ಬೆಂಗಳೂರು: ಆಡಳಿತ ಹಾಗೂ ಪ್ರತಿಪಕ್ಷಗಳ ಗದ್ದಲ ನಡೆದ ಹಿನ್ನಲೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಸದನವನ್ನು 10 ನಿಮಿಷಗಳ ಕಾಲಾವಧಿಗೆ ಮುಂದೂಡಿದ್ದಾರೆ.


COMMERCIAL BREAK
SCROLL TO CONTINUE READING

ಇನ್ನೊಂದೆಡೆ ಸಿಎಂ ಹೆಚ್ಡಿ ಕುಮಾರಸ್ವಾಮಿ ಇಂದು ವಿಶ್ವಾಸ ಮತಯಾಚನೆ ಸಾಧ್ಯವಿಲ್ಲ, ಇನ್ನು ಎರಡು ದಿನಗಳ ಕಾಲಾವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ.ಆದರೆ ಇದಕ್ಕೆ ಸ್ಪೀಕರ್ ಮಾತ್ರ ಈಗ ಪಟ್ಟು ಹಿಡಿದಿದ್ದು, ಇಂದೇ ತಾವು ಮತಯಾಚಿಸಬೇಕೆಂದು ಸೂಚಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ತಾವು ಇದೆ ರೀತಿ ಮುಂದುವರಿಸಿದ್ದೆ ಆದಲ್ಲಿ ಸ್ಪೀಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ ಎಂದು ಸುದ್ದಿಮೂಲಗಳು ತಿಳಿಸಿವೆ.



ಸದನದಲ್ಲಿ ಆಡಳಿತ ಪಕ್ಷದ ನಾಯಕರು ಚರ್ಚೆಗೆ ಅವಕಾಶ ನೀಡಬೇಕೆಂದು ವಿನಂತಿಸಿಕೊಂಡರೆ,ಇನ್ನೊಂದೆಡೆಗೆ ಬಿಜೆಪಿ ನಾಯಕರಾದ ಬಸವರಾಜ ಬೊಮ್ಮಾಯಿ ಹಾಗೂ ಸುರೇಶ ಕುಮಾರ್ ಅವರು ಸ್ಪೀಕರ್ ಅವರನ್ನು ಭೇಟಿ ಮಾಡಿ ಇಂದೇ ವಿಶ್ವಾಸಮತ ಗೊತ್ತುವಳಿ ಮಂಡಿಸಲು ವಿಳಂಬ ಮಾಡದಂತೆ ವಿನಂತಿಸಿಕೊಂಡಿದ್ದಾರೆ.



ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ಗದ್ದಲದಿಂದಾಗಿ ಸದನ ಮುಂದೂಡುವ ಮೊದಲು ಸ್ಪೀಕರ್ ರಮೇಶ್ ಕುಮಾರ್ 'ಮಾತನಾಡಿ ಇವತ್ತು ಎಷ್ಟೇ ಹೊತ್ತಾದರೂ ಸರಿ ನಾನು ಕುಳಿತುಕೊಳ್ಳಲು ಸಿದ್ದನಿದ್ದೇನೆ. ಮೊದಲ ಬಾರಿ ಆಯ್ಕೆಯಾದವರಿಗೆ ಹಾಗೂ ಹೊಸಬರಿಗೆ ಮಾತನಾಡಲು ಅವಕಾಶ ಕೊಡಬೇಕು ಆದ್ದರಿಂದ ಸ್ವಲ್ಪ ಅರ್ಥಮಾಡಿಕೊಳ್ಳಿ ಎಂದು ಗದ್ದಲ ಮಾಡುತ್ತಿದ್ದ ಸದಸ್ಯರಿಗೆ ಸೂಚಿಸಿದರು.



ಇದಕ್ಕೂ ಮೊದಲು ಈಶ್ವರ್ ಖಂಡ್ರೆ ಮಾತನಾಡಿ 'ಅತೃಪ್ತ ಶಾಸಕರಿಗೆ ಬಿಜೆಪಿ ಹಣದ ಆಮಿಷವನ್ನುವೊಡ್ಡಿದೆ ಎಂದು ಆರೋಪಿಸಿದರು. ಇನ್ನು ಮುಂದುವರೆದು 'ಈ ಹಿಂದೆ ಕಾಂಗ್ರೆಸ್ ಮುಕ್ತ ಭಾರತ ಎಂದು ಹೇಳುತ್ತಿದ್ದ ಬಿಜೆಪಿ ಈಗ ವಿರೋಧ ಪಕ್ಷ ಮುಕ್ತ ಭಾರತ ಮಾಡಲು ಹೊರಟಿದೆ. ವಿರೋಧ ಪಕ್ಷವಿಲ್ಲದೆ ಪ್ರಜಾಪ್ರಭುತ್ವ ಉಳಿಯುತ್ತಾ ? ಎಂದು ಪ್ರಶ್ನಿಸಿದರು. ಪಕ್ಷಾಂತರ ನಿಷೇಧ ಕಾಯ್ದೆಯನ್ನು ದುರ್ಬಲಗೊಳಿಸುವ ಯತ್ನ, ಹಲವು ಅಕ್ರಮ ಹಾಗೂ ಅವ್ಯವಹಾರಗಳ ಕುರಿತಾಗಿ ಚರ್ಚೆ ನಡೆಸಬೇಕೆಂದು ಖಂಡ್ರೆ ಆಗ್ರಹಿಸಿದರು.