ವಿಜಯಪುರ ಬಾಲಕಿ ಅತ್ಯಾಚಾರ, ಹತ್ಯೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ
ವಿಜಯಪುರ: ಇತ್ತೀಚಿಗೆ ದಲಿತ ಬಾಲಕಿಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ನಾಲ್ಕು ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಬಂಧಿಸಿರುವವರನ್ನು ದೀಪಕ್ ಮುಳಸಾವಳಗಿ, ಸಾಗರ ಮೊರೆ, ಶ್ರೀಶೈಲ ಮುಚ್ಚಂಡಿ ಮತ್ತು ಕೈಲಾಶ್ ರಾಥೋಡ ಎಂದು ಗುರುತಿಸಲಾಗಿದೆ. ಬಾಲಕಿ ಅತ್ಯಾಚಾರ ನಡೆಸಿ ಹತ್ಯೆಗೈದ ನಂತರ ಬಂಧನಕ್ಕಾಗಿ ಬಲೆ ಬೀಸಿದ ಪೊಲೀಸರು ಮಹಾರಾಷ್ಟ್ರ ಹಾಗೂ ಇನ್ನಿತರ ಅಕ್ಕಪಕ್ಕದ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದರೆನ್ನಲಾಗಿದೆ.ಇನ್ನು ಮೂವರು ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ಬಂಧನಕ್ಕಾಗಿ ಶೋಧ ಮುಂದುವರೆದಿದೆ ಎಂದು ಸಿಐಡಿ ಎಸ್ಪಿ ಆನಂದಕುಮಾರ ಸುದ್ದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ಸ್ಪಷ್ಟವಾಗಿದೆ. ಆದರೆ ಇದು ಸಾಮೂಹಿಕ ಅತ್ಯಾಚಾರ ಎನ್ನುವುದರ ಬಗ್ಗೆ ಮರಣೋತ್ತರ ವರದಿಯಲ್ಲಿ ದೃಡಪಟ್ಟಿಲ್ಲ ಎಂದು ಹೇಳಲಾಗಿದೆ. ಆದ್ದರಿಂದ ಈ ಬಗ್ಗೆಯೂ ಕೂಡ ಸಂಪೂರ್ಣ ತನಿಖೆಯನ್ನು ಕೈಗೊಳ್ಳಲಾಗುತ್ತದೆ ಎಂದು ಹಿರಿಯ ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.