ಬೆಂಗಳೂರು: ಕೊರೊನಾದಿಂದ ಬೀದರ್ ನ ಬಸವಕಲ್ಯಾಣದ ಶಾಸಕ ಬಿ.ನಾರಾಯಣರಾವ್ ಅವರು ತಮ್ಮ 65 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಮಧಾಹ್ನ 3.55 ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.ಮೃತರಿಗೆ ಪತ್ನಿ ಹಾಗೂ ಇಬ್ಬರು ಪುತ್ರರಿದ್ದಾರೆ.


COMMERCIAL BREAK
SCROLL TO CONTINUE READING

ಅಗಸ್ಟ್ 31 ರಂದು ನಾರಾಯಣ್ ರಾವ್ ಅವರಿಗೆ ಕೊರೊನಾ ಸೋಂಕು ಇರುವುದು ಧೃಡಪಟ್ಟಿತ್ತು.ತದನಂತರ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದರೂ ಕೂಡ ಮತ್ತೆ ಅವರಿಗೆ ಸ್ಥಿತಿಯಲ್ಲಿ ಏರುಪೇರಾಗಿತ್ತು.


ಕೇಂದ್ರ ರಾಜ್ಯ ಖಾತೆ ರೈಲ್ವೆ ಸಚಿವ ಸುರೇಶ್ ಅಂಗಡಿ ಇನ್ನಿಲ್ಲ


ಅವರಿಗೆ ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡು ಕಾಮಾಲೆ ಅಧಿಕ ರಕ್ತದೊತ್ತಡದಿಂದಾಗಿ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿತು. ಅವರಿಗೆ ತದನಂತರ ಕೃತಕ ಉಸಿರಾಟ ವ್ಯವಸ್ಥೆಯನ್ನು ಮಾಡಲಾಯಿತು.ಆದರೆ ಕೊನೆಗೆ ಚಿಕಿತ್ಸೆ ಫಲಕಾರಿಯಾಗದ ಹಿನ್ನಲೆಯಲ್ಲಿ ಅವರ ಮಣಿಪಾಲ್ ಆಸ್ಪತ್ರೆಯ ವೈದ್ಯರು ಬಿ.ನಾರಾಯಣರಾವ್ ಅವರ ನಿಧನವನ್ನು ಗುರುವಾರ ಸಾಯಂಕಾಲ ಪ್ರಕಟಿಸಿದರು. 



ಹಲವು ವರ್ಷಗಳ ಕಾಲ ರಾಜಕಾರಣದಲ್ಲಿದ್ದರೂ ಕೂಡ ಅವರಿಗೆ ಅಧಿಕಾರವನ್ನು ಎಂದಿಗೂ ಅನುಭವಿಸಿರಲಿಲ್ಲ, ಈ ಹಿಂದೆ 1989 ರಲ್ಲಿ ಎಚ್.ಡಿ.ದೇವೇಗೌಡರು ಅವರಿಗೆ ಪಕ್ಷದ ಟಿಕೆಟ್ ನೀಡಿದ್ದರೂ ಸಹ ಗೆಲ್ಲಲು ಸಾಧ್ಯವಾಗಿರಲ್ಲ, ಆದರೆ 2013 ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸೋಲನ್ನು ಅನುಭವಿಸಿ ಕೊನೆಗೆ 2018ರಲ್ಲಿ ಮೊದಲ ಬಾರಿಗೆ ಶಾಸಕರಾಗುವಲ್ಲಿ ಯಶಸ್ವಿಯಾಗಿದ್ದರು.ಈ ಹಿಂದೆ ವಿಧಾನಸಭಾ ಅಧಿವೇಶನದಲ್ಲಿ ತಮ್ಮ ಪ್ರಾಮಾಣಿಕ ಮಾತುಗಳಿಂದ ರಾಜ್ಯದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.



ಈಗ ಅವರ ನಿಧನಕ್ಕೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ." ಮೊದಲ‌ ಸಲ ಶಾಸಕರಾಗಿ ಭರವಸೆಯ ನಾಯಕನಾಗಿ ಬೆಳೆಯುತ್ತಿದ್ದ ಬಿ.ನಾರಾಯಣ ರಾವ್ ನಡುಹಾದಿಯಲ್ಲಿ ಬಾಳಪಯಣ ಕೊನೆಗೊಳಿಸಿ ನಮ್ಮನ್ನು ಶೋಕದಲ್ಲಿ ಮುಳುಗಿಸಿದ್ದಾರೆ.ವೈಯಕ್ತಿಕವಾಗಿ ನನಗೆ ಆತ್ಮೀಯರಾಗಿದ್ದ ನಾರಾಯಣ ರಾವ್, ಹಲವಾರು ಕನಸುಗಳನ್ನು ಕಟ್ಟಿಕೊಂಡಿದ್ದ ಸಾಮಾಜಿಕ ಬದ್ದತೆಯ ನಾಯಕ. ಹೀಗಾಗಬಾರದಿತ್ತು.ನನ್ನ ಸಂತಾಪಗಳು.'ಎಂದು ಸಂತಾಪ ಸೂಚಿಸಿದ್ದಾರೆ.



ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿ."ಬಸವಕಲ್ಯಾಣ ಕ್ಷೇತ್ರದ ಶಾಸಕರಾದ ನಾರಾಯಣ ರಾವ್ ಅವರ ನಿಧನ ತೀವ್ರ ನೋವುಂಟು ಮಾಡಿದೆ. ಜನಪರ ಕಾಳಜಿಯುಳ್ಳ ಜನಪ್ರತಿನಿಧಿಯೊಬ್ಬರನ್ನು ಕಳೆದುಕೊಂಡಂತಾಗಿದೆ.ಕೊರೋನಾ  ಸೋಂಕಿನಿಂದ ಮೃತರಾದ ನಾರಾಯಣರಾವ್ ಅವರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಅವರ ಕುಟುಂಬದವರಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಸಂತಾಪ ಸೂಚಿಸಿದ್ದಾರೆ.