ಮಹಾತ್ಮ ಗಾಂಧೀಜಿ, ಲಾಲಬಹದ್ದೂರ್ ಶಾಸ್ತ್ರಿ ಅವರನ್ನು ನೆನೆದ ರಾಷ್ಟ್ರಪತಿ, ಪ್ರಧಾನಿ

ಮಾಜಿ ಪ್ರಧಾನಿ ಲಾಲ್​ ಬಹದೂರ್​ ಶಾಸ್ತ್ರಿ ಅವರ ಜಯಂತಿಯಂದು ನಾವು ಅವರನ್ನು ನೆನೆಯಬೇಕಿದೆ. ಲಾಲಬಹುದ್ದೂರ್ ಶಾಸ್ತ್ರಿ ಭಾರತ ಮಾತೆಯ ಓರ್ವ ಹೆಮ್ಮೆಯ ಪುತ್ರ- ರಾಷ್ಟ್ರಪತಿ ರಾಮನಾಥ್​ ಕೋವಿಂದ್

Written by - Yashaswini V | Last Updated : Oct 2, 2020, 09:33 AM IST
  • ಗಾಂಧಿ ಜಯಂತಿಯ ಈ ಶುಭದಿನದಂದು ಅಹಿಂಸ ಮತ್ತು ಸತ್ಯದ ಮಂತ್ರವನ್ನು ಅನುಸರಿಸುವ ಮೂಲಕ ರಾಷ್ಟ್ರದ ಕಲ್ಯಾಣ ಮತ್ತು ಪ್ರಗತಿಗೆ ನಮ್ಮನ್ನು ಸಮರ್ಪಿಸಲು ಸಂಕಲ್ಪ ಮಾಡೋಣ- ರಾಷ್ಟ್ರಪತಿ ರಾಮನಾಥ್​ ಕೋವಿಂದ್
  • ಲಾಲ್​ ಬಹದೂರ್​ ಶಾಸ್ತ್ರಿ ಅವರು ವಿನಯತೆಯಿಂದ ಕೂಡಿದ್ದ ಹಾಗೂ ಅಚಲ ವ್ಯಕ್ತಿತ್ವ ಉಳ್ಳವರಾಗಿದ್ದರು. ಸರಳತೆಯೊಂದಿಗೆ ದೇಶದ ಕಲ್ಯಾಣಕ್ಕಾಗಿ ಶ್ರಮಿಸಿದವರು. ಭಾರತಕ್ಕಾಗಿ ದುಡಿದ ಅವರನ್ನು ಕೃತಜ್ಞತಾ ಭಾವದಿಂದ ಅವರ ಜಯಂತಿಯಂದು ನೆನೆಯೋಣ' ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ
ಮಹಾತ್ಮ ಗಾಂಧೀಜಿ, ಲಾಲಬಹದ್ದೂರ್ ಶಾಸ್ತ್ರಿ ಅವರನ್ನು ನೆನೆದ ರಾಷ್ಟ್ರಪತಿ, ಪ್ರಧಾನಿ title=
File Image

ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ (Mahatma Gandhi) ಹಾಗೂ ಮಾಜಿ ಪ್ರಧಾನಿ ಲಾಲ್​ ಬಹದೂರ್​ ಶಾಸ್ತ್ರಿ (Lal Bahadur Shastri) ಅವರ ಜನ್ಮ ದಿನೋತ್ಸವದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಹಾಗೂ ಪ್ರಧಾನ ಮಂತ್ರಿ  ನರೇಂದ್ರ ಮೋದಿ (Narendra Modi) ಶುಭಾಶಯ ಕೋರಿದ್ದಾರೆ.

ಟ್ವೀಟ್ ಮೂಲಕ ಶುಭ ಕೋರಿರುವ ರಾಷ್ಟ್ರಪತಿ ರಾಮನಾಥ್​ ಕೋವಿಂದ್ ​ (Ramanath Kovind)​, ಮೊದಲ ಟ್ವೀಟ್ ನಲ್ಲಿ' ದೇಶದ ಜನರ ಪರವಾಗಿ ನಾನು ಗಾಂಧಿ ಜಯಂತಿಯಂದು ಬಾಪುವಿಗೆ ಗೌರವ ಸಲ್ಲಿಸುತ್ತೇನೆ. ಅವರ ಸತ್ಯ, ಅಹಿಂಸೆ ಮತ್ತು ಪ್ರೀತಿಯ ಸಂದೇಶವು ಸಮಾಜದಲ್ಲಿ ಸಾಮರಸ್ಯ ಮತ್ತು ಸಮಾನತೆಯನ್ನು ತರುವ ಮೂಲಕ ವಿಶ್ವದ ಕಲ್ಯಾಣಕ್ಕೆ ಎಡೆಮಾಡಿಕೊಡುತ್ತದೆ. ಗಾಂಧೀಜಿ ಎಲ್ಲಾ ಮಾನವೀಯತೆಗೆ ಸ್ಫೂರ್ತಿಯ ಮೂಲವಾಗಿ ಉಳಿದಿದ್ದಾರೆ' ಎಂದು ಹೇಳಿದ್ದಾರೆ.

ಮತ್ತೊಂದು ಟ್ವೀಟ್​ನಲ್ಲಿ 'ಗಾಂಧಿ ಜಯಂತಿಯ ಈ ಶುಭದಿನದಂದು ಅಹಿಂಸ ಮತ್ತು ಸತ್ಯದ ಮಂತ್ರವನ್ನು ಅನುಸರಿಸುವ ಮೂಲಕ ರಾಷ್ಟ್ರದ ಕಲ್ಯಾಣ ಮತ್ತು ಪ್ರಗತಿಗೆ ನಮ್ಮನ್ನು ಸಮರ್ಪಿಸಲು ಸಂಕಲ್ಪ ಮಾಡೋಣ. ಹಾಗೂ ಸ್ವಚ್ಛ, ಸಮರ್ಥ, ಶಕ್ತಿಯುತ ಮತ್ತು ಉಜ್ವಲ ಭಾರತವನ್ನು ನಿರ್ಮಿಸುವ ಮೂಲಕ ಗಾಂಧಿ ಕನಸನ್ನು ನನಸು ಮಾಡೋಣ' ಎಂದು ಕರೆ ಕೊಟ್ಟಿದ್ದಾರೆ.

ಬಾಪು ಜೀವನದ ಆಸಕ್ತಿದಾಯಕ ಕಥೆಗಳಿಂದ ಹಣಕಾಸಿನ ಯೋಜನೆಯ ಮಂತ್ರಗಳನ್ನು ಅರ್ಥಮಾಡಿಕೊಳ್ಳಿ

ಇದೇ ರೀತಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಮಾಜಿ ಪ್ರಧಾನಿ ಲಾಲ್​ ಬಹದೂರ್​ ಶಾಸ್ತ್ರಿ ಅವರ ಜಯಂತಿಗೂ ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ. 'ಮಾಜಿ ಪ್ರಧಾನಿ ಲಾಲ್​ ಬಹದೂರ್​ ಶಾಸ್ತ್ರಿ ಅವರ ಜಯಂತಿಯಂದು ನಾವು ಅವರನ್ನು ನೆನೆಯಬೇಕಿದೆ. ಲಾಲಬಹುದ್ದೂರ್ ಶಾಸ್ತ್ರಿ ಭಾರತ ಮಾತೆಯ ಓರ್ವ ಹೆಮ್ಮೆಯ ಪುತ್ರ. ಸಮರ್ಪಣಾ ಮನೋಭಾವದಿಂದ ದೇಶಕ್ಕಾಗಿ ಸೇವೆ ಸಲ್ಲಿಸಿದವರು ಅವರು. ಹಸಿರು ಕ್ರಾಂತಿ, ಶ್ವೇತ ಕ್ರಾಂತಿ ಮತ್ತು ಯುದ್ಧಕಾಲದ ನಾಯಕತ್ವದಲ್ಲಿ ಅವರ ಮೂಲಭೂತ ಪಾತ್ರವು ರಾಷ್ಟ್ರವನ್ನು ಪ್ರೇರೇಪಿಸಿದೆ' ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು 'ಗಾಂಧಿ ಜಯಂತಿಯ ದಿನ ನಾವು ಪ್ರೀತಿಯ ಬಾಪುವಿಗೆ ತಲೆಬಾಗಬೇಕು. ಗಾಂಧಿ ಅವರ ಜೀವನದಿಂದ ಹಾಗೂ ಅವರ ಚಿಂತನೆಗಳಿಂದ ಬಹಳಷ್ಟನ್ನು ಕಲಿಯಬೇಕಾಗಿದೆ. ಸಮೃದ್ಧ ಮತ್ತು ಸಹಾನುಭೂತಿಯ ಭಾರತವನ್ನು ಸೃಷ್ಟಿಸಲು ಗಾಂಧೀಜಿಯವರ ಆದರ್ಶಗಳು ನಮಗೆ ಮಾರ್ಗದರ್ಶನ ನೀಡುತ್ತವೆ' ಎಂದು ಗಾಂಧೀಜಿಯನ್ನು ನೆನೆದಿದ್ದಾರೆ.

ನಿಮ್ಮ ಜೀವನವನ್ನು ಬದಲಾಯಿಸಬಹುದಾದ ಮಹಾತ್ಮರ 'ಮಂತ್ರಗಳು'

'ಲಾಲ್​ ಬಹದೂರ್​ ಶಾಸ್ತ್ರಿ ಅವರು ವಿನಯತೆಯಿಂದ ಕೂಡಿದ್ದ ಹಾಗೂ ಅಚಲ ವ್ಯಕ್ತಿತ್ವ ಉಳ್ಳವರಾಗಿದ್ದರು. ಸರಳತೆಯೊಂದಿಗೆ ದೇಶದ ಕಲ್ಯಾಣಕ್ಕಾಗಿ ಶ್ರಮಿಸಿದವರು. ಭಾರತಕ್ಕಾಗಿ ದುಡಿದ ಅವರನ್ನು ಕೃತಜ್ಞತಾ ಭಾವದಿಂದ ಅವರ ಜಯಂತಿಯಂದು ನೆನೆಯೋಣ' ಎಂದು ಕರೆ ನೀಡಿದ್ದಾರೆ.

ಮಹಾತ್ಮ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ರಾಜ್​ ಘಾಟ್​ಗೆ ಭೇಟಿ ನೀಡಿ ಗಾಂಧೀಜಿ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ವಿಜಯ್​ ಘಾಟ್​ನಲ್ಲಿರುವ ಲಾಲ್​ ಬಹದೂರ್​ ಶಾಸ್ತ್ರಿಯವರ ಸ್ಮಾರಕಕ್ಕೂ ಗೌರವ ಸಲ್ಲಿಸಿದರು.

 

Trending News