ಚಾಮರಾಜನಗರ: ಯಾರೂ ಏನೇ ಟೀಕೆ ಮಾಡಿದರೂ ನಾನು ಅಂಜಲ್ಲ- ಅಳುಕಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಮರಾಜನಗರದಲ್ಲಿ ತಿಳಿಸಿದ್ದಾರೆ. ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 1100 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಟೀಕೆಗಳಿಗೆ ನಮ್ಮ ಸರ್ಕಾರ ಅಳುಕಲ್ಲ, ಸತ್ಯ ಮೇವ ಜಯತೆ ನುಡಿ ಮೇಲೆ ಸತ್ಯ ಹಾಗೂ ಆತ್ಮಸಾಕ್ಷಿ ಮೇಲೆ ಸರ್ಕಾರ ನಡೆಸುತ್ತಿದ್ದೇವೆ, ಜನಪರವಾಗಿ, ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದ್ದೇವೆ ಎಂದರು. 


COMMERCIAL BREAK
SCROLL TO CONTINUE READING

ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗಲಿದೆ ಎಂಬ ಮೂಢನಂಬಿಕೆ ನನಗಿಲ್ಲ, ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗಲ್ಲ- ಇಲ್ಲಿಗೆ ಬಂದರೆ ಪುಣ್ಯ ಸಂಪಾದನೆ ಆಗಲಿದೆ, ಪುಣ್ಯವಂತರಾಗುತ್ತಾರೆ, ಚಾಮರಾಜನಗರದಲ್ಲಿ ಮುಂದಿನ ದಿನಗಳಲ್ಲಿ ಕೈಗಾರಿಕಾ ಕ್ರಾಂತಿ ಮಾಡಲಿದ್ದು ಯುವಕರು, ಬಡವರಿಗೆ ಉದ್ಯೋಗ ಸಿಗಲಿದೆ ಎಂದು ಭರವಸೆ ನೀಡಿದರು.


ಈ ಹಿಂದೆ ನಕಾರಾತ್ಮಕ ಸರ್ಕಾರಗಳಿದ್ದವು, ಒಂದು ಸರ್ಕಾರದ ವೈಫಲ್ಯಗಳನ್ನು ತೋರಿಸಿ ಮತ್ತೊಂದು ಸರ್ಕಾರ ಬರುತ್ತಿತ್ತು. ಈಗ ನಮ್ಮದು ಸಕಾರಾತ್ಮಕ ಸರ್ಕಾರ- ಅಭಿವೃದ್ಧಿ ಕಾರ್ಯಗಳನ್ನು ತೋರಿಸಿ ಜನರ ಬಳಿ ಹೋಗುತ್ತೇವೆ, ನಕಾರಾತ್ಮಕ ಸರ್ಕಾರಗಳಿಂದ ಪಕ್ಷ ಬದಲಾಗುತ್ತಿತ್ತೆ ಹೊರತು ಜನರ ಆಶೋತ್ತರಗಳು ಈಡೇರುತ್ತಿರಲಿಲ್ಲ- ಈಗ ಜನರ ಕಲ್ಯಾಣ ಆಗುತ್ತಿದೆ, ಅಸಾಧ್ಯ ಎಂದುಕೊಂಡಿದ್ದನ್ನು ಸಾಧ್ಯ ಮಾಡುತ್ತಿದ್ದೇವೆ ಇದಕ್ಕೆ ಉತ್ತಮ ಉದಾಹರಣೆಗೆ ಪ್ರತಿ ಮನೆಮನೆಗೂ ಶುದ್ಧ ಕುಡಿಯುವ ನೀರು ಸಂಪರ್ಕ ಕೊಟ್ಟಿರುವುದೇ ಸಾಕ್ಷಿ ಎಂದರು. 


ಇದನ್ನೂ ಓದಿ- ಚಾಮರಾಜನಗರದಲ್ಲಿ ಮಾಜಿ ಸಿಎಂ BS Yadiyurappa ಫೋಟೋ ಇಲ್ಲದ್ದಕ್ಕೆ ಅಭಿಮಾನಿಗಳ ಆಕ್ರೋಶ!


ಎಸ್ಸಿ ಹಾಗೂ ಎಸ್ಟಿ ಮೀಸಲಾತಿ ಹೆಚ್ಚಳ ವೇಳೆ ಕೆಲವರು ವಿರೋಧ ಮಾಡಿದರು, ಹಾಗಾಗಲಿದೆ-ಹೀಗಾಗಲಿದೆ, ಕಾನೂನು ತೊಡಕು ಎನ್ನುತ್ತಿದ್ದರು ಸಂವಿಧಾನದ ಆಶಯದಂತೆ ಜನರಿಗೆ ಕೊಡಬೇಕಾದನ್ನು ಕೊಡಬೇಕು ಎಂದು, ನಾನು ಜನರ ಕಷ್ಟ ನೋಡಿದ್ದರಿಂದ ಯಾರ ಮಾತು  ಕೇಳದೇ ಮೀಸಲಾತಿ ಹೆಚ್ಚಿಸಿದೆ, ಅಧಿಕಾರ ವಹಿಸಿಕೊಂಡ ನಾಲ್ಕೇ ತಾಸಿಗೆ ರೈತ ವಿದ್ಯಾನಿಧಿ ಘೋಷಣೆ ಮಾಡಿದೆ, ರಾಜಶಕ್ತಿ ಇರುವುದು ಜನ ಶಕ್ತಿಗಾಗಿ, ಸರ್ಕಾರಗಳು ಶ್ರೀಮಂತವಾಗಿದ್ದರೇ ಪ್ರಯೋಜನವಿಲ್ಲ. ಜನರು ಶ್ರೀಮಂತವಾಗಿರಬೇಕು ಎಂದು ಅವರು ಅಭಿಪ್ರಾಯಪಟ್ಟರು.


ಸರ್ಕಾರಗಳು ಜನಪ್ರಿಯವಾಗಿರುವುದು ಮುಖ್ಯವಲ್ಲ, ಜನಪಯೋಗಿ ಆಗಿರುವುದು ಮುಖ್ಯ. ನಾನು ನೀರಾವರಿ ಸಚಿವನಾಗಿದ್ದಾಗ ಕೆರೆ ತುಂಬುವ ಯೋಜನೆಯ ಮೊದಲನೇ ಹಂತ ಆರಂಭವಾಯಿತು ಈಗ ನಮ್ಮ ಅವಧಿಯಲ್ಲೇ ಎರಡನೇ ಹಂತ ಮುಕ್ತಾಯಗೊಳ್ಳುತ್ತಿದೆ, ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಿಸುವ ಕೆಲಸಕ್ಕೆ ಮುಂದಾಗುತ್ತೇವೆ, ರೈತನನ್ನು ಸ್ವಾವಲಂಬಿ ಮಾಡುತ್ತೇವೆ ಎಂದರು.


ಹಿಂದಿನ ಸರ್ಕಾರಗಳು ಕೊಡುತ್ತೇವೆ, ಕೊಡ್ತೀನಿ, ಕೊಡಿಸುತ್ತೇನೆ ಎನ್ನುತ್ತಿದ್ದರು, ನಮ್ಮ ಸರ್ಕಾರ ಕೊಡ್ತೀವಿ ಅಂದ್ರೆ ಕೊಟ್ಟೇ ಕೊಡುತ್ತೇವೆ. ಶಾಸಕ ಪುಟ್ಟರಂಗಶೆಟ್ಟಿ ಕುಡಿಯುವ ನೀರು, ರಸ್ತೆಗಾಗಿ ಮನವಿ ಕೊಟ್ಟಿದ್ದಾರೆ, ನಾನು ಇಲ್ಲೇ ಮಂಜೂರಾತಿ ಕೊಡುತ್ತಿದ್ದು ಇನ್ನೊಂದು ವಾರದಲ್ಲಿ ಟೆಂಡರ್ ಕರೆಯಲಿ ಎಂದು ತಿಳಿಸಿದರು.


ಇದನ್ನೂ ಓದಿ- ಮಹದಾಯಿ ಸಮಸ್ಯೆಗೆ ಕಾಂಗ್ರೆಸ್ ಕಾರಣ: ಸಿಎಂ ಬಸವರಾಜ ಬೊಮ್ಮಾಯಿ


ಶಾಸಕ ನಿರಂಜನ ಪರ ಘೋಷಣೆಗಳು ಆಗಾಗ್ಗೆ ಮೊಳಗುತ್ತಿದ್ದವು. ಸಂಸದ ವಿ.ಶ್ರೀನಿವಾಸಪ್ರಸಾದ್ ಮಾತನಾಡುವಾಗಲೂ ಘೋಷಣೆಗಳು ಕೇಳಿಬಂದಾಗ ಸಂಸದರು ಜನರತ್ತ ಹರಿಹಾಯ್ದರು, ಗಂಭೀರವಾಗಿ ಕುಳಿತುಕೊಳ್ಳುವಂತೆ ತಾಕೀತು ಮಾಡಿದರು.


ಈ ಸಂದರ್ಭದಲ್ಲಿ ಸಚಿವರುಗಳಾದ ಆರ್.ಅಶೋಕ್, ವಿ. ಸೋಮಣ್ಣ, ಶಾಸಕರುಗಳಾದ ನಿರಂಜನಕುಮಾರ್, ಸಿ.ಪುಟ್ಟರಂಗಶೆಟ್ಟಿ ಹಾಗೂ ಇನ್ನಿತರರು ಇದ್ದರು. ಚಾಮರಾಜನಗರ ಕಾರ್ಯಕ್ರಮದ ಬಳಿಕ ಹನೂರಿನ ಕಾರ್ಯಕ್ರಮಕ್ಕೆ ಸಿಎಂ ತೆರಳಿದರು. ಮಲೆ ಮಹದೇಶ್ವರ ಬೆಟ್ಟಕ್ಕೂ ಬೊಮ್ಮಾಯಿ ಭೇಟಿ ಕೊಡಲಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.