ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆ ಇದೇ ಡಿಸೆಂಬರ್ 7 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಮತದಾರರನ್ನು ಓಲೈಸಲು ರಾಜಕೀಯ ಪಕ್ಷಗಳು ಸಾಕಷ್ಟು ಕಸರತ್ತು ನಡೆಸಿವೆ. ಈ ಬೆನ್ನಲ್ಲೇ ಮುಖ್ಯಮಂತ್ರಿ ಚಂದ್ರಶೇಖರ ರಾವ್ ನೇತೃತ್ವದ ಆಡಳಿತ ಪಕ್ಷ ಟಿಆರ್ಎಸ್ ವಿಶೇಷ ಅಭಿಯನವೊಂದನ್ನು ಆರಂಭಿಸಿದೆ. 


COMMERCIAL BREAK
SCROLL TO CONTINUE READING

ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಹಲವಾರು ಗಿಮಿಕ್ಗಳನ್ನು ಮಾಡುವುದು ಸಾಮಾನ್ಯ. ಅಂತೆಯೇ ತಾವು ಮತದಾರರಿಗೆ ಸಾಕಷ್ಟು ಹತ್ತಿರದಲ್ಲಿದ್ದೇವೆ, ಅವರ ಸಂಕಷ್ಟಗಳಿಗೆ ಜೊತೆಯಾಗಿ ನಿಲ್ಲುತ್ತೇವೆ ಎಂಬುದನ್ನು ಸಾಬೀತುಪಡಿಸಲು ಟಿಆರ್ಎಸ್ ಪಕ್ಷ ಪ್ರತಿಯೊಂದು ಮನೆ ಬಾಗಿಲಿಗೆ ತೆರಳುವ ಅಭಿಯಾನ ಹಮ್ಮಿಕೊಂಡಿದೆ. ಈ ಸಂದರ್ಭದಲ್ಲಿ ಟಿಆರ್ಎಸ್ ಮುಖಂಡ ಹಾಗೂ ಮಾಜಿ ವಕ್ತಾರ ಮಧುಸೂಧನ್ ಚಾರಿ ಕ್ಷೌರದ ಅಂಗಡಿಯಲ್ಲಿ ಗ್ರಾಹಕರೊಬ್ಬರಿಗೆ ಕ್ಷೌರ ಮಾಡುತ್ತಿರುವುದು ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದೀಗ ಈ ಫೋಟೊ ಸಖತ್ ವೈರಲ್ ಆಗಿದೆ. 


ಮತ್ತೊಂದೆಡೆ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ಗೆಲುವು ಸಾಧಿಸಲೇ ಬೇಕು ಎಂದು ನಿರ್ಧರಿಸಿರುವ ವಿರೋಧ ಪಕ್ಷಗಳಾದ ಟಿಡಿಪಿ ಮತ್ತು ಕಾಂಗ್ರೆಸ್ ಜಂಟಿಯಾಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಿವೆ. ಇದಕ್ಕೆ ನಿದರ್ಶನವೆಂಬಂತೆ ತೆಲಂಗಾಣ ಯುವ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್ ಯಾದವ್ ರಸ್ತೆ ಬದಿಯ ದೋಸೆ ಸ್ಟಾಲ್'ನಲ್ಲಿ ವ್ಯಾಪಾರಿಗೆ ಸಹಾಯ ಮಾಡುತ್ತಿರುವ ದೃಶ್ಯ ಕಂಡುಬಂದಿದೆ. 


ಇನ್ನೊಂದೆಡೆ ಮೆಹಬೂಬ್ ನಗರದ ಟಿಆರ್ಎಸ್ ಅಭ್ಯರ್ಥಿ ಶ್ರೀನಿವಾಸ ಗೌಡ್ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಕೆಲಸಗಾರರಿಗೆ ಸಹಾಯ ಮಾಡಿದ್ದಾರೆ. ನಂತರ ಅಲ್ಲಿಂದ ಮತ್ತೊಂದು ಸ್ಥಳಕ್ಕೆ ತೆರಳಿ ಅಲ್ಲಿನ ಇಸ್ತ್ರಿ ಅಂಗಡಿಯಲ್ಲಿ ಬಟ್ಟೆ ಇಸ್ತ್ರಿ ಮಾಡಿದ್ದಾರೆ. ಹೀಗೆ ತೆಳನ್ಗಾನದಲ್ಲಿ ಮತದಾರರ ಮನವೊಲಿಸಲು ರಾಜಕೀಯ ನಾಯಕರು ಮಾಡುತ್ತಿರುವ ಕಸರತ್ತು ಕಂಡು ಜನರು ಹುಸಿನಗೆಬಿರುತ್ತಿದ್ದಾರೆ.