ಹೈದರಾಬಾದ್: ದೇಶಾದ್ಯಂತ ಭಾರೀ ಪ್ರತಿಭಟನೆಗೆ ಕಾರಣವಾಗಿರುವ ಪೌರತ್ವ (ತಿದ್ದುಪಡಿ) ಕಾಯ್ದೆ(Citizenship Amendment Act) ಬಗ್ಗೆ ಹೇಳಿಕೆ ನೀಡಿರುವ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲೂ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಯನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

"ಕಡಪದಲ್ಲಿ ಮಾತನಾಡಿದ ಸಿಎಂ ಜಗನ್ ಮೋಹನ್ ರೆಡ್ಡಿ(Jagan Mohan Reddy), ನನ್ನ ಅಲ್ಪಸಂಖ್ಯಾತ ಸಹೋದರರು ಎನ್‌ಆರ್‌ಸಿ ಕುರಿತು ನನ್ನ ನಿಲುವನ್ನು ತಿಳಿಸುವಂತೆ ಕೇಳಿದ್ದಾರೆ. ನಾವು ಎನ್‌ಆರ್‌ಸಿಯನ್ನು ವಿರೋಧಿಸುತ್ತೇವೆ ಮತ್ತು ಆಂಧ್ರಪ್ರದೇಶ ಯಾವುದೇ ಸಂದರ್ಭದಲ್ಲೂ ನಾವು ಅದನ್ನು ಬೆಂಬಲಿಸುವುದಿಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ" ಎಂದರು.


ಆಂಧ್ರಪ್ರದೇಶ(Andhra Pradesh) ಸರ್ಕಾರವು ಎನ್‌ಆರ್‌ಸಿಯನ್ನು ಬೆಂಬಲಿಸುವುದಿಲ್ಲ ಎಂದು ಘೋಷಿಸುವ ಮೊದಲು ತಾವು ನಮ್ಮ ಸರ್ಕಾರದ ಉಪಮುಖ್ಯಮಂತ್ರಿ ಅಜ್ಮತ್ ಬಾಷಾ ಶೇಕ್ ಬೆಪಾರಿ ಅವರೊಂದಿಗೆ ಸಮಾಲೋಚಿಸಿರುವುದಾಗಿ ಅವರು ತಿಳಿಸಿದರು.


ಆಂಧ್ರ ಪ್ರದೇಶ ಮುಖ್ಯಮಂತ್ರಿ ಮಾತ್ರವಲ್ಲದೆ ಇತರ ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ತಮ್ಮ ರಾಜ್ಯದಲ್ಲಿ ಎನ್‌ಆರ್‌ಸಿಯನ್ನು ಜಾರಿಗೊಳಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಮಮತಾ ಬ್ಯಾನರ್ಜಿ (ಬಂಗಾಳ), ನಿತೀಶ್ ಕುಮಾರ್ (ಬಿಹಾರ), ನವೀನ್ ಪಟ್ನಾಯಕ್ (ಒಡಿಶಾ), ಅಮರಿಂದರ್ ಸಿಂಗ್ (ಪಂಜಾಬ್), ಕಮಲ್ ನಾಥ್ (ಮಧ್ಯಪ್ರದೇಶ) ಅಶೋಕ್ ಗೆಹ್ಲೋಟ್ (ರಾಜಸ್ಥಾನ) ಮತ್ತು ಪಿಣರಾಯಿ ವಿಜಯನ್ (ಕೇರಳ) ರಾಜ್ಯದಲ್ಲಿ ಎನ್‌ಆರ್‌ಸಿಯನ್ನು ಜಾರಿಗೊಳಿಸುವುದಿಲ್ಲ ಎಂದು ಘೋಷಿಸಿದ್ದಾರೆ.