ನವದೆಹಲಿ: ಪಂಜಾಬ್ ನ ಬತಿಂದಾದ ಚುನಾವಣಾ ರ್ಯಾಲಿಯೊಂದರಲ್ಲಿ ಭಾಗವಹಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ ಆರೆಸೆಸ್ಸ್ ವಿರುದ್ಧ ವಾಗ್ದಾಳಿ ನಡೆಸಿದರು.


COMMERCIAL BREAK
SCROLL TO CONTINUE READING

"ಇಡೀ ಪಂಜಾಬ್ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಆರೆಸೆಸ್ಸ್ ಜನರು ಬ್ರಿಟಿಷರ ಚಮಚಾಗಿರಿ ಮಾಡುತ್ತಿದ್ದರು ಅವರು ಎಂದಿಗೂ ಕೂಡ ದೇಶದ ಸ್ವಾತಂತ್ರ್ಯ ಚಳುವಳಿಗಾಗಿ ಹೋರಾಟ ನಡೆಸಿಲ್ಲ" ಎಂದು ಹೇಳಿದರು.ಇನ್ನು ಮುಂದುವರೆದು ಮೋದಿ ವಿರುದ್ದ ವಾಗ್ದಾಳಿ ನಡೆಸಿದ ಅವರು "ಮೋದಿ ಕೇವಲ ತಮ್ಮ ಪ್ರಚಾರದಲ್ಲಿ ತೊಡಗಿ ದೊಡ್ಡ ದೊಡ್ಡ ಭರವಸೆಗಳನ್ನು ನೀಡುತ್ತಿದ್ದಾರೆ.ಯಾವುದೇ ಅಭಿವೃದ್ದಿ ಕಾರ್ಯಗಳು ಕಳೆದ 70 ವರ್ಷಗಳಲ್ಲಿ ನಡೆದಿಲ್ಲವೆಂದು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.



ಇತ್ತಿಚಿಗಷ್ಟೇ ಅಧಿಕೃತ ರಾಜಕೀಯಕ್ಕೆ ಪ್ರವೇಶಿಸಿರುವ ಪ್ರಿಯಾಂಕಾ ಗಾಂಧಿಗೆ ಈಗ ಉತ್ತರ ಪ್ರದೇಶದ ಪೂರ್ವ ಭಾಗದ ಉಸ್ತುವಾರಿಯನ್ನು ನೀಡಲಾಗಿದೆ. ಇಲ್ಲಿ ಬಿಎಸ್ಪಿ-ಎಸ್ಪಿ ಮೈತ್ರಿಕೂಟದಿಂದ ಹೊರಗಿರುವ ಕಾಂಗ್ರೆಸ್ ಈಗ ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ.


ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕಿಯಾಗಿರುವ ಪ್ರಿಯಾಂಕಾ ಗಾಂಧಿ ತಮ್ಮ ಭಾಷಣದ ಮೂಲಕ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಿಯಾಂಕಾ ಗಾಂಧಿ ವಾರಣಾಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸುತ್ತಾರೆ ಎನ್ನುವ ಊಹಾಪೋಹವು ಕೇಳಿ ಬಂದಿತ್ತು ,ಆದರೆ ಪಕ್ಷವು ಅವರಿಗೆ ಸಂಘಟನೆ ಜವಾಬ್ದಾರಿ ಹಿನ್ನಲೆಯಲ್ಲಿ ಎಲ್ಲ ಕ್ಷೇತ್ರಗಳಿಗೆ ಪ್ರಚಾರ ಮಾಡಬೇಕಾದ ಹಿನ್ನಲೆಯಲ್ಲಿ ಕಣಕ್ಕೆ ಇಳಿದಿರಲಿಲ್ಲ. ಬದಲಾಗಿ ವಾರಣಾಸಿ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಜಯ್ ರೈ ಅವರನ್ನು ಕಣಕ್ಕೆ ಇಳಿಸಲಾಯಿತು.