ಶಿವಮೊಗ್ಗ : ಶಿವಮೊಗ್ಗ ಗಲಭೆಗೆ ಈಶ್ವರಪ್ಪ ಕಾರಣ ಎಂದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಸ್ಥಾನ ಕಳೆದುಕೊಂಡು ಮನೆಯಲ್ಲಿರುವ ಈಶ್ವರಪ್ಪ ಅವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಖಾತರಿಯೂ ಇಲ್ಲ. ಇದರಿಂದ ಹತಾಶರಾಗಿರುವ ಈಶ್ವರಪ್ಪ ಆರ್‌ಎಸ್‌ಎಸ್ ಒಡೆಯರನ್ನು ಒಲಿಸಿಕೊಳ್ಳಲು ಇದೆಲ್ಲ ಮಾಡ್ತಿದ್ದಾರೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು. ಸಿದ್ದರಾಮಯ್ಯ ಅವರ ಈ ಟ್ವೀಟ್‌ಗೆ ಖಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಚಿವ ಈಶ್ವರಪ್ಪ, ನನ್ನದು ನಿಮ್ಮಂತೆ ಅಧಿಕಾರಕ್ಕಾಗಿ ವಿಲವಿಲ ಒದ್ದಾಡುವ ಜಾಯಮಾನವಲ್ಲ. ಕಳ್ಳನ‌ ಮನಸ್ಸು ಹುಳ್ ಹುಳ್ಗೆ ಎಂಬ ಗಾದೆಮಾತಿನಂತೆ ನಿಮ್ಮ ಮನಸ್ಸಿನಲ್ಲಿರುವುದನ್ನೇ ಹೇಳಿದ್ದೀರಿ. ಅಧಿಕಾರದ ಆಸೆಗಾಗಿ ಟಿಪ್ಪು ಪೂಜೆ ಮಾಡಿದ ನಿಮಗೆ ಬೇಕಾದಾಗ ಗಲಭೆ ಮಾಡಿಸುವ ಅಭ್ಯಾಸ ಇದೆ ಎನ್ನುವ ವಿಷಯ ಗೊತ್ತಿರುವ ಸತ್ಯ ಎಂದಿದ್ದಾರೆ. 


COMMERCIAL BREAK
SCROLL TO CONTINUE READING

ಸಿದ್ದರಾಮಯ್ಯ ಜತೆ ಟ್ವೀಟ್ ವಾರ್ ವಿಚಾರ :


ಶಿವಮೊಗ್ಗದಲ್ಲಿ ಇಂದು ಸಿದ್ದರಾಮಯ್ಯ ಜತೆ ಟ್ವೀಟ್ ವಾರ್ ವಿಚಾರವಾಗಿ ಮಾತನಾಡಿದ  ಮಾಜಿ ಸಚಿವ ಈಶ್ವರಪ್ಪನವರು, ಶಿವಮೊಗ್ಗ, ಭದ್ರಾವತಿಯಲ್ಲಿ ಗಲಾಟೆ ನಾನು ಮಾಡಿಸಿದ್ದಾ? ಸಾವರ್ಕರ್ ಫೋಟೋ ಹರಿದು ಹಾಕಿದ್ದು ನಾನಾ? ಆರಾಮವಾಗಿ ಹೋಗುತ್ತಿದ್ದ ಪ್ರೇಮಸಿಂಗ್ ಗೆ ಚಾಕು ಹಾಕಿಸಿದ್ದು ನಾನಾ? ನೇರವಾಗಿ ಕಾಣ್ತಾ ಇದೆ. ಕಾಂಗ್ರೆಸ್ ನ ಕಾರ್ಪೊರೇಟರ್ ಗಂಡ ಸಾವರ್ಕರ್ ಫೋಟೋ ಹರಿದು ಹಾಕಿದ್ದಾರೆ. ಇದು ಗೊತ್ತಿದ್ದರೂ ಸಿದ್ದರಾಮಯ್ಯ, ಡಿಕೆಶಿಗೆ ಕ್ಷಮೆ ಕೇಳುವ ಸೌಜನ್ಯ ಇಲ್ಲ. ಆದಾಗ್ಯೂ ಗಲಾಟೆಗೆ ನಾನೇ ಕಾರಣ ಎನ್ನುವವರಿಗೆ ಇನ್ನೇನು ಹೇಳಲಿ. ಹೌದು ನಾನೇ.. ಭಂಡರಿಗೆ ಭಂಡತನದ ಉತ್ತರ ಕೊಡಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Rajinikanth as Governor: ರಾಜ್ಯಪಾಲರಾಗಿ ನೇಮಕವಾಗಲಿದ್ದಾರಾ ರಜನಿಕಾಂತ್‌?


ಒಬ್ಬರನ್ನೊಬ್ಬರು ಹೊಗಳಿಕೊಳ್ಳಲು ರಾಜಕಾರಣನಾ? 


ರಾಜಕಾರಣದಲ್ಲಿ ಟ್ವೀಟ್ ವಾರ್ ಇದ್ದೇ ಇದೆ. ಎದುರು ಬದುರು ಟೀಕೆನೂ ಮಾಡ್ಕೊಳ್ತೀವಿ. ಒಬ್ಬರನ್ನೊಬ್ಬರು ಹೊಗಳಿಕೊಳ್ಳಲು ರಾಜಕಾರಣನಾ? ಅವರಿಗೆ ನಾವು ಬಯ್ಯೋದು, ನಮಗೆ ಅವರು ಬಯ್ಯೋದೇ ರಾಜಕಾರಣ. ನಾವು ತಪ್ಪು ಮಾಡಿದ್ದನ್ನು ಅವರು ಹೇಳ್ತಾರೆ. ಅವರು ತಪ್ಪು ಮಾಡಿದ್ದನ್ನು ನಾವು ಹೇಳ್ತೀವಿ. ನಾವು ಮಾಡಿದ ಕೆಲಸವನ್ನೆಲ್ಲ ಅವರು ಹೊಗಳ್ತಾರಾ? ಅವರು ಮಾಡಿದ್ದನ್ನು ನಾವು ಹೊಗಳ್ತೀವಾ? ಆಡಳಿತ ದೃಷ್ಟಿಯಿಂದ ಟೀಕೆಯನ್ನು ಒಳ್ಳೆಯ ರೀತಿಯಲ್ಲಿ ತಗೊಳ್ತೀವಿ ಎಂದಿದ್ದಾರೆ.


ಸರ್ಕಾರದ ವಿರುದ್ಧ ಕಾಂಗ್ರೆಸ್ ಹೋರಾಟ ವಿಚಾರ : 


ಅವರು ಪಕ್ಷದಲ್ಲಿ ಇರೋದನ್ನು ತೋರಿಸಲು ಬೇಕಾದ್ದನ್ನು ಮಾಡಲಿ. ನಾವು ವಿರೋಧ ಪಕ್ಷದಲ್ಲಿದ್ದಾಗ ಸಾಕಷ್ಟು ಕಾರ್ಯಕ್ರಮ ಮಾಡಿದ್ವಿ. ಪಾಪ ಅವರು ಮಲ್ಕೊಂಡಿದ್ರು. ಈಗ ಅವರಿಬ್ಬರೂ ನಾನೇ ಮುಖ್ಯಮಂತ್ರಿ ಎಂದು ಬಡಿದಾಡ್ತಿದ್ದಾರೆ. ಚಿತ್ರದುರ್ಗದ ಜಾತಿ ಸಭೆಯಲ್ಲೂ ಅವರಿಬ್ಬರೂ ಬಡಿದಾಡಿದ್ದಾರೆ. ಅವರ ಸ್ವಾಮಿಗಳು ಇವರಿಬ್ಬರಲ್ಲಿ ಒಬ್ಬರಾಗಲಿ ಅಂತಾರೆ. ನಾನು ಬಿಟ್ಟರೆ ಮುಖ್ಯಮಂತ್ರಿ ಆಗೋರು ಪ್ರಪಂಚದಲ್ಲಿ ಬೇರೆ ಯಾರೂ ಇಲ್ಲ ಅಂತಾರೆ. ಅಧಿಕಾರದ ಆಸೆಗೆ ಈ ದೇಶ ತುಂಡಾಯ್ತು. ಇಡೀ ಹಿಂದುಸ್ತಾನ ಒಟ್ಟಾಗಿರಬೇಕು ಅಂತ ಅನೇಕ ಮಹಾಪುರುಷರು ಹೋರಾಟ ಮಾಡಿದ್ರು. ಪಾಕಿಸ್ತಾನ, ಹಿಂದುಸ್ತಾನ ಆಗಲು ಬೇರೆ ಯಾವ ಕಾರಣವೂ ಅಲ್ಲ, ಅಂದಿನ ಕಾಂಗ್ರೆಸ್ ನ ಕೆಲವರು ಮಾಡಿದ್ದು. ಅದೇ ದಿಕ್ಕಿನಲ್ಲಿ ಡಿಕೆಶಿ, ಸಿದ್ದರಾಮಯ್ಯ ಹೊರಟಿದ್ದಾರೆ ಎಂದು ಕುಟುಕಿದ್ದಾರೆ. 


ಇದನ್ನೂ ಓದಿ: ಅಕ್ರಮ ವಲಸಿಗರು ಪಾಕ್‌ಗೆ ವಾಪಸ್! ವಿಶೇಷ ಒಪ್ಪಂದಕ್ಕೆ UK ಸರ್ಕಾರ ಸಹಿ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.