ಬೆಂಗಳೂರು: ಪ್ರಖ್ಯಾತ ವೈಕುಂಠ ಏಕಾದಶಿ ಇಂದು ಅದ್ಧೂರಿಯಾಗಿ ನಡೆಯುತ್ತಿದೆ. ಆದರೆ COVID-19 ಕಾರಣಕ್ಕೆ ಬೆಂಗಳೂರಿನ ಪ್ರಸಿದ್ದ ದೇವಾಲಯಗಳಲ್ಲಿ ಭಕ್ತಾದಿಗಳಿಗೆ ಪ್ರವೇಶ ನಿಷೇಧಿಸಲಾಗಿದೆ.‌ ಬದಲಿಗೆ  ಆನ್‌ಲೈನ್‌ ಮೂಲಕ ಪೂಜಾ ವಿಧಾನವನ್ನು ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ.


COMMERCIAL BREAK
SCROLL TO CONTINUE READING

ಬೆಂಗಳೂರಿನ ಪ್ರಸಿದ್ದ ಮತ್ತು ದೊಡ್ಡ ದೇವಸ್ಥಾನವಾದ ಇಸ್ಕಾನ್ (ISKON)ನಲ್ಲಿ ಕೂಡ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿದೆ. ಜೊತೆಗೆ ಆನ್ ಲೈನ್ ಮೂಲಕ ದೇವರ ದರ್ಶನ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.


ಅದೇ ರೀತಿ ಕೆ.ಆರ್. ರಸ್ತೆಯಲ್ಲಿರುವ ಹೆಸರಲ್ಲೇ ವೆಂಕಟರಮಣ ಸ್ವಾಮಿಯನ್ನೇ ಅವಗಾಹಿಸಿಕೊಂಡಿರುವ ಕೋಟೆ ವೆಂಕಟರಮಣ ಸ್ವಾಮಿ ದೇವಾಲಯದ ಮೇಲೂ COVID-19 ಕರಿ‌ನೆರಳು ಬೀರಿದೆ. ಅಲ್ಲೂ ಭಕ್ತರು ನೇರವಾಗಿ ದೇವರ ದರ್ಶನ ಪಡೆಯಲು, ಪೂಜೆ ವೀಕ್ಷಿಸುವ ವ್ಯವಸ್ಥೆ ಇಲ್ಲವಾಗಿದೆ.


ಇದನ್ನೂ ಓದಿ: Vaikuantha Ekadashi: ವೈಕುಂಠ ಏಕಾದಶಿ ಆಚರಣೆಯ ಹಿನ್ನಲೆ, ಮಹತ್ವ


ಭಕ್ತರ ಬೇಸರ:
COVID-19 ಕಾರಣಕ್ಕೆ ಕೋಟೆ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಭಕ್ತರಿಗೆ ಪ್ರವೇಶ ನಿರಾಕರಿಸಿರುವುದರಿಂದ ಪ್ರತಿ ವರ್ಷ ದೇವರ ದರ್ಶನ ಮಾಡುತ್ತಿದ್ದ ಭಕ್ತರು ಈ ಸಲ ದೇವಾಲಯದ ಹೊರ ಭಾಗದಿಂದಲೇ ಕೈ ಮುಗಿದು ತೆರಳುತ್ತಿರುವ ದೃಶ್ಯ ಕಂಡುಬರುತ್ತಿದೆ. ದೇವಾಲಯದ ಒಳ ಹೊಕ್ಕು ಹತ್ತಿರದಿಂದ ದೇವರ ದರ್ಶನ ಪಡೆಯಲಾಗದ ಬಗ್ಗೆ ಭಕ್ತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. COVID-19 ಹಾವಳಿ ತಡೆಗಟ್ಟುವ ಸಲುವಾಗಿ ಈ ಬಾರಿ ದೇವರ ದರ್ಶನಕ್ಕೆ ಅವಕಾಶ ನಿರಾಕರಿಸಲಾಗಿದೆ ಎಂದು ದೇವಸ್ಥಾನದ ಎದುರು ದೇವಾಲಯ ಆಡಳಿತ ಮಂಡಳಿ ಬೋರ್ಡ್ ಹಾಕಿದೆ.


ಹಲವು ದೇವಾಲಯಗಳಲ್ಲಿ ಪ್ರವೇಶ ನಿಷೇಧದ ನಡುವೆ ವಯಾಲಿಕಾವಲ್‌ನ‌ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಭಕ್ತರಿಗೆ ದರ್ಶನದ ಅವಕಾಶ ಕಲ್ಪಿಸಲಾಗಿದೆ. ಬೇರೆ ದೇವಸ್ಥಾನಗಳಲ್ಲಿ ಪ್ರವೇಶ ಇಲ್ಲದ ಮಾಹಿತಿ ತಿಳಿದ ಭಕ್ತರು ವಯಾಲಿಕಾವಲ್‌ನ‌ ತಿರುಪತಿ ತಿರುಮಲ ದೇವಸ್ಥಾನದ ಕಡೆಗೆ ಆಗಮಿಸುತ್ತಿದ್ದಾರೆ. ಸಾಲಾಗಿ ನಿಂತು ತಿರುಪತಿ ತಿರುಮಲ ದರ್ಶನ ಪಡೆಯುತ್ತಿದ್ದಾರೆ.


ವಯಾಲಿಕಾವಲ್‌ನ‌ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಭಕ್ತರಿಗೆ ದರ್ಶನದ ಅವಕಾಶ ಕಲ್ಪಿಸಲಾಗಿದ್ದರೂ‌ ಎಲ್ಲರೂ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಜೊತೆಗೆ ಸಾಮಾಜಿಕ ಅಂತರ ಕಾಪಾಡುವಂತೆ ಕೂಡ ದೇವಸ್ಥಾನದ ಸಿಬ್ಬಂದಿ ಮನವಿ ಮಾಡುತ್ತಿದ್ದಾರೆ.


ಇದನ್ನೂ ಓದಿ: ಇನ್ನು ಮುಂದೆ ಬೆಂಗಳೂರು, ಚೆನ್ನೈ, ಹೈದರಾಬಾದಿನಲ್ಲೇ ಸಿಗುತ್ತೆ ತಿರುಪತಿ ಲಡ್ಡು, ಅದೂ ಸಬ್ಸಿಡಿ ದರದಲ್ಲಿ...


ಇಂದು ಮುಂಜಾನೆ 3 ಗಂಟೆಗೆ ತೆರೆದಿರುವ ವಯಾಲಿಕಾವಲ್‌ನ‌ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಸಂಜೆ 5 ಗಂಟೆವರೆಗೆ ವೈಕುಂಠ ದ್ವಾರ ತೆರೆಯಲಾಗಿದೆ. ಅಲ್ಲದೆ ಇಂದಿನಿಂದ 10 ದಿನಗಳ ಕಾಲ ವೈಕುಂಠ ದ್ವಾರ ತೆರೆದಿರುತ್ತದೆ. ಒಂದೇ ದಿನ‌ದ ಬದಲು ಪ್ರತಿದಿನ ಹಂತ ಹಂತವಾಗಿ ಬಂದು ದರ್ಶನ ಪಡೆಯುವಂತೆ ಟಿಟಿಡಿ ಆಡಳಿತ ಮಂಡಳಿ ಭಕ್ತರಲ್ಲಿ ಮನವಿ ಮಾಡಿದೆ.


ವಯಾಲಿಕಾವಲ್‌ನ‌ ತಿರುಪತಿ ತಿರುಮಲ (Tirupati Tirumala) ದೇವಸ್ಥಾನಕ್ಕೆ ಸೆಲಬ್ರಿಟಿಗಳು ಕೂಡ ಆಗಮಿಸುತ್ತಿದ್ದು ಬೆಳಿಗ್ಗೆ ಬೆಳಿಗ್ಗೆಯೇ ಚಿತ್ರನಟರಾದ ರಂಗಾಯಣ ರಘು ಮತ್ತು ಶೋಭರಾಜ್ ಬಂದು ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ. ಸೆಲಬ್ರಿಟಿಗಳಾಗಿದ್ದರೂ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದಿದ್ದಾರೆ.


ವೈಕುಂಠ ಏಕಾದಶಿಯ ಪ್ರಸಿದ್ಧ ದಿನವಾದ ಇಂದು ತಿರುಪತಿಗೆ ಹೋಗಿ ವೆಂಕಟೇಶನ ದರ್ಶನ ಪಡೆಯಲು ಸಾಧ್ಯವಾಗಲಿಲ್ಲ. ಇಲ್ಲಾದರೂ ದೇವರ ದರ್ಶನ ಮಾಡೋಣ ಎಂದುಕೊಂಡು ಇಲ್ಲಿಗೆ ಬಂದಿದ್ದೇವೆ ಎಂದ ನಟರು 'ದೇವರು ಎಲ್ಲಾ ವೈರಸ್ ತೊಳೆದು ಜನರನ್ನು ಕಾಪಾಡಲಿ' ಎಂದು ಹಾರೈಸಿದರು.


ಇದನ್ನೂ ಓದಿ: ಈ ಗುಹೆಯಲ್ಲಿ ಈಗಲೂ ಇದೆಯಂತೆ ಗಣೇಶನ ತಲೆ!


ವೈಕುಂಠ ಏಕಾದಶಿ (Vaikuntha ekadasi) ಹಿನ್ನೆಲೆಯಲ್ಲಿ ಹಲಸೂರು ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ 5 ಗಂಟೆಯಿಂದಲೇ ವಿಶೇಷ ಪೂಜೆ ನಡೆಯುತ್ತಿದೆ. ಜೊತೆಗೆ ಇಲ್ಲೂ ಕೂಡ ಭಕ್ತರು ದೇವರ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು ದೇವರ ದರ್ಶನಕ್ಕೆ ಭಕ್ತರು ಸಾಲುಗಟ್ಟಿ ನಿಂತಿದ್ದಾರೆ.


ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಹಲಸೂರು ವೆಂಕಟರಮಣ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ವೈಕುಂಠ ದ್ವಾರ ನಿರ್ಮಾಣ ಮಾಡಲಾಗಿದೆ. ದೇವಾಲಯಕ್ಕೆ ಬರುವ ಭಕ್ತರಿಗೆ ಮಾಸ್ಕ್ (Maks) ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಸರದಿಯಲ್ಲಿ ಸಾಗಿ ದೇವರ ದರ್ಶನ ಪಡೆಯಬೇಕಾಗಿದೆ.


ಇನ್ನೊಂದೆಡೆ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಸಹಸ್ರಾರು ಭಕ್ತರು ಕಂಡುಬರುತ್ತಿದ್ದಾರೆ. ಬೆಳಗ್ಗೆ 4 ಗಂಟೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಲಕ್ಷ್ಮೀ ವೆಂಕಟರಮಣ ಸ್ವಾಮಿ ದರ್ಶನಕ್ಕೆ ಕಾಯುತ್ತಿದ್ದಾರೆ. ಸಾಮಾಜಿಕ ಅಂತರ ಕಾಪಾಡುತ್ತಿರುವುದರಿಂದ ಬಲು ಉದ್ದದ ಸರದಿ ಸಾಲು ನಿರ್ಮಾಣವಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 


ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.