ನವದೆಹಲಿ: ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ‌ ಪೀಡಿತ ಪ್ರದೇಶದ ಸಂತ್ರಸ್ತರ ನೆರವಿಗೆ ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಕೆ.ಸಿ. ರಾಮಮೂರ್ತಿ ಅವರು ಧಾವಿಸಿದ್ದಾರೆ. ತಮ್ಮ ಸಂಸದರ ಸ್ಥಳೀಯ ಅಭಿವೃದ್ಧಿ ನಿಧಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಕೆ.ಸಿ. ರಾಮಮೂರ್ತಿ ಅವರು ಬೆಂಗಳೂರು ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ನೈಸರ್ಗಿಕ ಪ್ರಕೋಪಕ್ಕೆ ತುತ್ತಾದ ರಾಜ್ಯದ ಸಂತ್ರಸ್ತರಿಗೆ ಪರಿಹಾರ ಒದಗಿಸಲು ತಕ್ಷಣವೇ ಹಣ ಬಿಡುಗಡೆ ಮಾಡಲು ಸೂಚಿಸಿದ್ದಾರೆ. 


ಬಳಿಕ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಕೆ.ಸಿ.‌ ರಾಮಮೂರ್ತಿ ಅವರು, ಈ ಬಾರಿ ಕರ್ನಾಟಕದಲ್ಲಿ ಆಗಿರುವ ಪ್ರವಾಹ ಶತಮಾನದಲ್ಲೇ ಆಗಿರುವ ಅತ್ಯಂತ ಭೀಕರ ನೆರೆಹಾವಳಿ ಎಂದು ತಿಳಿಸಿದ್ದಾರೆ. ಈ ಪ್ರಕೃತಿ ವಿಕೋಪಕ್ಕೆ ಈಗಾಗಲೇ 50 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಬಹಳಷ್ಟು ಊರುಗಳು ಕೊಚ್ಚಿ ಹೋಗಿವೆ. ಆದುದರಿಂದ ಯುದ್ಧದೋಪಾಯದಲ್ಲಿ ಪರಿಹಾರ ಕಾರ್ಯಕೈಗೊಳ್ಳಬೇಕು. ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಬೇಕೆಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಒತ್ತಾಯಿಸಿದ್ದಾರೆ.


ಕೂಡಲೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಇನ್ನಷ್ಟು ಹೆಲಿಕಾಪ್ಟರ್ ಗಳನ್ನು ಕಳುಹಿಸಿಕೊಡಬೇಕು. ಅಗತ್ಯ  ಔಷಧಿ, ಹೊದಿಕೆಗಳು, ಮತ್ತಿತರ ಸಾಮಗ್ರಿಗಳನ್ನು ತಲುಪಿಸುವ ವ್ಯವಸ್ಥೆ ಆಗಬೇಕು ಎಂದಿರುವ ಕೆ.ಸಿ.‌ ರಾಮಮೂರ್ತಿ ಅವರು ತಾವು ಕೂಡ ನೆರೆ ಹಾವಳಿ ಸಂಭವಿಸಿರುವ ಪ್ರದೇಶದಲ್ಲಿ ಸಂಚರಿಸಿ ಪರಿಸ್ಥಿಯನ್ನು ಅರಿಯುವುದಾಗಿ ತಿಳಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಇಡೀ ರಾಜ್ಯ ಮಳೆಯಲ್ಲಿ ಮುಳುಗಿ ಹೋಗುವ ಭೀತಿ ಉಂಟಾಗಿರುವ ಈ ಕಡುಕಷ್ಟದ ಸಂದರ್ಭದಲ್ಲಿ ಎಲ್ಲರೂ ತನು ಮನ ಧನ ಸಹಾಯ ಮಾಡಬೇಕೆಂದು ವಿನಂತಿಸಿಕೊಂಡಿದ್ದಾರೆ.