ನವದೆಹಲಿ: ಎರಡು ವಿರೋಧಿ ರೌಡಿ ಗ್ಯಾಂಗ್ ಗಳ ನಡುವೆ ನಡೆದ ಶೂಟೌಟ್‌ನಲ್ಲಿ ಇಬ್ಬರು ಬಲಿಯಾಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ದ್ವಾರಕಾ ಮೋರ್ ಮೆಟ್ರೋ ನಿಲ್ದಾಣದ ಬಳಿ ಭಾನುವಾರ ಸಂಜೆ ನಡೆದಿದೆ.


COMMERCIAL BREAK
SCROLL TO CONTINUE READING

ದೆಹಲಿಯ ಜನಜಂಗುಳಿ ಪ್ರದೇಶವಾದ ದ್ವಾರಕಾ ಮೋರ್ ನ ಮೆಟ್ರೋ ನಿಲ್ದಾಣದ ಬಳಿ ಭಾನುವಾರ ಸಂಜೆ ಸುಮಾರು 4 ಗಂಟೆ ವೇಳೆಗೆ ಕಾರಿನಲ್ಲಿ ಬಂದ ಕೆಲವು ದುಷ್ಕರ್ಮಿಗಳು ಬಿಳಿ ರಿಟ್ಝ್ ಕಾರಿನ ಮೇಲೆ ಗುಂಡು ಹಾರಿಸಿದರು. ಸುಮಾರು 15 ಸುತ್ತುಗಳ ಗುಂಡು ಹಾರಿಸಿದರು. ಈ ವೇಳೆ ಬಿಳಿ ರಿಟ್ಝ್ ಕಾರಿನಲ್ಲಿದ್ದ ನವಾಡದ ಪ್ರವೀಣ್ ಗೆಹ್ಲೋಟ್ ಗುಂಡೇಟಿಗೆ ಬಲಿಯಾಗಿದ್ದಾರೆ.



ಪೊಲೀಸರ ಪ್ರಕಾರ, ಗುಂಡಿನ ಸದ್ದು ಕೇಳಿದೊಡನೆ ರಸ್ತೆಯ ಇನ್ನೊಂದು ಭಾಗದಲ್ಲಿ ನಿಂತಿದ್ದ ಪಿಸಿಆರ್ ವ್ಯಾನ್ನಲ್ಲಿ ಪೊಲೀಸರು ಗ್ಯಾಂಗ್ ಸ್ಟರ್ ಗಳ ಮೇಲೆ ಗುಂಡಿನ ದಾಳಿ ನಡೆಸಿದರು. ಈ ವೇಳೆ ದುಷ್ಕರ್ಮಿಯೊಬ್ಬ ಮೃತಪಟ್ಟಿದ್ದು, ಆತನನ್ನು ವಿಕಾಸ್ ದಲಾಲ್ ಎಂದು ಗುರುತಿಸಲಾಗಿದೆ. ಇನ್ನುಳಿದ ದುಷ್ಕರ್ಮಿಗಳು ಪರಾರಿಯಾಗಿದ್ದು, ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


ಗ್ಯಾಂಗ್ ಸ್ಟರ್ ಗಳ ಈ ಘರ್ಷಣೆಗೆ ಆಸ್ತಿ ವಿವಾದ ಕಾರಣ. ಎರಡೂ ಗ್ಯಾಂಗ್ ಸ್ಟರ್ ಗಳ ಮೇಲೆ ಕೊಲೆ, ದರೋಡೆ, ಹಣ ಸುಲಿಗೆ ಸೇರಿದಂತೆ ಹಲವು ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.