ಧಾರವಾಡ: ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ.ಭಾರತೀಯ ನ್ಯಾಯಾಂಗ ವ್ಯವಸ್ಥೆಯು ವಿಶ್ವದ ಅತ್ಯಂತ ಹಳೆಯ ಮತ್ತು ಬಲಿಷ್ಠ ವ್ಯವಸ್ಥೆಯಾಗಿದೆ.ಅದನ್ನು ಇನ್ನಷ್ಟು ಶಕ್ತಿಯುತಗೊಳಿಸುವ ತುರ್ತು ಅಗತ್ಯವಿದೆ.ಕಾನೂನು ಪದವೀಧರರು ಈ ನಿಟ್ಟಿನಲ್ಲಿ ದೃಢ ಹೆಜ್ಜೆಗಳನ್ನು ಇಡಬೇಕು.ಕಡಿಮೆ ವೆಚ್ಚ ,ತ್ವರಿತ ಗತಿಯಲ್ಲಿ ನ್ಯಾಯದಾನವಾಗಬೇಕು ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋತ್ (Thawar Chand Gehlot) ಹೇಳಿದರು.


COMMERCIAL BREAK
SCROLL TO CONTINUE READING

ಇಲ್ಲಿನ ಕೃಷಿ ವಿವಿಯ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಇಂದು ನಡೆದ ಕರ್ನಾಟಕ ರಾಜ್ಯ ಕಾನೂನು ವಿವಿಯ (KSLU) ಐದನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಇದನ್ನೂ ಓದಿ: ಕಾಶ್ಮೀರ ಫೈಲ್ಸ್ ಮಾಡುವುದಾದರೆ ಲಖಿಂಪುರ್ ಫೈಲ್ಸ್ ಕೂಡ ನಿರ್ಮಾಣವಾಗಲಿ- ಅಖಿಲೇಶ್ ಯಾದವ್


ಘಟಿಕೋತ್ಸವವು ಒಂದು ಭಾವನಾತ್ಮಕ ಕ್ಷಣವಾಗಿದೆ. ಈ ದಿನವು ಪದವಿ ಪಡೆದ ವಿದ್ಯಾರ್ಥಿಗಳು ಮತ್ತು ಅವರ ಜೀವನವನ್ನು ರೂಪಿಸುವಲ್ಲಿ ಶಿಕ್ಷಕರಿಗೆ, ಪೋಷಕರಿಗೆ ಹೆಮ್ಮೆಯ ಕ್ಷಣವಾಗಿದೆ.ಇಂದು ಎಲ್ಲಾ ಕಾನೂನು ಪದವೀಧರರು ಜೀವನದ ಹೊಸ ಸವಾಲುಗಳನ್ನು ಎದುರಿಸಲು, ಹೊಸ ವಾತಾವರಣವನ್ನು ಪ್ರವೇಶಿಸುತ್ತಿದ್ದಾರೆ.ಯುವ ಪದವೀಧರರು ದೇಶದ ಭವಿಷ್ಯ ಹಾಗೂ ಅಭಿವೃದ್ಧಿಯ ಪ್ರಮುಖ ಭಾಗವಾಗಿದ್ದೀರಿ.ನ್ಯಾಯಾಂಗವನ್ನು ಹೆಚ್ಚು ಶಕ್ತಿಯುತವಾಗಿ, ಪ್ರಜಾಪ್ರಭುತ್ವದ ಪ್ರಮುಖ ಸ್ತಂಭವನ್ನಾಗಿ ಮಾಡಲು ನೀವು ಕೊಡುಗೆ ನೀಡಬೇಕು ಎಂದರು.


"ತಡವಾಗಿ ನೀಡಿದ ನ್ಯಾಯವೂ ಅನ್ಯಾಯವೇ" ಎಂದು ಹೇಳಲಾಗುತ್ತದೆ.ಸಾಮಾನ್ಯ ಬಡವರಿಗೆ ಸಕಾಲದಲ್ಲಿ ನ್ಯಾಯ ಒದಗಿಸುವಲ್ಲಿ ನೀವು ಪ್ರಮುಖ ಪಾತ್ರ ವಹಿಸಲು ಇಂದು ಸಂಕಲ್ಪ ಮಾಡಬೇಕು‌.ಸಾಮಾಜಿಕ-ಆರ್ಥಿಕ ಅಸಮಾನತೆಗಳು ನಿರ್ಮೂಲನೆಯಾಗಬೇಕು, ಸಮಾಜವನ್ನು ಒಳಗೊಳ್ಳುವ ಮತ್ತು ಸಂಪನ್ಮೂಲಗಳ ವಿತರಣೆಯು ಸಾರ್ವತ್ರಿಕ ಅಂಗೀಕಾರದ ಆಧಾರದ ಮೇಲೆ ಇರಬೇಕು, ಅಂತಹ ವ್ಯವಸ್ಥೆಯ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ.


ಇದನ್ನೂ ಓದಿ: ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಅಂಬೇಡ್ಕರ್‌ವಾದಿಗಳು ಸಮಾಜವಾದಿಗಳೊಂದಿಗೆ ಸೇರಬೇಕು: ಅಖಿಲೇಶ್ ಯಾದವ್


ವಿಶ್ವವಿದ್ಯಾಲಯವು ಕಾನೂನು ನಿಯತಕಾಲಿಕಗಳು, ಪುಸ್ತಕಗಳು, ಪತ್ರಿಕೆಗಳು ಇತ್ಯಾದಿಗಳನ್ನು ಪ್ರಕಟಿಸುತ್ತಿದೆ ಸಂಶೋಧನೆ, ಜ್ಞಾನ ಉತ್ಪಾದನೆಯನ್ನು ಉತ್ತೇಜಿಸಲು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿದೆ ಕಾನೂನು ತಜ್ಞರು, ನ್ಯಾಯವಾದಿಗಳು,ನ್ಯಾಯಾಂಗದ ಅಧಿಕಾರಿಗಳು ಇವುಗಳ ಪ್ರಯೋಜನ ಪಡೆಯಬೇಕು ಎಂದು ರಾಜ್ಯಪಾಲರು ಹೇಳಿದರು.


ಘಟಿಕೋತ್ಸವ ಭಾಷಣ ಮಾಡಿದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಧನಂಜಯ್ ವೈ.ಚಂದ್ರಚೂಡ್ ವರ್ಚುವಲ್ ಮೂಲಕ ಮಾತನಾಡಿ,ಯುವ ವಕೀಲರು ವೃತ್ತಿ ಘನತೆ,ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ಪ್ರಾಚೀನ ಗ್ರೀಸ್ ದೇಶದ ಅಥೆನ್ಸ್‌ನಲ್ಲಿ ಪ್ರಾರಂಭವಾದ ನ್ಯಾಯದಾನ ಪ್ರಕ್ರಿಯೆಗೆ ಕ್ರಿ.ಶ.4 ನೇ ಶತಮಾನದಲ್ಲಿ ರೋಮನ್ನರು ಹೊಸ ರೂಪ ನೀಡಿದರು. ಆದರೆ ಅದಕ್ಕೆ ಕಾನೂನು ಚೌಕಟ್ಟುಗಳಿರಲಿಲ್ಲ.ಇ‌ಂಗ್ಲೆ‌ಂಡ್ ಮತ್ತು ಅಮೇರಿಕನ್ನರು ಕಾನೂನು ಸ್ಪರ್ಶ ನೀಡಿ,ವ್ಯಾಖ್ಯಾನ ಒದಗಿಸಿದರು.ಆಧುನಿಕ ಭಾರತೀಯ ಕಾನೂನು ಪ್ರಕ್ರಿಯೆ ಬ್ರಿಟಿಷರಿಂದಲೇ ಪ್ರಭಾವಿತವಾಗಿದೆ.1961 ರಲ್ಲಿ ಭಾರತದಲ್ಲಿ ವಕೀಲರ ಕಾಯ್ದೆ ಜಾರಿಗೆ ಬಂದಿತು‌.ಇಂದು ಕಾನೂನು ಶಿಕ್ಷಣ ದುಬಾರಿಯಾಗಿದೆ.ವಕೀಲರಿಗೆ ಸಿಗುತ್ತಿರುವ ವೇತನ ಕಡಿಮೆ ಇದೆ, ಅದಕ್ಕಾಗಿ ಬಹಳ ಜನ ವಕೀಲಿ ವೃತ್ತಿಯನ್ನು ತೊರೆದು ಕಾರ್ಪೋರೆಟ್ ಸಂಸ್ಥೆಗಳ ಕಾನೂನು ಸಲಹೆಗಾರ ವೃತ್ತಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.ಯಾವುದಾದರೂ ವೃತ್ತಿಯನ್ನು ಆಯ್ದುಕೊಂಡರೂ ಕೂಡ ಮಾನವೀಯ ಮೌಲ್ಯಗಳನ್ನು ಆಧರಿಸಿಯೇ ವಕೀಲಿ ವೃತ್ತಿ ನಡೆಸಬೇಕು ಎಂದು ಹೊಸ ಪದವೀಧರರಿಗೆ ಕಿವಿಮಾತು ಹೇಳಿದರು.


ಇದನ್ನೂ ಓದಿ: CSK vs KKR Prediction: ಇರ್ವರ ನಡುವೆ ಗೆಲ್ಲುವವರು ಯಾರು?


ಕಾನೂನು ,ಸಂಸದೀಯ ವ್ಯವಹಾರ ,ಶಾಸನ ಹಾಗೂ ಸಣ್ಣ ನೀರಾವರಿ ಸಚಿವರೂ,ವಿವಿಯ ಸಮಕುಲಾಧಿಪತಿಗಳೂ ಆದ ಜೆ‌.ಸಿ‌.ಮಾಧುಸ್ವಾಮಿ ಮಾತನಾಡಿ, ಕಳೆದ ಬಾರಿ ನಡೆದ ಘಟಿಕೋತ್ಸವ ಸಂದರ್ಭದಲ್ಲಿ ಉಪಸ್ಥಿತರಿದ್ದ ನ್ಯಾಯಮೂರ್ತಿ ಮೋಹನ ಶಾಂತನಗೌಡರ್ ಅವರಿಗೆ ಇಂದು ಮರಣೋತ್ತರವಾಗಿ ಗೌರವ ಡಾಕ್ಟರೇಟ್ ನೀಡಬೇಕಾದ ಸಂದರ್ಭ ಬರಬಹುದು ಎಂಬುದನ್ನು ನಿರೀಕ್ಷಿಸಿರಲಿಲ್ಲ‌.ಇಂದು ಪದವಿ ಪಡೆದು ವೃತ್ತಿಗೆ ಪ್ರವೇಶಿಸುತ್ತಿರುವ ಕಾನೂನು ಪದವೀಧರರು ತಮ್ಮನ್ನು  ಈ ಹಂತಕ್ಕೆ ತಲುಪಿಸಿದ ,ಪಾಲಕರು,ಪೋಷಕರ ತ್ಯಾಗ ಅರಿತು ಅವರಿಗೆ ಆಸರೆಯಾಗಬೇಕು.ಕಾನೂನು ಪದವೀಧರರು ನಿರಂತರವಾಗಿ ವಿದ್ಯಾರ್ಥಿಗಳಾಗಿ ಅಧ್ಯಯನಶೀಲರಾಗಿರಬೇಕು.ನ್ಯಾಯ ಮತ್ತು ಸಮಾನತೆ ಎತ್ತಿ ಹಿಡಿಯಲು ಮಾನವೀಯ ಮೌಲ್ಯಗಳನ್ನು ನಾವು ಅಳವಡಿಸಿಕೊಳ್ಳಬೇಕು. ಜೀವನದಲ್ಲಿ ಹಣಗಳಿಕೆಯೇ ಮುಖ್ಯವಲ್ಲ, ಪ್ರತಿಭೆ,ಅಧ್ಯಯನದಿಂದ ಸಮಾಜದಲ್ಲಿ ಗುರುತಿಸಿಕೊಂಡು,ಗೌರವ ಪಡೆಯಬೇಕು ಎಂಬ ಮಹಾದಾಸೆಯೊಂದಿಗೆ ಈ ವೃತ್ತಿ ಆಯ್ದುಕೊಂಡಿರುತ್ತೇವೆ. ವಕೀಲರಿಗೆ ಪ್ರಕರಣ ನೀಡಿ, ಶುಲ್ಕ ಕಟ್ಟಿ ಬದುಕು ನಿರ್ವಹಣೆಗೆ ಕಾರಣವಾಗುವ ಕಕ್ಷಿದಾರರನ್ನು ಗೌರವದಿಂದ ಕಾಣಬೇಕು ಎಂದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.