ನವದೆಹಲಿ: ಖ್ಯಾತ ರಣಜಿ ಕ್ರಿಕೆಟಿಗ ಇಕ್ಬಾಲ್ ಅಬ್ದುಲ್ಲಾ ಇತ್ತೀಚಿನ ದಿನಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದಾರೆ. ಅವರಿಗೆ ಸಂಬಂಧಿಸಿದ ಫೋಟೋವೊಂದು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಆಟದಲ್ಲಿ ಎಡಗೈ ಸ್ಪಿನ್ನರ್ ಆಗಿರುವ ಅಬ್ದುಲ್ಲಾ ಸಿಕ್ಕಿಂ ತಂಡದ ಪರ ರಣಜಿ ಪಂದ್ಯ ಆಡುತ್ತಿದ್ದಾರೆ. ಕಳೆದ ಡಿಸೆಂಬರ್ 31ರಂದು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ನಡುಮೈದಾನದಲ್ಲೇ ಓರ್ವ ಬಾಲಕನಿಗೆ ಟೀ ಕುಡಿಸುತ್ತಿದ್ದಾರೆ. ಎಲ್ಲೆಡೆಯಿಂದ ಇಕ್ಬಾಲ್ ಇಟ್ಟಿರುವ ಈ ಹೆಜ್ಜೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.


COMMERCIAL BREAK
SCROLL TO CONTINUE READING

ಹಸಿದ ಬಾಲಕನಿಗೆ ತಿಂಡಿ ನೀಡಿದ ಇಕ್ಬಾಲ್
ವರದಿಗಳ ಪ್ರಕಾರ, ರಣಜಿ ಅಭ್ಯಾಸ ಪಂದ್ಯವೊಂದರ ವೇಳೆ ಈ ಫೋಟೋ ಕ್ಲಿಕ್ಕಿಸಲಾಗಿದ್ದು, ಈ ವೇಳೆ ಅಬ್ದುಲ್ಲಾ ಅವರ ದೃಷ್ಟಿ ಓರ್ವ ಓರ್ವ ಹಸಿದ ಬಾಲಕನ ಮೇಲೆ ಬಿದ್ದಿದೆ. ಈ ವೇಳೆ ಬಾಲಕನನ್ನು ತನ್ನ ಬಳಿಗೆ ಕರೆದ ಅವರು, ಆತನಿಗೆ ತಿನ್ನಲು ತಿಂಡಿ ನೀಡಿ, ತಮ್ಮ ಕೈಯಾರೆ ಕುಡಿಯಲು ಟೀ ನೀಡಿದ್ದಾರೆ. ಈ ಎಲ್ಲ ಘಟನಾವಳಿಯ ಫೋಟೋಗಳನ್ನು ಟ್ವೀಟ್ ಮಾಡಿರುವ ಇಕ್ಬಾಲ್, "ಅವಶ್ಯಕತೆ ಇರುವ ಜನರಿಗೆ ನಾವು ಸಹಾಯ ಮಾಡಿದರೆ, ದೇವರೂ ಕೂಡ ನಮಗೆ ಬೇಕಾದದ್ದನ್ನು ನಮಗೆ ನೀಡುತ್ತಾರೆ" ಎಂದು ಬರೆದುಕೊಂಡಿದ್ದಾರೆ.



ಟೀಂ ಇಂಡಿಯಾದಲ್ಲಿ ಸ್ಥಾನಪಡೆಯಲು ಬಯಸಿದ್ದಾರೆ ಇಕ್ಬಾಲ್
ಕ್ರಿಕೆಟ್ ನಲ್ಲಿ ಎಡಗೈ ಸ್ಪಿನ್ನರ್ ಆಗಿರುವ ಇಕ್ಬಾಲ್ ಮಿಡಲ್ ಆರ್ಡರ್ ನಲ್ಲಿ ಉತ್ತಮ ಬ್ಯಾಟ್ ಕೂಡ ಬೀಸುತ್ತಾರೆ. ಅಂಡರ್-19 ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿಯೂ ಕೂಡ ಇಕ್ಬಾಲ್ ಆಟವಾಡಿದ್ದಾರೆ. ಟೀಂ ಇಂಡಿಯಾನಲ್ಲಿ ಆಟವಾಡುವುದು ಅವರ ಕನಸಾಗಿದೆ.  ಐಪಿಎಲ್ ನಲ್ಲಿಯೂ ಕೂಡ ಅವರು ತಮ್ಮ ಪ್ರತಿಭೆಯನ್ನು ತೋರಿದ್ದಾರೆ. ಸದ್ಯ 63 ಫಸ್ಟ್ ಕ್ಲಾಸ್ ಪಂದ್ಯಗಳನ್ನು ಆಡಿರುವ ಇಕ್ಬಾಲ್ ಒಟ್ಟು 83 ಇನ್ನಿಂಗ್ಸ್ ಗಳಲ್ಲಿ 2138 ರನ್ ಗಳನ್ನು ಕಲೆಹಾಕಿದ್ದು, 159 ರನ್ ಅವರ ಅತ್ಯಧಿಕ ಸ್ಕೋರ್ ಆಗಿದೆ. ಅವರ ಬೌಲಿಂಗ್ ಕುರಿತು ಹೇಳುವುದಾದರೆ, ಅಬ್ದುಲ್ಲಾ ಆಡಿರುವ ಒಟ್ಟು 63 ಫಸ್ಟ್ ಕ್ಲಾಸ್ ಪಂದ್ಯಗಳ 83 ಇನ್ನಿಂಗ್ಸ್ ಗಳಲ್ಲಿ 186 ವಿಕೆಟ್ ಪಡೆದಿದ್ದಾರೆ.