ನವದೆಹಲಿ: ತ್ರಿಪುರಾದ ದಂಗೆಕೋರರ ಗುಂಪಿನೊಂದಿಗೆ ಕೇಂದ್ರ ಸರ್ಕಾರವು ಶನಿವಾರದಂದು ಶಾಂತಿ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಅಡಿಯಲ್ಲಿ ಸಂಘಟನೆಯು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಸೇರಲು ಒಪ್ಪಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಗೃಹ ಸಚಿವಾಲಯದ ಹೇಳಿಕೆಯ ಪ್ರಕಾರ ಸಬೀರ್ ಕುಮಾರ್ ಡೆಬ್ಬರ್ಮಾ (ಎನ್‌ಎಲ್‌ಎಫ್‌ಟಿ-ಎಸ್‌ಡಿ) ನೇತೃತ್ವದ ನ್ಯಾಷನಲ್ ಲಿಬರೇಶನ್ ಫ್ರಂಟ್ ಆಫ್ ಟ್ವಿಪ್ರ ಹಾಗೂ ಭಾರತ ಮತ್ತು ತ್ರಿಪುರಾ ಸರ್ಕಾರಗಳು ಈ ಒಪ್ಪಂದಕ್ಕೆ ಸಹಿ ಹಾಕಿವೆ ಎನ್ನಲಾಗಿದೆ.ಈ ಶಾಂತಿ ಒಪ್ಪಂದದ ಅಡಿಯಲಿ ಹಿಂಸಾಚಾರದ ಹಾದಿಯನ್ನು ತೊರೆದು ಮುಖ್ಯವಾಹಿನಿಗೆ ಸೇರಲು ಮತ್ತು ಭಾರತದ ಸಂವಿಧಾನವನ್ನು ಪಾಲಿಸಲು ಎನ್‌ಎಲ್‌ಎಫ್‌ಟಿ-ಎಸ್‌ಡಿ ಒಪ್ಪಿದೆ ಎನ್ನಲಾಗಿದೆ. ಈ ಒಪ್ಪಂದದ ಮೂಲಕ ಸಂಘಟನೆಯ 88 ಕಾರ್ಯಕರ್ತರನ್ನು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಲಿದ್ದಾರೆ.


ಈಗ ಶರಣಾದ ಕಾರ್ಯಕರ್ತರಿಗೆ ಗೃಹ ಸಚಿವಾಲಯದ ಶರಣಾಗತಿ-ಪುನರ್ವಸತಿ ಯೋಜನೆ 2018 ರ ಅಡಿಯಲ್ಲಿ ಸೌಲಭ್ಯಗಳನ್ನು ನೀಡಲಿದೆ. ತ್ರಿಪುರ ಸರ್ಕಾರವು ಶರಣಾದ ಕಾರ್ಯಕರ್ತರಿಗೆ ವಸತಿ, ನೇಮಕಾತಿ, ಶಿಕ್ಷಣ ಇತ್ಯಾದಿಗಳಿಗೆ ಸಹಾಯ ಮಾಡುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ರಾಜ್ಯದ ಬುಡಕಟ್ಟು ಪ್ರದೇಶಗಳ ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ತ್ರಿಪುರ ಸರ್ಕಾರದ ಪ್ರಸ್ತಾಪಗಳನ್ನು ಕೇಂದ್ರ ಸರ್ಕಾರ ಪರಿಗಣಿಸಲಿದೆ ಎನ್ನಲಾಗಿದೆ.


1997 ರಿಂದ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿ ಎನ್‌ಎಲ್‌ಎಫ್‌ಟಿಯನ್ನು ನಿಷೇಧಿಸಲಾಗಿದೆ. 2005 ಮತ್ತು 2015 ರ ನಡುವೆ 28 ಭದ್ರತಾ ಪಡೆಗಳ ಸಿಬ್ಬಂದಿ ಮತ್ತು 62 ನಾಗರಿಕರು ಎನ್‌ಎಲ್‌ಎಫ್‌ಟಿ ಹಿಂಸಾತ್ಮಕ ಚಟುವಟಿಕೆಗಳಿಂದಾಗಿ ಮೃತಪಟ್ಟಿದ್ದಾರೆ.ಮೊದಲ ಬಾರಿಗೆ ಎನ್‌ಎಲ್‌ಎಫ್‌ಟಿಯೊಂದಿಗೆ ಶಾಂತಿ ಮಾತುಕತೆಗಳನ್ನು 2015 ರಲ್ಲಿ ಪ್ರಾರಂಭಿಸಲಾಯಿತು. ಆಗಿನಿಂದ ಯಾವುದೇ ಹಿಂಸಾತ್ಮಕ ಘಟನೆಗಳು ನಡೆದಿಲ್ಲ ಎನ್ನಲಾಗಿದೆ.