ನವದೆಹಲಿ: ಭಾರತ ಕ್ರಿಕೆಟ್ ಕಂಡ ಅತ್ಯುತ್ತಮ ನಾಯಕರಲ್ಲಿ ಒಬ್ಬರಾಗಿರುವ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ತಂಡದ ಕೋಚ್ ಆಗಲು ಬಯಸಿದ್ದಾರೆ. ಆದರೆ ಅದಕ್ಕೆ ಒಂದು ಕಂಡಿಶನ್, ಅದೇನಪ್ಪಾ ಅಂದರೆ ಅವರು ಈ ಬಾರಿ ಅಲ್ಲ ಕೋಚ್ ಆಗಲು ಹೊರಟಿರುವುದು, ಮುಂಬರುವ ದಿನಗಳಲ್ಲಿ ಎಂದು ಅವರು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಭಾರತದ ಮುಖ್ಯ ತರಬೇತುದಾರರ ಹುದ್ದೆಗೆ ಮಂಗಳವಾರ ಅರ್ಜಿ ಗಡುವು ಕೊನೆಗೊಂಡಿದ್ದು, ಸಿಎಸಿ ಆಗಸ್ಟ್ ಮಧ್ಯದಲ್ಲಿ ಅಂತಿಮವಾಗಿ ಆಯ್ಕೆ ಮಾಡಿದ ಅಭ್ಯರ್ಥಿಗಳ ಸಂದರ್ಶನಗಳನ್ನು ನಡೆಸುವ ನಿರೀಕ್ಷೆಯಿದೆ ಎನ್ನಲಾಗಿದೆ. ಈಗಾಗಲೇ ವಿರಾಟ್ ಕೊಹ್ಲಿ ಅವರು ರವಿಶಾಸ್ತ್ರಿ ಅವರಿಗೆ ಕೋಚ್ ಆಗಿ ಮುಂದುವರೆಯಲು ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆಗೆ ಆಸ್ಟ್ರೇಲಿಯಾದ ಟಾಮ್ ಮೂಡಿ ಮತ್ತು ಭಾರತದ ಮಾಜಿ ಅಂತಾರಾಷ್ಟ್ರೀಯ ಆಟಗಾರರಾದ ಲಾಲ್‌ಚಂದ್ ರಜಪೂತ್ ಮತ್ತು ರಾಬಿನ್ ಸಿಂಗ್ ಅವರು ಕೂಡ ಕೋಚ್ ಹುದ್ದೆಗೆ ಸ್ಪರ್ಧೆಯಲ್ಲಿದ್ದಾರೆ.


ಸದ್ಯ ಸೌರವ್ ಗಂಗೂಲಿ ಕ್ರಿಕೆಟ್ ಅಸೋಸಿಯೇಷನ್ ​​ಆಫ್ ಬಂಗಾಳ (ಸಿಎಬಿ) ಅಧ್ಯಕ್ಷರಾಗಿರುವುದರ ಜೊತೆಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡಕ್ಕೆ ಮಾರ್ಗದರ್ಶಕರಾಗಿದ್ದಾರೆ. ಇದರ ಜೊತೆಗೆ ಅವರು ಕ್ರಿಕೆಟ್ ವಿಕ್ಷಕ ವಿವರಣೆಯನ್ನು ಸಹ ಮಾಡುತ್ತಾರೆ. 'ಪ್ರಸ್ತುತ, ನಾನು ಹಲವಾರು ವಿಷಯಗಳೊಂದಿಗೆ ಸಂಬಂಧ ಹೊಂದಿದ್ದೇನೆ - ಐಪಿಎಲ್, ಸಿಎಬಿ, ಟಿವಿ ಕಾಮೆಂಟರಿ. ಇದು ಪೂರ್ಣಗೊಳ್ಳಲಿ, ಆಗ ನಾನು ಖಂಡಿತವಾಗಿಯೂ ಕೆಲವು ಹಂತದಲ್ಲಿ ನನ್ನ ಟೋಪಿ ಹಾಕುತ್ತೇನೆ. ನನಗೆ ಆಸಕ್ತಿ ಇದೆ. ಆದರೆ ಈಗ ಅಲ್ಲ, ಭವಿಷ್ಯದಲ್ಲಿ' ಎಂದು ಗಂಗೂಲಿ ಹೇಳಿದರು. ಭಾರತದ ತರಬೇತುದಾರ ಹುದ್ದೆಗೆ ಅರ್ಜಿ ಸಲ್ಲಿಸಿದ ಹೆಚ್ಚಿನ ದೊಡ್ಡ ಹೆಸರುಗಳು ಕಣದಲ್ಲಿ ಇಲ್ಲ ಎಂದು ಬಹಿರಂಗಪಡಿಸಿದರು, ಆ ಮೂಲಕ ರವಿಶಾಸ್ತ್ರಿ ಅವರಿಗೆ ವಿಸ್ತರಣೆ ಸಿಗುತ್ತದೆ ಎಂದು ಸುಳಿವು ನೀಡಿದರು.