ಸಿಂಗಾಪುರ: ದೀಪಾವಳಿ ಆಚರಣೆ ಸಂದರ್ಭದಲ್ಲಿ ಕಾನೂನು ಬಾಹಿರವಾಗಿ ಪಟಾಕಿ ಸಿಡಿಸಿದ ಭಾರತೀಯ ಮೂಲದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.


COMMERCIAL BREAK
SCROLL TO CONTINUE READING

ಆರೋಪಿಗಳಾದ ತ್ಯಾಗು ಸೆಲ್ವರಾಜು (29) ಮತ್ತು ಶಿವ ಕುಮಾರ್‌ ಸುಬ್ರಮಣಿಯನ್‌ (48) ವಿರುದ್ಧ ಅಪಾಯಕಾರಿ ಪಟಾಕಿ ಸಿಡಿಸಿದ ಮತ್ತು ಇದಕ್ಕೆ ಪ್ರೇರಣೆ ನೀಡಿದ ಆರೋಪದ ಮೇಲೆ ದೂರು ದಾಖಲಿಸಲಾಗಿದೆ ಎಂದು ಸ್ಟ್ರೇಟ್ಸ್‌ ಟೈಮ್ಸ್‌ ಗುರುವಾರ ವರದಿ ಮಾಡಿದೆ.


ಸಿಂಗಾಪುರದಲ್ಲಿ ಅಧಿಕಾರಿಗಳ ಪೂರ್ವಾನುಮತಿ ಇಲ್ಲದೆ ಪಟಾಕಿ, ಸುಡುಮದ್ದು ಸುಡುವುದು ಶಿಕ್ಷಾರ್ಹ ಅಪರಾಧ. ಆದರೆ ಸೋಮವಾರ ರಾತ್ರಿ ಆರೋಪಿ ಶಿವ ಕುಮಾರ್ ಗ್ಲೌಸೆಸ್ಟರ್‌ ರೋಡ್‌ನ‌ ಡಿವೈಡರ್‌ ಮೇಲೆ ಸುಡು ಮದ್ದು ತುಂಬಿದ್ದ ಬಾಕ್ಸ್ ಇಟ್ಟಿದ್ದು, ಅದಕ್ಕೆ ಮತ್ತೋರ್ವ ಆರೋಪಿ ತ್ಯಾಗು ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ ತಿಳಿಸಿದ್ದಾರೆ. ಸದ್ಯ ಈ ಇಬ್ಬರೂ ಆರೋಪಿಗಳಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು 2,000 ದಿಂದ 10,000 ಸಿಂಗಾಪುರ ಡಾಲರ್‌ ದಂಡ ವಿಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.