ಬೆಂಗಳೂರು: ಜನರಿಗೆ ಆರ್ಥಿಕ ಹಾಗೂ ಸಾಮಾಜಿಕ ಶಕ್ತಿ ತುಂಬಲು ಸರ್ಕಾರ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು ಅವರು ಇಂದು ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ವತಿಯಿಂದ ಆಯೋಜಿಸಿದ್ದ ಹಾಲುಮತ ಸಂಸ್ಕೃತಿ ವೈಭವ - 2024 ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.


COMMERCIAL BREAK
SCROLL TO CONTINUE READING

ಶೋಷಿತ ಸಮುದಾಯಗಳು ಸಮಾವೇಶಗಳ ಮೂಲಕ ಸಂಘಟಿಸಿ ಸಂವಿಧಾನದ ಹಕ್ಕುಗಳನ್ನು ಪಡೆಯಲು ಹೋರಾಡಬೇಕು. ಕುರುಬರು ಎಲ್ಲ ರಂಗಗಳಲ್ಲಿಯೂ ಮುಂದೆ ಬರಬೇಕು ಎಂದು ಹೇಳಿದರು.


ಸಮಾಜದಲ್ಲಿ ಅವಕಾಶ ದೊರೆತವರು ಮುಂದುವರೆದರು ಮೇಲ್ಜಾತಿಯವರಾದರು. ಅವಕಾಶ ವಂಚಿತರು ಹಿಂದುಳಿದು ಕೆಳಜಾತಿಯವರಾದರು. ಚತುರ್ವಣ ವ್ಯವಸ್ಥೆಯನ್ನು ದೇವರು ಮಾಡಲಿಲ್ಲ. ಮನುಷ್ಯನ ಸ್ವಾರ್ಥದಿಂದಾಗಿ ಮಾಡಿಕೊಂಡಿದ್ದೇವೆ. ಮಹಿಳೆಯರೂ ಅವಕಾಶ ವಂಚಿತರಾಗಿದ್ದರು. ಅಂಬೇಡ್ಕರ್ ಅವರು ಎಲ್ಲರಿಗೂ ಶಿಕ್ಷಣ ಕಡ್ಡಾಯ ಎಂದು ಸಂವಿಧಾನದಲ್ಲಿ ಹೇಳಿದ್ದಾರೆ. ಅಕ್ಷರ ಸಂಸ್ಕೃತಿಯಿಂದ ವಂಚಿತರಾದವರು ಶೂದ್ರರಾದರು. ಸಮಾಜವನ್ನು ವಿಂಗಡಿಸಿ ಸ್ವಾರ್ಥಕ್ಕಾಗಿ ಲಾಭ ಗಳಿಸುವ ಪ್ರಯತ್ನವನ್ನು ಒಂದು ವರ್ಗ ಮಾಡಿತ್ತು ಎಂದು ಮರೆಯಬಾರದು. ಇದರ ಲಾಭ ಪಡೆದವರು ಈಗಲೂ ಆ ಪ್ರಯತ್ನ ವನ್ನು ಮಾಡುತ್ತಿದ್ದಾರೆ. ಶೋಷಣೆಗೆ ಒಳಪಟ್ಟವರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು . ಕುರುಬರೂ ಇದರಲ್ಲಿ ಸೇರಿದ್ದಾರೆ ಎಂದರು.


ಇದನ್ನೂ ಓದಿ: ಟ್ರಾಫಿಕ್ ಕಂಟ್ರೋಲ್‌ಗೆ ಸಹಕಾರಿ ಈ ರಿಂಗ್‌ರೈಲ್ ಯೋಜನೆ


ಮೇಲು, ಕೀಳೆಂದು ಜಾತಿಬೇಧ ಮಾಡುವುದು ನಿರರ್ಥಕ ಎಂದು ಬಸವಾದಿ ಶರಣರು, ಕನಕದಾಸರು ತಿಳಿಸಿದ್ದರು. ಕಾಯಕ ಮತ್ತು ದಾಸೋಹದಂತಹ ಮೌಲ್ಯಗಳನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಕೇವಲ ರಾಜಕೀಯ ಪ್ರಜಾಪ್ರಭುತ್ವ ಅಲ್ಲದೇ ಆರ್ಥಿಕ ಹಾಗೂ ಸಾಮಾಜಿಕ ಪ್ರಜಾಪ್ರಭುತ್ವ ಸ್ಥಾಪಿತವಾಗಬೇಕು ಎಂದು ಡಾ. ಅಂಬೇಡ್ಕರ್ ಪ್ರತಿಪಾದಿಸಿದ್ದರು. ಹಿಂದುಳಿದವರು ಕೈಗಾರಿಕೆ, ಶಿಕ್ಷಣ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿಯೂ ಅಭಿವೃದ್ಧಿ ಹೊಂದಿ ಮುಖ್ಯವಾಹಿನಿಗೆ ಬರಬೇಕು. ಶಿಕ್ಷಣ ಪಡೆದಾಗ ಮಾತ್ರ ದೌರ್ಜನ್ಯಗಳನ್ನು ಎದುರಿಸಿ ಸ್ವಾವಲಂಬಿಗಳಾಗಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.


ಜನರಿಗೆ ಆರ್ಥಿಕ ಹಾಗೂ ಸಾಮಾಜಿಕ ಶಕ್ತಿ ತುಂಬಲು ಸರ್ಕಾರ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಶಕ್ತಿ ಯೋಜನೆಯಡಿ ಮಹಿಳೆಯರು 130.28 ಕೋಟಿ ಬಾರಿ ಉಚಿತ ಪ್ರಯಾಣ ಮಾಡಿದ್ದಾರೆ. 1.17 ಕೋಟಿ ಕುಟುಂಬಗಳ ಯಜಮಾನಿಗೆ ತಲಾ ರೂ.2,000, ಗೃಹಲಕ್ಷ್ಮಿ ಯೋಜನೆ, 200 ಯೂನಿಟ್ ಉಚಿತ ವಿದ್ಯುತ್, 5 ಕೆಜಿ ಅಕ್ಕಿ ಹಾಗೂ ಯುವನಿಧಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಬೆಲೆ ಏರಿಕೆಯ ಕಾಲಮಾನದಲ್ಲಿ ಜನರಲ್ಲಿ ಕೊಂಡುಕೊಳ್ಳುವ ಶಕ್ತಿ ಹೆಚ್ಚಾಗಬೇಕು. ಆದ್ದರಿಂದ ಸಾರ್ವತ್ರಿಕ ಮೂಲ ಆದಾಯ ತತ್ವವನ್ನಾಧರಿಸಿ ಗ್ಯಾರಂಟಿ ಯೋಜನೆಗಳನ್ನು ನೀಡಲಾಗಿದೆ. ಇಂತಹ ಜನಪರ ಯೋಜನೆಗಳಿಗೆ ಟೀಕೆಗಳು ಬಂದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಶೋಷಿತರು, ಬಡವರು, ದೀನದಲಿತರು, ಅಲ್ಪಸಂಖ್ಯಾತರು, ದುರ್ಬಲವರ್ಗದವರ ಪರ ನಾನು ಸದಾ ನಿಂತಿರುತ್ತೇನೆ ಎಂದು ಹೇಳಿದರು.


ಇದನ್ನೂ ಓದಿ: Crime News: ಪ್ರಿಯಕರನೊಂದಿಗೆ‌ ಬೆಡ್‌ ರೂಮ್‌ನಲ್ಲಿದ್ದಾಗ ಬಂದ ಪತಿಯ ಕೊಂದ ಪತ್ನಿ.. ಹೃದಯಾಘಾತ ಎಂದು ಹೈಡ್ರಾಮಾ!


ಇತಿಹಾಸ ತಿಳಿಯದವರು ಭವಿಷ್ಯವನ್ನು ರೂಪಿಸಲು ಸಾಧ್ಯವಿಲ್ಲ. ಇತಿಹಾಸ ತಿಳಿದವರು ಮಾತ್ರ ಅವರ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ. ಹಿಂದೆ ಏನಾಗಿದ್ದೆವು, ಮುಂದೇನಾಗಬೇಕು ಎಂದು ಚರ್ಚೆಗಳಾಗಲು ಇಂಥ ಸಮಾವೇಶಗಳು ಅಗತ್ಯ. ಜಾತಿ ಮಾಡಿದವರೇ ಜಾತಿ ಸಮಾವೇಶ ಮಾಡಬಾರದು ಎನ್ನುತ್ತಾರೆ. ಅಂಥವರ ಬಗ್ಗೆ ಎಚ್ಚರಿಕೆ ಅಗತ್ಯ. ರಾಜಕೀಯ ಚಿಂತಕ ಲೋಹಿಯಾ ಅವರು 'ಮುಂದುವರೆದ ಜಾತಿಗಳು ಜಾತಿ ಸಮಾವೇಶ ಮಾಡಿದರೆ ಅದು ಜಾತಿವಾದವಾಗುತ್ತದೆ. ಹಿಂದುಳಿದವರು, ಶೋಷಣೆಗೆ ಒಳಪಟ್ಟವರು ಸಂಘಟನೆಗಾಗಿ ಸಮಾವೇಶ ಮಾಡಿದರೆ ಅದು ಜಾತಿ ಸಮಾವೇಶ ಅಲ್ಲ' ಎಂದಿದ್ದಾರೆ.ಶಿಕ್ಷಣ, ಸಂಘಟನೆ, ಹೋರಾಟ ಈ ಮೂರೂ ಮಂತ್ರಗಳನ್ನು ಹಿಂದುಳಿದವರಿಗೆ, ಶೋಷಿತರಿಗೆ ಅಂಬೇಡ್ಕರ್ ಕೊಟ್ಟಿದ್ದಾರೆ. ಸಂಘಟನೆ ಮಾಡಿ ಚರ್ಚೆ ಮಾಡದೆ ಹೋದರೆ ಹೋರಾಟ ಮಾಡಲು ಸಾಧ್ಯವಿಲ್ಲ. ಶಿಕ್ಷಣ ಇಲ್ಲದಿದ್ದರೆ ಸಂಘಟನೆ ಹೇಗೆ ಮಾಡಲು ಸಾಧ್ಯ. ಅದಕ್ಕೆ ಪ್ರತಿಯೊಬ್ಬರೂ ಶಿಕ್ಷಣ ಪಡೆದುಕೊಳ್ಳಲೇಬೇಕು ಎಂದು ಅವರು ಆಗ್ರಹಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.