ಬೆಂಗಳೂರು: ರಾಜ್ಯದಲ್ಲಿ ಡಿಸೆಂಬರ್ 5 ರಂದು ನಡೆದ ಉಪಚುನಾವಣೆ ಕೇವಲ ಅನರ್ಹ ಶಾಸರ ಭವಿಷ್ಯವನ್ನು ಮಾತ್ರವಲ್ಲ ರಾಜ್ಯ ಬಿಜೆಪಿ ಸರ್ಕಾರದ ಭವಿಷ್ಯವನ್ನು ನಿರ್ಧರಿಸುತ್ತದೆ. ಉಪಚುನಾವಣೆ ಫಲಿತಾಂಶ ಹೊರಬೀಳಲು ಇನ್ನು ಎರಡೇ ದಿನ ಬಾಕಿ ಇದೆ. ಏತನ್ಮಧ್ಯೆ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಿದ್ದ ಅನರ್ಹ ಶಾಸಕ ಎಂ.ಟಿ. ಬಿ. ನಾಗರಾಜ್ ಹೊಸ ಬಾಂಬ್ ಸಿಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಇಂದು ಬೆಳಗ್ಗೆ ಬೆಂಗಳೂರಿನ ಡಾಲರ್ಸ್‌ ಕಾಲೋನಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಎಂ.ಟಿ.ಬಿ. ನಾಗರಾಜ್, ಈ ಉಪಚುನಾವಣೆಯಲ್ಲಿ ನಾನು ಸೋತರೆ ಅದಕ್ಕೆ ಬಿಜೆಪಿ ಸಂಸದ ಬಚ್ಚೇಗೌಡ ಅವರೇ ಕಾರಣ ಎಂದು ದೂರು ನೀಡಿದ್ದಾರೆ ಎನ್ನಲಾಗಿದೆ.


ಉಪ ಸಮರದಲ್ಲಿ ನಾನು ಸೋತರೆ ಅದಕ್ಕೆ ಬಿಜೆಪಿ ಸಂಸದ ಬಚ್ಚೇಗೌಡ ಅವರೇ ಕಾರಣ ಎಂದು ದೂರಿರುವ ನಾಗರಾಜ್, ಬಚ್ಚೇಗೌಡ ಚುನಾವಣೆಯಲ್ಲಿ ತಮ್ಮ ಪರ ಪ್ರಚಾರ ಮಾಡಿಲ್ಲ. ಜೊತೆಗೆ ಯಾವುದೇ ರೀತಿಯ ಸಹಕಾರವನ್ನೂ ನೀಡಿಲ್ಲ ಎಂದು ಅಸಮಾದಾನ ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ.


ಇದೇ ವೇಳೆ ಸಂಸದ ಬಚ್ಚೇಗೌಡ ಅವರು ಪುತ್ರ ಶರತ್ ಬಚ್ಚೇಗೌಡ ಅವರ ಪರವಾಗಿ ರಹಸ್ಯ ಸಭೆ ನಡೆಸಿದ್ದು, ಮಗ ಶರತ್ ಪರವಾಗಿ ಕೆಲಸ ಮಾಡುವಂತೆ ಬೆಂಬಲಿಗರಿಗೆ ಸಂದೇಶ ನೀಡಿದ್ದಾರೆ. ಈ ಕುರಿತು ತಮ್ಮ ಬಳಿ ಕೆಲ ಸಾಕ್ಷ್ಯಗಳಿವೆ ಎಂದು ಯಡಿಯೂರಪ್ಪ ಅವರಿಗೆ ದೂರು ನೀಡಿರುವ ಎಂಟಿಬಿ ನಾಗರಾಜ್, ಉಪಚುನಾವಣೆಯಲ್ಲಿ ಒಂದೊಮ್ಮೆ ವ್ಯತಿರಿಕ್ತ ಫಲಿತಾಂಶ ಬಂದರೆ ತಮ್ಮನ್ನು ಕೈಬಿಡದಂತೆ ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.