ಬೆಂಗಳೂರು: ಗ್ರಾಹಕ ಸಂರಕ್ಷಣಾ ಕಾಯ್ದೆಯು 2019ರ ಆಗಸ್ಟ್.09 ರಂತೆ ತಿದ್ದುಪಡಿಯಾಗಿದ್ದು, ಗ್ರಾಹಕ ಸಂರಕ್ಷಣಾ ಕಾಯ್ದೆ-2019ಯು ಜುಲೈ20 ರಿಂದ ಅನ್ವಯವಾಗುವಂತೆ ಜಾರಿಗೆ ತರಲಾಗಿದೆ.


COMMERCIAL BREAK
SCROLL TO CONTINUE READING

ಈ ಸಂದರ್ಭದಲ್ಲಿ ಈ ಕಾಯ್ದೆಯಡಿಯಲ್ಲಾಗಿರುವ ಬದಲಾವಣೆಗಳು:


  • ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸುತ್ತೋಲೆಯನ್ವಯ ಕರ್ನಾಟಕ ರಾಜ್ಯ ಆಯೋಗವು ತಿದ್ದುಪಡಿ ಕಾಯ್ದೆಯ ಆದೇಶದನ್ವಯ ಕ್ರಮ ವಹಿಸಲು ಸೂಚಿಸಿರುವ ಮೇರೆಗೆ ಇನ್ನು ಮುಂದೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಬದಲಾಗಿ ಈ ಕಚೇರಿಯನ್ನು “ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ” ಎಂದು ಬದಲಾಯಿಸಲಾಗಿದೆ.

  • ಈ ಹಿಂದಿನ ಕಾಯ್ದೆಯಲ್ಲಿ ಜಿಲ್ಲಾ ಗ್ರಾಹಕರ ವೇದಿಕೆಗೆ ಇದ್ದ ಆರ್ಥಿಕ ಪರಿಮಿತಿಯ ವ್ಯಾಪ್ತಿ ರೂ.20,00,000/-ವರೆಗಿನ ಪರಿಹಾರ ಮೊತ್ತವನ್ನು ಮಾತ್ರ ಕೋರಲು ಅವಕಾಶವಿತ್ತು ಹಾಗೂ ಗ್ರಾಹಕರ ದೂರನ್ನು ಸಲ್ಲಿಸುವಾಗ ಎದುರುದಾರರು ವ್ಯವಹರಿಸುವ ಅಥವಾ ವಾಸವಿರುವ ಅಥವಾ ಶಾಖಾ ಕಚೇರಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ವೇದಿಕೆಯ ವ್ಯಾಪ್ತಿಯಲ್ಲಿ ಮಾತ್ರ ದೂರನ್ನು ಸಲ್ಲಿಸಬಹುದಾಗಿತ್ತು. ಆದರೆ ಹೊಸ ಕಾಯ್ದೆಯನ್ವಯ, ಗ್ರಾಹಕರು ಒಂದು ಕೋಟಿ ರೂಪಾಯಿಗಳವರೆಗಿನ ಮೊತ್ತದ ಪರಿಹಾರವನ್ನು ಕೋರಿ ಜಿಲ್ಲಾ ಆಯೋಗದ ಮುಂದೆ ದೂರು ಸಲ್ಲಿಸಬಹುದಾಗಿದೆ ಮತ್ತು ನಿಯಮಗಳನುಸಾರ ಪ್ರಮುಖವಾಗಿ ಗ್ರಾಹಕರು ವಾಸಿಸುವ ಜಿಲ್ಲಾ ವ್ಯಾಪ್ತಿಯ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಗ್ರಾಹಕರ ತಮ್ಮ ವಾಸದ ಜಿಲ್ಲಾ ವ್ಯಾಪ್ತಿಯಲ್ಲೆ ದೂರನ್ನು ಸಲ್ಲಿಸಲು ಅನುಕೂಲವಾಗಿದೆ.

  • ವ್ಯಾಜ್ಯಕಾರಣದ ಎರಡು ವರ್ಷಗಳ ಕಾಲಮಿತಿಯಲ್ಲಿ ದೂರು ಸಲ್ಲಿಸುವ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಜೊತೆಗೆ ಉತ್ಪಾದಕರ ಬಾದ್ಯತೆಯನ್ನು (ಪ್ರೊಡಕ್ಷನ್ ಲಿಅಬಿಲಿಟಿ) ಅಂದರೆ ಖರೀದಿಸಿದ ಸರಕಿನಿಂದ ಉಂಟಾದ ಜೀವಹಾನಿ ಅಥವಾ ಆಸ್ತಿ ಹಾನಿ ಉಂಟಾದಲ್ಲಿ ಸರಕಿನ ಉತ್ಪಾದಕರೆ ಪರಿಹಾರವನ್ನು ನೀಡಲು ಬಾದ್ಯಸ್ಥರಾಗಿರುತ್ತಾರೆ.

  • ಒಂದು ವೇಳೆ ಜಿಲ್ಲಾ ಗ್ರಾಹಕರ ಆಯೋಗದ ಆದೇಶವನ್ನು ಪಾಲಿಸದಿದ್ದಲ್ಲಿ, ದಿವಾಣಿ ನ್ಯಾಯಾಲಯದ ನಿಯಮದಂತೆ ವಸೂಲಾತಿ ಕ್ರಮ ಹಾಗೂ ಕನಿಷ್ಠ ರೂ.25,000/- ಹಾಗೂ ಗರಿಷ್ಠ ಒಂದು ಲಕ್ಷ ರೂಪಾಯಿಗಳವರೆಗಿನ ದಂಡ ಅಥವಾ ಕನಿಷ್ಠ ಒಂದು ತಿಂಗಳು ಹಾಗೂ ಗರಿಷ್ಠ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿದಿಸಲು ಕಾಯ್ದೆಯಲ್ಲಿ ತಿದ್ದುಪಡಿ ತರಲಾಗಿದೆ.

  • ಇದಲ್ಲದೆ ದೋಷಪೂರಿತ ವಸ್ತು ಅಥವಾ ಸರಕು ಸರಬರಾಜು ಮಾಡಿ ಅದರಿಂದ ಗ್ರಾಹಕರು ಗಾಯಗೊಂಡಲ್ಲಿ ಕನಿಷ್ಠ ಆರು ತಿಂಗಳು ಜೈಲು ಶಿಕ್ಷೆ ಮತ್ತು ಒಂದು ಲಕ್ಷದವರೆಗಿನ ದಂಡವನ್ನು ವಿದಿಸಬಹುದಾಗಿದೆ. ಒಂದು ವೇಳೆ ಸರಕನ್ನು ಖರೀದಿಸಿದ ಗ್ರಾಹಕರು ತೀವ್ರವಾಗಿ ಗಾಯಗೊಂಡಲ್ಲಿ ಐದು ಲಕ್ಷ ರೂಪಾಯಿ ದಂಡ ಮತ್ತು ಏಳು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಹಾಗೂ ಒಂದು ವೇಳೆ ಗ್ರಾಹಕರಿಗೆ ಪ್ರಾಣ ಹಾನಿ ಉಂಟಾದಲ್ಲಿ ಕನಿಷ್ಠ ಏಳು ವರ್ಷಕ್ಕೆ ಕಡಿಮೆ ಇಲ್ಲದಂತೆ ಅಥವಾ ಜೀವಾವಧಿ ಜೈಲು ಶಿಕ್ಷೆ ಮತ್ತು ಹತ್ತು ಲಕ್ಷ ರೂಪಾಯಿವರೆಗೆ ದಂಡವನ್ನು ವಿದಿಸಬಹುದಾಗಿದೆ.