ಅಹಮದಾಬಾದ್‌: ದೇಶಾದಲ್ಲಿ ಮೂರನೇ ಹಂತದಲ್ಲಿ ನಡೆಯುತ್ತಿರುವ ಮತದಾನದ ವೇಳೆ ಗುಜರಾತಿನ ಅಹಮದಾಬಾದ್‌ನ ರಾಣಿಪ್ ನ ನಿಶನ್ ವಿದ್ಯಾಲಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಮತ ಚಲಾಯಿಸಿದರು. 


COMMERCIAL BREAK
SCROLL TO CONTINUE READING

ರಾಣಿಪ್ ಮತಗಟ್ಟೆಯು ಬಿಜೆಪಿಯ ಅಗ್ರ ನಾಯಕ ಲಾಲ ಕೃಷ್ಣ ಅಡ್ವಾಣಿ ಅವರಿಗೆ ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ತಪ್ಪಿಸಿ ಅವರು ಪ್ರತಿನಿಧಿಸುತ್ತಿದ್ದ ಗುಜರಾತಿನ ಗಾಂಧಿನಗರದಿಂದ ಕಣಕ್ಕಿಳಿದಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸ್ಪರ್ಧಿಸಿರುವ ಗಾಂಧಿನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ. 


ಭದ್ರತೆಯ ನಡುವೆ ತೆರೆದ ಎಸ್ಯುವಿ ವಾಹನದಲ್ಲಿ ಮತದಾನ ಕೇಂದ್ರಕ್ಕೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ತಮ್ಮ ಮತ ಚಲಾಯಿಸಿದರು. ಈ ವೇಳೆ ಮೋದಿ ಅವರಿಗೆ ಅಮಿತ್ ಶಾ ಮತ್ತು ಅವರ ಕುಟುಂಬ ಸಾಥ್ ನೀಡಿತು.


ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, "ಇಂದು ಮೂರನೇ ಹಂತದ ಮತದಾನ ನಡೆಯುತ್ತಿದೆ. ಮತದಾನದ ಕರ್ತವ್ಯವನ್ನು ಪೂರೈಸಿವ ಅವಕಾಶ ನನಗೆ ದೊರೆತಿದ್ದು, ನಾನು ನನ್ನ ಮತ ಚಲಾಯಿಸಿದ್ದೇನೆ. ಕುಂಭದಲ್ಲಿ ಪವಿತ್ರ ಸ್ನಾನ ಮಾಡಿದರೆ ನಾವು ಶುದ್ಧವಾದವೆಂದು ಭಾವಿಸಿದರೆ, ಪ್ರಜಾಪ್ರಭುತ್ವದ ಉತ್ಸವದಲ್ಲಿ ಮತ ಚಲಾಯಿಸುವುದೂ ಕೂಡ ಒಂದು ಪವಿತ್ರ ಕೆಲಸ ಎಂದು ಹೇಳಿದರು.


ಮೊದಲ ಬಾರಿಗೆ ಮತ ಚಲಾಯಿಸುತ್ತಿರುವವರಿಗೆ ತಪ್ಪದೇ ತಮ್ಮ ಕರ್ತ್ಯವ್ಯ ಪಾಲಿಸಿ ಎಂದು ಕರೆ ನೀಡಿದ ಮೋದಿ, "ಭಯೋತ್ಪಾದನೆಯ ಆಯುಧ IED ಆದರೆ, ಪ್ರಜಾಪ್ರಭುತ್ವದ ಅಸ್ತ್ರ ವೋಟರ್ ಐಡಿ. ಮತದಾರರ ಐಡಿ IEDಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ಹಾಗಾಗಿ ಮತದಾರರು ತಮ್ಮ ಮತದಾನದ ಬಲವನ್ನು ಅರ್ಥ ಮಾಡಿಕೊಳ್ಳಬೇಕು" ಎಂದು ಪ್ರಧಾನಿ ಮೋದಿ ತಿಳಿಸಿದರು.



"ಮತದಾನ! ಇದು ನಮ್ಮ ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದರಲ್ಲಿ ಮಹತ್ವದ್ದಾಗಿದೆ" ಎಂದು ಅವರು ಟ್ವೀಟ್ ಕೂಡ ಮಾಡಿದ್ದಾರೆ.