ಧಾರವಾಡ: ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಅತಿ ಹೆಚ್ಚು ಪ್ರಕರಣಗಳು ಮೋಟಾರ ವಾಹನ ಮತ್ತು ಮ್ಯಾಟ್ರೀಮೋನಿಗೆ ಹಾಗೂ ಇತರೆ ಪ್ರಕರಣಗಳಿಗೆ ಸಂಬಂಧಿಸಿದ ಒಟ್ಟು 1005 ಪ್ರಕರಣಗಳ ಪೈಕಿ ಒಟ್ಟು 272 ಪ್ರಕರಣಗಳು ಇತ್ಯರ್ಥವಾಗಿವೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯ ಧಾರವಾಡ ಪೀಠ ಹಿರಿಯ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅವರು ಹೇಳಿದರು


COMMERCIAL BREAK
SCROLL TO CONTINUE READING

ಅವರು ಇಂದು (ಡಿ.09) ಕರ್ನಾಟಕ ಉಚ್ಛ ನ್ಯಾಯಾಲಯದ ಧಾರವಾಡ ಪೀಠದಲ್ಲಿ ರಾಷ್ಟ್ರೀಯ ಲೋಕ ಅದಾಲತ್‍ನ ಉದ್ದೇಶಿಸಿ, ಪತ್ರಿಕಾಗೋಷ್ಠಿಯಲ್ಲಿ ಇತ್ಯರ್ಥವಾದ ಪ್ರಕರಣಗಳ ಮಾಹಿತಿಯನ್ನು ನೀಡಿದರು.


ಕಳೆದ 20 ವರ್ಷಗಳಿಂದ ಲೋಕದಾಲತ್ ಕಾರ್ಯಕ್ರಮವು ನಡೆದುಕೊಂಡು ಬಂದಿದ್ದು, ಸರ್ಕಾರದೊಂದಿಗೆ ಸೇರಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಈ ವರ್ಷದ 4ನೇ ರಾಷ್ಟ್ರೀಯ ಲೋಕ ಅದಾಲತ್‍ನ್ನು ಆಯೋಜಿಸಲಾಗಿದೆ. ಈ ಅದಾಲತನಲ್ಲಿ ಒಟ್ಟು 1005 ಪ್ರಕರಣಗಳನ್ನು ವಿಚಾರಣೆಗೆಂದು ಗುರುತಿಸಿಕೊಳ್ಳಲಾಗಿತ್ತು, ಆ ಪೈಕಿ ಒಟ್ಟು 272 ಪ್ರಕರಣಗಳನ್ನು ರೂ.4,11,69,645 ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು ಎಂದು ಅವರು ಹೇಳಿದರು.


ಇದನ್ನೂ ಓದಿ: ಬಿಜೆಪಿಯವರೇ ಬಿಜೆಪಿಯವರಿಗೆ ಕೊಟ್ಟಿರುವ ಹೆಸರು ʼಬಕೆಟ್ ಜನತಾ ಪಾರ್ಟಿʼ́!: ಕಾಂಗ್ರೆಸ್‌ ಟೀಕೆ


ಕರ್ನಾಟಕ ಉಚ್ಛ ನ್ಯಾಯಾಲಯ ಧಾರವಾಡ ಪೀಠದ ಹಿರಿಯ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅವರ ಮಾರ್ಗದರ್ಶನದಲ್ಲಿ ಏರ್ಪಡಿಸಿದ, ಈ ಅದಾಲತ್‍ನಲ್ಲಿ ಹಿರಿಯ ನ್ಯಾಯಮೂರ್ತಿಗಳೊಂದಿಗೆ ನ್ಯಾಯಮೂರ್ತಿಗಳಾದ ಎಚ್.ಪಿ.ಸಂದೇಶ, ಹಂಚಾಟೆ ಸಂಜೀವಕುಮಾರ, ರಾಮಚಂದ್ರ ಡಿ.ಹುದ್ದಾರ ಮತ್ತು ವಿಜಯಕುಮಾರ ಎ.ಪಾಟೀಲ ಹಾಗೂ ಇವರೊಂದಿಗೆ ಲೋಕ ಅದಾಲತ್‍ನ ಸದಸ್ಯರಾದ ಶ್ರೀವತ್ಸ ಹೆಗಡೆ, ಎಸ್.ಎಸ್.ಬಾದವಡಗಿ, ವಿ.ಜಿ.ದಳವಾಯಿ, ಡಿ.ಜೆ.ನಾಯ್ಕ ಮತ್ತು ಪ್ರಶಾಂತ ಮಠಪತಿ ಈ ರೀತಿಯಾಗಿ ಒಟ್ಟು 5 ಪೀಠಗಳನ್ನು ಆಯೋಜಿಸಲಾಗಿತ್ತು.


ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಇತ್ಯರ್ಥಗೊಂಡಿವೆ. ವಿಶೇಷವೆಂದರೆ ಸುಮಾರು 40 ವರ್ಷದ ಹಳೆಯ ದಿವಾಣಿ ಪ್ರಕರಣವನ್ನು ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ ಹಾಗೂ ನ್ಯಾಯಮೂರ್ತಿ ವಿಜಯಕುಮಾರ ಎ. ಪಾಟೀಲ ಅವರು ವಿಶೇಷ ಪೀಠವು ಪಕ್ಷಗಾರರ ವಕೀಲರಾದ ಡಿ.ಎಮ್.ಕುಲಕರ್ಣಿ ಹಾಗೂ ಮಹಾಂತೇಶ ಮಠದ ಇವರ ಸಹಕಾರದಿಂದ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಿದ್ದು ಈ ಲೋಕ ಅದಾಲತ್ತಿನ ಮತ್ತೊಂದು ವಿಶೇಶತೆ ಆಗಿರುತ್ತದೆ ಎಂದರು.


ಈ ಹಿಂದೆ ನಡೆದ ಅದಾಲತ್‍ಗಳಲ್ಲಿ ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮೋಟಾರ ವಾಹನ ಅಪಘಾತಕ್ಕೆ ಸಂಬಂಧಿಸಿದ ಪ್ರಕರಣಕಗಳನ್ನು ವಿಲೇವಾರಿ ಮಾಡಲಾಗುತ್ತಿತ್ತು. ಆದರೆ ಈ ಬಾರಿ ವಿಭಿನ್ನವಾಗಿ ಆಲೋಚಿಸಿ ಸರಕಾರ ಮತ್ತು ಸ್ಥಳೀಯ ಸಂಸ್ಥೆಗಳು ಪಕ್ಷಗಾರರಾಗಿರುವ ಪ್ರಕರಣಗಳನ್ನು ಅಂದರೆ ರಿಟ್ ಅರ್ಜಿಗಳನ್ನು ಸಂದಾನಕ್ಕೆ ತೆಗೆದುಕೊಂಡು ಅಧಿಕಾರಿಗಳಿಗೆ ಮನವರಿಕೆ ಮಾಡಿ, ಗಮನಾರ್ಹ ಸಂಖ್ಯೆಯಲ್ಲಿ ಅಂತಹ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿತ್ತು. ಈ ದಿಶೆಯಲ್ಲಿ ಎಡಿಶನಲ್ ಅಡ್ವೊಕೇಟ ಜನರಲ್ ಜೆ.ಎಮ್. ಗಂಗಾಧರ, ಸರಕಾರಿ ವಕೀಲರಾದ ಜಿ. ಕೆ. ಹಿರೇಗೌಡರ ಹಾಗೂ ಅಪರ ಜಿಲ್ಲಾಧಿಕಾರಿ ಗೀತಾ.ಸಿ.ಡಿ. ಅವರು ಸರಕಾರ ಮತ್ತು ಸ್ಥಳೀಯ ಸಂಸ್ಥೆಗಳು ಪಕ್ಷಗಾರರಾಗಿರುವ ಸುಮಾರು 22 ಪ್ರಕರಣಗಳನ್ನು ಇತ್ಯರ್ಥ ಪಡಿಸುವಲ್ಲಿ ಸಹಕರಿಸಿದರು.


ಇದನ್ನೂ ಓದಿ: Chitradurga: ಇಬ್ಬರು ಮಕ್ಕಳನ್ನು ತೊಟ್ಟಿಯಲ್ಲಿ ಮುಳುಗಿಸಿ ತಾಯಿ ಆತ್ಮಹತ್ಯೆ..!


ಮುಂದಿನ ದಿನಗಳಲ್ಲಿಯೂ ಸರಕಾರದ ಹಾಗೂ ಸ್ಥಳೀಯ ಸಂಸ್ಥೆಗಳ ವಿರುದ್ದ ದಾಖಲಾಗುವಂತಹ ರಿಟ್ ಅರ್ಜಿಗಳು ಮತ್ತು ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಇದೇ ರೀತಿ ಹೆಚ್ಚಿನ ಸಂಖ್ಯೆಯಲ್ಲಿ ಇತ್ಯರ್ಥಪಡಿಸಲು ಉಚ್ಛ ನ್ಯಾಯಾಲಯವು ಅವಶ್ಯಕ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯ ಧಾರವಾಡ ಪೀಠ ಹಿರಿಯ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅವರು ಹೇಳಿದರು.


*****