ಬೆಂಗಳೂರು: ಬಿಎಂಟಿಸಿ ಬಸ್‌ಗಳು ರಸ್ತೆ ಮಧ್ಯೆಯೇ ಹೊತ್ತಿ ಉರಿದ ಪ್ರಕರಣವನ್ನ ಇಡೀ ಬೆಂಗಳೂರು ನೋಡಿದೆ. ಘಟನೆ ನಡೆಯುತ್ತಿದ್ದಂತೆ ಅಶೋಕ್ ಲೇಲ್ಯಾಂಡ್ ಬಸ್‌ನಲ್ಲಿದ್ದ ದೋಷ ಕಾರಣ ಅಂತ ನಿಗಮವೂ ಬಹಿರಂಗವಾಗೇ ಒಪ್ಪಿಕೊಂಡಿದೆ. ಆದ್ರೀಗ ಬಸ್‌ಗೆ ಆದ ನಷ್ಟವನ್ನ ಡ್ರೈವರ್ ಕಂಡಕ್ಟರ್‌ಗಳಿಂದ ವಸೂಲಿ ಮಾಡಲು ನಿಗಮ ಮುಂದಾಗಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ: ಮಗಳ ಭವಿಷ್ಯಕ್ಕಾಗಿ 30 ವರ್ಷಗಳ ಕಾಲ ಪುರುಷನಾಗಿ ಬದಲಾದ ತಾಯಿ!


ಅದು ಫೆಬ್ರವರಿ 1, ಸಮಯ ಮಧ್ಯಾಹ್ನ 1.30. ಸ್ಥಳ ಜಯನಗರದ ನಂದಾ ಥಿಯೇಟರ್ ಮುಂಭಾಗ. ಚಲಿಸುತ್ತಿದ್ದ ಬಿಎಂಟಿಸಿ ಮಿಡಿಬಸ್ ಏಕಾಏಕಿ ಧಗಧಗನೆ ಹೊತ್ತಿ ಉರಿಯಲಾರಂಭಿಸಿತ್ತು. ಸಡನ್ ಇನ್ಸಿಡೆಂಟ್‌ನಿಂದ ಕಂಗಾಲಾದ ಡ್ರೈವರ್ ಮತ್ತು ಕಂಡೆಕ್ಟರ್ ಹಾಗೋ ಹೀಗೋ ಪ್ರಯಾಣಿಕರನ್ನ ಇಳಿಸಿ ಎಲ್ಲರನ್ನೂ ಸೇಫ್ ಮಾಡಿದ್ದರು. ಆದ್ರೆ ಬಸ್ ಮಾತ್ರ ಅಗ್ನಿಶಾಮಕ ಸಿಬ್ಬಂದಿ ಬರೋವರೆಗೂ ಹೊತ್ತಿ ಉರಿದಿತ್ತು. ಈ ಘಟನೆಗೂ ಮುನ್ನ ಚಾಮರಾಜಪೇಟೆಯ ಮಕ್ಕಳಕೂಟದ ಬಳಿಯೂ ಇಂತಹದೇ ಘಟನೆ ನಡೆದಿತ್ತು. ಇದಾದ ಬಳಿಕ ಶೇಷಾದ್ರಿ ರಸ್ತೆಯಲ್ಲೂ ಇದೇ ರೀತಿ ಮಿಡಿಬಸ್ ಬೆಂಕಿಗಾಹುತಿಯಾಗಿತ್ತು. ಆದ್ರೆ ಈ ಎಲ್ಲಾ ಘಟನೆಗೆ ಅಶೋಕ್ ಲೇಲ್ಯಾಂಡ್‌ ಬಸ್‌ನಲ್ಲಿದ್ದ ದೋಷ ಕಾರಣ ಅಂತ ರಿಪೋರ್ಟ್ ಸಹ ತಜ್ಞರಿಂದ ಬಿಎಂಟಿಸಿಗೆ ಸಲ್ಲಿಕೆ ಆಗಿತ್ತು.  ಹೀಗಾಗೇ ಬಿಎಂಟಿಸಿ ಆ ಬ್ಯಾಚ್‌ನಲ್ಲಿ ಖರೀದಿಸಿದ 186 ಮಿಡಿ ಬಸ್‌ಗಳನ್ನ ಸೇವೆಯಿಂದ ಹಿಂದಕ್ಕೆ ಪಡೆದಿತ್ತು. ಆದರೆ ಇದೀಗ ಸಡನ್ ಆಗಿ ಈ ಘಟನೆಗೆ ನೌಕರರು ಕಾರಣ ಅಂತ ನಿಗಮ ನೋಟೀಸ್ ಜಾರಿ ಮಾಡಿದೆ.


ಬಸ್ ಬೆಂಕಿಗೆ ತಾಂತ್ರಿಕ ವರ್ಗದ ಸಿಬ್ಬಂದಿ ಹಾಗೂ ಡ್ರೈವರ್ ಮತ್ತು ಕಂಡೆಕ್ಟರ್ ಕಾರಣ ಅಂತ ಬಿಎಂಟಿಸಿ ನೋಟೀಸ್ ಜಾರಿ ಮಾಡಿದೆ. ನೋಟೀಸ್‌ಗೆ ಸರಿಯಾದ ಉತ್ತರ ಕೊಡಿ ಇಲ್ಲದಿದ್ರೆ ಬಸ್‌ಗೆ ಹಾನಿಯಾದ 13 ಲಕ್ಷದ 61 ಸಾವಿರದ 311ರೂಪಾಯಿನ್ನ ನಿಗಮಕ್ಕೆ ಪಾವತಿಸಿ ಎಂದು ನೋಟೀಸ್ ಇಶ್ಯೂ ಮಾಡಲಾಗಿದೆ.


ನಿಗಮದ ಈ ಕ್ರಮದಿಂದ ನೌಕರರು ಕಂಗಾಲು: 
ಬಿಎಂಟಿಸಿಯ ರೂಲ್ಸ್‌ ನೌಕರರನ್ನ ಕಂಗಾಲಾಗುವಂತೆ ಮಾಡಿದೆ. ನಿಯಮದ ಪ್ರಕಾರ 9 ಲಕ್ಷ ಕಿಲೋಮೀಟರ್ ಓಡಿಸಿದ ಬಸ್ಗಳನ್ನ ರಸ್ತೆಗಿಳಿಸುವಂತಿಲ್ಲ. ಹೀಗಿದ್ರೂ ನಿಗಮದಲ್ಲಿ 12,13 ಲಕ್ಷ ಓಡಿರೋ ಬಸ್‌ಗಳನ್ನು ನೀಡಲಾಗುತ್ತೆ. ತಾಂತ್ರಿಕ ದೋಷ ಇರೋದು ಗೊತ್ತಿದ್ರೂ ಬಸ್ ನೀಡಲಾಗುತ್ತೆ. ಇದೆಲ್ಲಾ ಇದ್ದು ಈಗ ಬಡಪಾಯಿ ನೌಕರರನ್ನ ಗುರಿಮಾಡೋದು ಎಷ್ಟು ಸರಿ ಎಂದು ನೌಕರರ ಮುಖಂಡರು ಸಿಡಿದೆದ್ದಿದ್ದಾರೆ.


ಬಿಎಂಟಿಸಿಯಿಂದ ಸಮಜಾಯಿಷಿ: 
ಚಾಲಕ ನಿರ್ವಾಹಕ ಅವಘಡದ ವೇಳೆ ಕೆಲವೊಂದಿಷ್ಟು ಮುಂಜಾಗ್ರತೆ ವಹಿಸಬೇಕಿತ್ತು. ಅದನ್ನ ಮಾಡಿಲ್ಲ. ಇದ್ರಿಂದ ನಿಗಮಕ್ಕೆ ನಷ್ಟವಾಗಿದೆ. ಇದೇ ಕಾರಣಕ್ಕೆ ನೋಟೀಸ್ ನೀಡಲಾಗಿದೆ ಎಂದು ಬಿಎಂಟಿಸಿ ಸಮಜಾಯಿಷಿ ನೀಡಿದೆ. 


ಇದನ್ನು ಓದಿ: Chariot Tragedy: ರಥ ಹರಿದು ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ


ಒಟ್ಟಿನಲ್ಲಿ ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆಹಾಕಿದ್ರಂತೆ ಅನ್ನೋ ಹಾಗಾಗಿದೆ ಬಿಎಂಟಿಸಿ ನೌಕರರ ಸ್ಥಿತಿ. ಈಗಾಗಲೇ ಸಂಬಳ ಭತ್ಯೆ ಇಲ್ಲದೇ ಕಂಗಾಲಾಗಿರೋ ನೌಕರರಿಗೆ ಈ ರೀತಿ ಲಕ್ಷ ಲಕ್ಷದ ನೋಟೀಸ್ ಜಾರಿ ಮಾಡಿರೋದು ದೊಡ್ಡ ತಲೆನೋವು ತಂದಿಟ್ಟಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.