೆಂಕಿ ಹಚ್ಚಿದ ಸ್ಥಳದಲ್ಲೇ ಪೊಲೀಸರು ಅವರನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ.