ಗೌರಿಬಿದನೂರು: ಪ್ಯಾಸೆಂಜರ್ ರೈಲು ಹತ್ತುವ ವೇಳೆ ಕಾಲು ಜಾರಿ ರೈಲಿಗೆ ಸಿಲುಕಿದ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಭೀಕರವಾದ ಘಟನೆ ವರದಿಯಾಗಿದೆ.


COMMERCIAL BREAK
SCROLL TO CONTINUE READING

ಇಂದು ಬೆಳಿಗ್ಗೆ 7:30 ರ ಸುಮಾರಿಗೆ ಹಿಂದೂಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲನ್ನು ಗೌರಿ ಬಿದನೂರು ರೈಲ್ವೇ ನಿಲ್ದಾಣದಲ್ಲಿ ಹತ್ತುವ ಸಂದರ್ಭದಲ್ಲಿ ಯುವಕ ರೈಲಿನ ಚಕ್ರಕ್ಕೆ ಸಿಕ್ಕಿದ ಪರಿಣಾಮ, ಯುವಕನ ಎಡಗೈ ತುಂಡಾಗಿದ್ದು ಮುಖ ಗುರುತು ಸಿಗದಷ್ಟು ಭೀಕರವಾಗಿ ಮೃತಪಟ್ಟಿದ್ದಾನೆ. 


ಯುವಕನ ಬಳಿ ದೊರೆತ  ID ಕಾರ್ಡ್ ಪ್ರಕಾರ ಆತನ ಹೆಸರು  24 ವರ್ಷದ ಜಗದೀಶ್.ಜಿ  ಎಂದು ಪತ್ತೆ ಹಚ್ಚಲಾಗಿದೆ. ಈತ ಗೌರಿಬಿದನೂರು ತಾಲ್ಲೂಕಿನ ಮುದುಗೆರೆ ಗ್ರಾಮದ ಯುವಕನಾಗಿದ್ದು, ಬೆಂಗಳೂರಿನ ವಿಜಯನಗರದ JICE ಕೋಚಿಂಗ್ ಸೆಂಟರ್ ವಿದ್ಯಾರ್ಥಿ ಎಂದು ತಿಳಿದುಬಂದಿದೆ. 


ಈ ಘಟನೆಯಿಂದ ರೊಚ್ಚಿಗೆದ್ದ ಪ್ರಯಾಣಿಕರಿಂದ ಬೆಳಿಗ್ಗೆಯಿಂದ 10 ಗಂಟೆಯವರೆಗೆ ರೈಲು ತಡೆ ನಡೆಸಲಾಯಿತು. ಇದರ ಪರಿಣಾಮವಾಗಿ ಬೆಂಗಳೂರು ಹಿಂದೂಪುರ ರೈಲು ಮಾರ್ಗ ಕೆಲ ಕಾಲ ಸ್ಥಗಿತಗೊಂಡಿತ್ತು. ನಂತರ ಪೋಲೀಸರ ಮಧ್ಯ ಪ್ರವೇಶದಿಂದಾಗಿ ಸಂಚಾರ ಆರಂಭಗೊಂಡಿತು.