ಆಕ್ಸಿಡೆಂಟಲ್ ಸಿಎಂ ಅಂತಾ ಸಿನಿಮಾ ಮಾಡಿದ್ರೆ, ಸಿಎಂ ಕುಮಾರಸ್ವಾಮಿ ಪಾತ್ರ ಮಾಡೋರು ಯಾರು?
ಒಂದು ವೇಳೆ ಆಕ್ಸಿಡೆಂಟಲ್ ಸಿಎಂ ಎಂದು ಸಿನಿಮಾ ಮಾಡಿದರೆ, ಸಿಎಂ ಕುಮಾರಸ್ವಾಮಿ ಪಾತ್ರ ಯಾರು ಮಾಡ್ತಾರೆ? ಎನ್ನುವ ಮೂಲಕ ಬಿಜೆಪಿ ರಾಜ್ಯ ಘಟಕ ಸಿಎಂ ಕುಮಾರಸ್ವಾಮಿ ಅವರನ್ನು ಟಾರ್ಗೆಟ್ ಮಾಡಿದೆ.
ಬೆಂಗಳೂರು: ಅನುಪಮ್ ಖೇರ್ ನಟಿಸಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕುರಿತಾದ 'ಆಕ್ಸಿಡೆಂಟಲ್ ಪ್ರೈಮಿನಿಸ್ಟರ್' ಸಿನಿಮಾ ಟ್ರೇಲರ್ ಬಗ್ಗೆ ವಿವಾದ ಹುಟ್ಟಿಕೊಂಡಿರುವ ಬೆನ್ನಲ್ಲೇ ರಾಷ್ಟ್ರೀಯ ಪಕ್ಷ ಬಿಜೆಪಿ ಹೊಸ ಹೆಸರನ್ನು ಎಳೆದು ತರುವ ಮೂಲಕ ಕರ್ನಾಟಕದ ಮುಖ್ಯಮಂತ್ರಿಯನ್ನು ಟಾರ್ಗೆಟ್ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ಕರ್ನಾಟಕ ಘಟಕ, "ಒಂದು ವೇಳೆ ಆಕ್ಸಿಡೆಂಟಲ್ ಸಿಎಂ ಎಂದು ಸಿನಿಮಾ ಮಾಡಿದರೆ, ಸಿಎಂ ಕುಮಾರಸ್ವಾಮಿ ಪಾತ್ರ ಯಾರು ಮಾಡ್ತಾರೆ?" ಎನ್ನುವ ಮೂಲಕ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಟೀಕಿಸಿದೆ.
ಅಷ್ಟೇ ಅಲ್ಲದೆ, ಹೊಸ ಸರ್ಕಾರ ರಚನೆಯಾದ ನಂತರ 377 ರೈತರು ಪ್ರಾಣ ಬಿಟ್ಟಿದ್ದಾರೆ. 156 ತಾಲೂಕುಗಳಲ್ಲಿ ಬರಗಾಲ ತಾಂಡವವಾಡುತ್ತಿದೆ. ರಾಜ್ಯದಲ್ಲಿ ಇನ್ನೂ ರೈತರ ಸಾಲ ಮನ್ನಾ ಮಾಡಿಲ್ಲ. ಆದರೆ, ಮಣ್ಣಿನ ಮಗ ಎಂದು ಹೇಳಿಕೊಳ್ಳುವ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾತ್ರ, ಸಿಂಗಾಪುರದಲ್ಲಿ ಹೊಸ ವರ್ಷವನ್ನು ಆಚರಿಸುವ ಸಂಭ್ರಮದಲ್ಲಿದ್ದಾರೆ" ಎಂದು ವ್ಯಂಗ್ಯ ಮಾಡಿದೆ.
ಇದೇ 2018ರ ಮೇ ತಿಂಗಳಿನಲ್ಲಿ ನಡೆದ ಕರ್ನಾಟಕ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಕೇವಲ 37 ಸ್ಥಾನಗಳನ್ನು ಪಡೆದರೂ ಸಹ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗ ಅಧಿಕಾರ ಸ್ವೀಕರಿಸಿದರು. ಆದರೆ ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್ 80 ಸ್ಥಾನಗಳನ್ನು ಪಡೆದರೂ ಸಹ ಜೆಡಿಎಸ್ ಜೊತೆ ಕೈ ಜೋಡಿಸಿ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಟ್ಟಿತ್ತು.