ಮುಂಬೈ: ಭಾರತೀಯ ಕ್ರಿಕೆಟ್ ರಂಗದ ಮಾಸ್ತರ್ ಬ್ಲಾಸ್ಟ್ರರ್ ಹಾಗೂ ಭಾರತ ರತ್ನ ಪ್ರಶಸ್ತಿ ವಿಜೇತ ಸಚಿನ್ ತೆಂಡೂಲ್ಕರ್ ಅವರ ಕೋಚ್ ರಮಾಕಾಂತ್ ಅಚ್ರೇಕರ್ ಅವರು ಬುಧವಾರ ನಿಧನರಾಗಿದ್ದಾರೆ. ಇವರಿಗೆ 87ವರ್ಷ ವಯಸ್ಸಾಗಿತ್ತು. 


COMMERCIAL BREAK
SCROLL TO CONTINUE READING

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಪಾರ್ಶ್ವವಾಯು ಪೀಡಿತರಾಗಿದ್ದರು. ಸಚಿನ್ ತೆಂಡೂಲ್ಕರ್ ಬಾಲ್ಯದ ಕ್ರಿಕೆಟ್ ಕೋಚ್ ಆಗಿದ್ದ ರಮಾಕಾಂತ್ ಅವರು, ವಿನೋದ್ ಕಂಬಳಿ, ಪ್ರವೀಣ್ ಉಮ್ರೆ, ಸಮೀರ್ ದಿಗೆ ಮತ್ತು ಬಲ್ವಿಂದರ್ ಸಿಂಗ್ ಅವರಿಗೂ ಸಹ ತರಬೇತುದಾರರಾಗಿದ್ದರು.


ಸಚಿನ್ ತೆಂಡೂಲ್ಕರ್ ಅವರ ಕ್ರಿಕೆಟ್ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದ್ದ ರಮಾಕಾಂತ್ ಅವರು, ಬಾಲ್ಯದಲ್ಲಿಯೇ ಕ್ರಿಕೆಟ್ ಬಗ್ಗೆ ಸೂಕ್ತ ಅಡಿಪಾಯ ಹಾಕಿ, ಹಲವು ತಂತ್ರಗಳನ್ನು ಸಚಿನ್ ಗೆ ಕರಗತ ಮಾಡಿದ್ದರು. ಹೀಗಾಗಿಯೇ ತೆಂಡೂಲ್ಕರ್ ಕ್ರಿಕೆಟ್ ಚರಿತ್ರೆಯಲ್ಲಿ ಓರ್ವ ಶ್ರೇಷ್ಠ ಆಟಗಾರನಾಗಿ ಬೆಳೆದರು ಎಂದರೂ ತಪ್ಪಾಗಲಾರದು.


1932ರಲ್ಲಿ ಜನಿಸಿದ ಅಚ್ರೇಕರ್ ಮುಂಬೈ ಸ್ಥಳೀಯ ಕ್ರಿಕೆಟ್ ನಲ್ಲಿ ಉತ್ತಮ ಆಟಗಾರರಾಗಿ ಹೆಸರು ಮಾಡಿದ್ದರು. ಅಚ್ರೇಕರ್ ಅವರು ಕ್ರಿಕೆಟ್ ಕೋಚ್ ಆಗಿ ಸಲ್ಲಿಸಿದ ಅನುಪಮ ಸೇವೆಗೆ 1990ರಲ್ಲಿ ದ್ರೋಣಾಚಾರ್ಯ ಪ್ರಶಸ್ತಿ, 2010ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಭಾರತ ಸರ್ಕಾರ ಗೌರವಿಸಿದೆ.


ರಮಾಕಾಂತ್ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿರುವ ಬಿಸಿಸಿಐ, "ರಮಾಕಾಂತ್ ಅವರು ಕೇವಲ ಶ್ರೇಷ್ಠ ಕ್ರಿಕೆಟ್ ಆಟಗಾರರನ್ನು ನೀಡಲಿಲ್ಲ, ಅವರನ್ನು ಉತ್ತಮ ಮನುಷ್ಯರನ್ನಾಗಿ ರೂಪಿಸಿದರು. ಭಾರತಿಯ ಕ್ರಿಕೆಟ್ ಗೆ ಅವರ ಕೊಡಗೆ ಅಪಾರವಾದುದು" ಎಂದು ಟ್ವೀಟ್ ಮಾಡಿದೆ.