ಬೆಂಗಳೂರು: ಬೀದಿಬದಿ ವ್ಯಾಪಾರಸ್ಥರ ಸಹಕಾರ ನೀಡುವ ಉದ್ದೇಶದಿಂದ ಸಮ್ಮಿಶ್ರ ಸರಕಾರದಿಂದ 'ಬಡವರ ಬಂಧು' ಯೋಜನೆಗೆ ಚಾಲನೆ‌ ನೀಡಿದ್ದು, ಅಧಿಕಾರಿಗಳು ಫಲಾನುಭವಿಗಳಿಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ‌ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.


COMMERCIAL BREAK
SCROLL TO CONTINUE READING

ಯಶವಂತಪುರ ಎಪಿಎಂಸಿ ಯಾರ್ಡ್‌‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಡವರ ಬಂಧು ಯೋಜನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ 1.4 ಲಕ್ಷ ಬೀದಿಬದಿ ವ್ಯಾಪಾರಸ್ಥರಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲೇ 80 ಸಾವಿರ ವ್ಯಾಪಾರಸ್ಥರಿದ್ದಾರೆ. ಇವರು ಮುಂಜಾನೆ ಮತ್ತೊಬ್ಬರಿಂದ ಬಡ್ಡಿ ಸಾಲ ಪಡೆದು ಸಂಜೆ ಒಳಗೆ ದುಡಿದ ಕಡಿಮೆ ಮೊತ್ತದಲ್ಲಿ ಅವರಿಗೆ ಸಾಲ ವಾಪಾಸ್‌ ಮಾಡಿ, ಉಳಿದ ಹಣದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇವರ ನೆರವಿಗೆ ನಮ್ಮ‌ ಸರಕಾರ ನೆರವಾಗಿರುವುದು ಅತ್ಯಂತ ಅವಶ್ಯಕವಾಗಿದೆ ಎಂದರು.


ಮಧುಗಿರಿಯಲ್ಲಿ ಹೂ ಮಾರುವ ಮಹಿಳೆಯೊಬ್ಬರು ತಮ್ಮ‌ ಅಲ್ಪ ದುಡಿಮೆಯಲ್ಲೇ ತನ್ನ ಮಗನನ್ನು ಐಎಎಸ್‌ ಓದಿಸಿದ್ದರು. ಹೀಗಾಗಿ ಬೀದಿಬದಿ ವ್ಯಾಪಾರಸ್ಥರು ತಮ್ಮ ಬಗ್ಗೆ ಕೀಳರಿಮೆ‌ ಬೆಳೆಸಿಕೊಳ್ಳದೇ ತಮ್ಮ‌ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂದು ಕರೆ ನೀಡಿದರು. 


ಬಡವರ ಬಂಧು ಯೋಜನೆಯಡಿ 53 ಸಾವಿರ ಜನರಿಗೆ ಪ್ರಾರಂಭದಲ್ಲಿ ಸಾಲ ನೀಡಿ, ಹಂತಹಂತವಾಗಿ ಎಲ್ಲರಿಗೂ ಕೊಡುವ ಕೆಲಸ ಮಾಡಲಾಗುತ್ತದೆ. ಸಮ್ಮಿಶ್ರ ಸರಕಾರದ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾದರೂ ಆ ಬಗ್ಗೆ ತಲೆ‌ಕೆಡಿಸಿಕೊಳ್ಳದೇ ಉತ್ತಮ ಆಡಳಿತ ನೀಡುವತ್ತ ನಮ್ಮ ಸರಕಾರ ಹೊರಟಿದೆ. ಈ ಯೋಜನೆಯನ್ನು ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಈ ಇಲಾಖೆಯ ಅಧಿಕಾರಿಗಳು ಪ್ರಾಮಾಣಿಕವಾಗಿ ಮಾಡಬೇಕಿದೆ ಎಂದರು.