ನವದೆಹಲಿ: ಭಾರತೀಯ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ‌ರೂ ಮತ್ತು ಕನ್ನಡಿಗರೂ ಆದ ಬಿ.ವಿ. ಶ್ರೀನಿವಾಸ್ (B V Srinivas) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲಾಕ್ ಡೌನ್ ನಿಂದ ಸಂಕಷ್ಟ ಎದುರಿಸುತ್ತಿರುವ ಕನ್ನಡಿಗರಿಗೆ ನೆರವಿನ ಹಸ್ತ ಚಾಚಿದ್ದಾರೆ.


COMMERCIAL BREAK
SCROLL TO CONTINUE READING

ದೆಹಲಿಯ ಆರ್.ಕೆ. ಪುರಂನ 6ನೇ ಸೆಕ್ಟರ್ ಮತ್ತು ಲಜಪತ್ ನಗರದಲ್ಲಿ ನೆಲಸಿರುವ ಕರ್ನಾಟಕದ ಕ್ಷಯ ರೋಗಪೀಡಿತ ಕುಟುಂಬಗಳು ಮತ್ತು ಬಡ ಕುಟುಂಬಗಳಿಗೆ ಬಿ.ವಿ. ಶ್ರೀನಿವಾಸ್ ಅವರು ಅಕ್ಕಿ, ಗೋದಿ, ಸಕ್ಕರೆ, ಅಡುಗೆ ಎಣ್ಣೆ ಮತ್ತಿತರ ಅಗತ್ಯ ಸಾಮಗ್ರಿಗಳನ್ನು ವಿತರಿಸಿ ನೆರವಿನ ಹಸ್ತ ಚಾಚಿದರು‌.


ಬಳಿಕ‌ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ (Lockdown) ಸಮಯದಲ್ಲಿ ಯಾರೂ ಹಸಿವಿನ ನೋವನ್ನು ಅನುಭವಿಸಬಾರದು. ಯಾರೊಬ್ಬರೂ ಹಸಿವಿನಿಂದ ಸಾಯುವಂತಾಗಬಾರದು. ಇಂಥ ಕಷ್ಟಕಾಲದಲ್ಲಿ ನೆರವಾಗುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯ‌. ನಾನು ಕೂಡ ಈ ಸಂದರ್ಭದಲ್ಲಿ ನನ್ನ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ಹೇಳಿದರು.


ಭಾರತೀಯ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ‌ರಾದ ಶ್ರೀನಿವಾಸ್, ತಮ್ಮ ಯೂತ್ ಕಾಂಗ್ರೆಸ್ ಸೇನಾಪಡೆಯೊಂದಿಗೆ ದೇಶದ ಇತರೆ ಭಾಗಗಳಲ್ಲಿ ಹಾಗೂ ವಿಶೇಷವಾಗಿ ಬೆಂಗಳೂರಿನಲ್ಲಿ ಇದೇ ರೀತಿಯ ಸಹಾಯ ಮಾಡುತ್ತಿದ್ದಾರೆ.