ಚಾಮರಾಜನಗರ: ಗಡಿ‌ ಜಿಲ್ಲೆ ಚಾಮರಾಜನಗರದಲ್ಲಿ ಈ ಬಾರಿ ನಾಡ ಹಬ್ಬ ದಸರಕ್ಕೆ (Dasara) ಮಂಕು ಕವಿದಿದೆ.‌ ಜನರನ್ನು ಸೆಳೆಯಲು ರೂಪಿಸಿರುವ ವಿವಿಧ ಕಾರ್ಯಕ್ರಮಗಳು ಯಶಸ್ವಿಯಗಿಲ್ಲ. ಹಲವು ಕಾರ್ಯಕ್ರಮಗಳಲ್ಲಿ ಆಯೋಜನೆ ಎಡವಟ್ಟಿನಿಂದ ಅವ್ಯವಸ್ಥೆ ಎದ್ದು ಕಾಣುತ್ತಿದೆ. 


COMMERCIAL BREAK
SCROLL TO CONTINUE READING

ಹೌದು, ಅಪಾರ ನಿರೀಕ್ಷೆಯೊಂದಿಗೆ ಅಕ್ಟೋಬರ್ 17ರಂದು ಚಾಮರಾಜನಗರ ದಸರಾಗೆ ಚಾಲನೆ ಕೊಡಲಾಗಿತ್ತು‌. ಇಂದು ಶುಕ್ರವಾರ ಕೊನೆ ದಿನವಾಗಿದ್ದು ಇಷ್ಟೂ ದಿನವೂ ಹಗಲಿನ ಕಾರ್ಯಕ್ರಮಗಳಿಗತ್ತ ಜನರು ಸುಳಿಯುತ್ತಿಲ್ಲ. ಪ್ರಧಾನ ವೇದಿಕೆ,  ಡಾ. ರಾಜ್ ಕುಮಾರ್ ರಂಗ ಮಂದಿರ, ಮಹಿಳಾ ಉತ್ಪನ್ನ ಮಾರಾಟ ಮೇಳದತ್ತ ನಿರೀಕ್ಷಿತ ಮಟ್ಟದಲ್ಲಿ ಜನರು ಭೇಟಿ ಕೊಟ್ಟಿಲ್ಲ.


2013ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಮಂತ್ರಿಯಾಗಿದ್ದ ಹೆಚ್.ಎಸ್. ಮಹದೇವಪ್ರಸಾದ್ ದಶಕದ ಹಿಂದೆ ಚಾಮರಾಜನಗರದಲ್ಲೂ ದಸರಾ ಆಚರಣೆ ಮಾಡಲು ಪ್ರಾರಂಭಿಸಿದರು. ಅವರ ಕಾಲದಲ್ಲಿ ಸ್ಥಳೀಯ ಕಲಾವಿದರ ಜೊತೆಗೆ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಖ್ಯಾತಿ ಗಳಿಸಿದ ಕಲಾವಿದರನ್ನು ಕರೆಸಿ ಅದ್ದೂರಿಯಾಗಿ ದಸರಾ ಆಚರಿಸಲಾಗುತ್ತಿತ್ತು. ಆ ಮೂಲಕ ಗಡಿ ಭಾಗದ ಜನರಿಗೂ ದಸರಾ ಸಂಭ್ರಮವನ್ನು ಕಣ್ತುಂಬಿಕೊಳ್ಳುವ ಅವಕಾಶ ಕಲ್ಪಿಸಲಾಗಿತ್ತು.


ಇದನ್ನೂ ಓದಿ- Mysuru Dasara: ವಿಂಟೇಜ್ ಕಾರುಗಳ ಪ್ರದರ್ಶನಕ್ಕೆ ಚಾಲನೆ


ಆದರೆ ಹೆಚ್.ಎಸ್. ಮಹದೇವ ಪ್ರಸಾದ್ ಅಕಾಲಿಕ ಮರಣಕ್ಕೆ ತುತ್ತಾದ ಬಳಿಕ ಚಾಮರಾಜನಗರ ದಸರಾ ರಂಗು ಕಳೆದುಕೊಳ್ಳುತ್ತಿದೆ. 2013ರ‌ ಚಾಮರಾಜನಗರ ದಸರಾಕ್ಕೂ 2023ರ ಚಾಮರಾಜನಗರ ದಸರಾಕ್ಕೂ ಅಜಗಜಾಂತರ ವ್ಯತ್ಯಾಸ‌‌ ಕಂಡುಬರುತ್ತಿದೆ. ಚಾಮರಾಜನಗರದಲ್ಲಿ ಅಕ್ಟೋಬರ್ 17ರಿಂದ 20ರವರೆಗೆ ನಾಲ್ಕು ದಿನಗಳ ಕಾಲ ನಡೆದ ದಸರಾ ಸಂಭ್ರಮವೇ ಇಲ್ಲದೆ ಮುಕ್ತಾಯವಾಗುತ್ತಿದೆ.


ಅ‌.17ರಂದು 10.15ಕ್ಕೆ ಪೂಜೆ ಸಲ್ಲಿಸುವ ಮೂಲಕ ಗಡಿಜಿಲ್ಲೆ ದಸರಾ ಮಹೋತ್ಸವಕ್ಕೆ ಚಾಲನೆ ನೀಡಬೇಕಿದ್ದ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಎರಡು ತಾಸು ತಡವಾಗಿ ಬಂದರು. ಈ ನಡುವೆ ಸ್ಥಳೀಯ ಶಾಸಕ ಸಿ. ಪುಟ್ಟರಂಗಶೆಟ್ಟಿ ಚಾಮರಾಜೇಶ್ವರನಿಗೆ ಸಾಂಪ್ರದಾಯಿಕ ಪೂಜೆ ಕೈಂಕರ್ಯ ಮುಗಿಸಿ ಹೊರ ಬರುತ್ತಿದ್ದ ಸಮಯಕ್ಕೆ ಬಂದ ಉಸ್ತುವಾರಿ ಸಚಿವರು ಮತ್ತೊಮ್ಮೆ ಪೂಜೆ ಪುನಸ್ಕಾರಗಳ ರೀಟೇಕ್ ಮಾಡಿಸಿದರು. ಬಳಿಕ‌ ಉಸ್ತುವಾರಿ ಸಚಿವರು  ರೈತರೊಂದಿಗೆ ಸಭೆ ನಡೆಸಿ ಮೈಸೂರಿಗೆ ಪ್ರಯಾಣ ಬೆಳೆಸಿದರು.‌ ದಸರಾಗೆ ಸಂಬಂಧಿಸಿದ ಮತ್ಯಾವುದೇ ಕಾರ್ಯಕ್ರಮಗಳಿಗೆ ತಲೆಹಾಕಿಲ್ಲ.


ಇನ್ನು ಜಿಲ್ಲೆಯ ಶಾಸಕರೇನು ಅವರಿಗಿಂತ ಹೊರತಾಗಿಲ್ಲ. ಚಾಮರಾಜನಗರ ಸಿ. ಪುಟ್ಟರಂಗಶೆಟ್ಟಿ ಹಾಗೂ ಗುಂಡ್ಲುಪೇಟೆ ಹೆಚ್.ಎಂ. ಗಣೇಶ್ ಪ್ರಸಾದ್ ಅಕ್ಟೋಬರ್ 17ರಂದು ನಡೆದ ಉದ್ಘಾಟನೆ ಸಮಾರಂಭದಲ್ಲಿ ಭಾಗಿಯಾಗಿದ್ದು ಬಿಟ್ಟರೆ ಮತ್ತೆ ಬಂದಿಲ್ಲ. ಮಹಿಳಾ ದಸರಾಗೆ ಚಾಲನೆ ಕೊಡಬೇಕಿದ್ದ ಹನೂರು ಶಾಸಕ ಎಂ.ಆರ್. ಮಂಜುನಾಥ್ ಅಂತೂ ಈ ಕಡೆ ಮುಖವನ್ನೇ ತೋರೊಸಿಲ್ಲ. 


ಇದನ್ನೂ ಓದಿ- ಅಭಿಬಸ್, ಎಲ್ಲೇ ಹೋಗಿ ಕೇವಲ 1 ರೂ. ಟಿಕೆಟ್


ನಾಲ್ಕು ದಿ‌ನಗಳ ಕಾಲ ಜಿಲ್ಲೆಯ ಸುಮಾರು 320ಕ್ಕೂ ಹೆಚ್ಚು ಸ್ಥಳೀಯ ಕಲಾವಿದರ ತಂಡ ಬಗೆಬಗೆಯ ಮನರಂಜ‌ನೆ ನೀಡಿದರೂ ಜನರು ಈ ಕಾರ್ಯಕ್ರಮಗಳತ್ತ ಸುಳಿದಿದ್ದು ಮಾತ್ರ ಬೆರಳೆಣಿಕೆಯಷ್ಟೇ.


ಮಕ್ಕಳ ದಸರಾ, ಮಹಿಳಾ ದಸರಾ, ರೈತ ದಸರಾ ಸೇರಿದಂತೆ ಹಲವು ಹೆಸರುಗಳಲ್ಲಿ ಕಾರ್ಯಕ್ರಮಗಳಿಗೆ ಅಧಿಕಾರಿಗಳು ಚಾಲನೆ ನೀಡಿದರೂ ಹೆಚ್ಚಿನ ಕಾರ್ಯಕ್ರಮಗಳು ಖಾಲಿ ಕುರ್ಚಿಗಳಿಗಷ್ಟೇ ಸೀಮಿತವಾದವು.


ಒಟ್ಟಿನಲ್ಲಿ ಪ್ರವಾಸಿಗರನ್ನು ಆಕರ್ಷಿಸಿ ರಾಜ್ಯದ ಜನರ ಗಮನ ಸೆಳೆಯುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಅಡಿಗಲ್ಲು ಹಾಕುವ ಕನಸಿನಿಂದ ಆರಂಭಗೊಂಡ ಗಡಿಜಿಲ್ಲೆ ದಸರಾ ಈ ಬಾರಿ ಮಂಕಾಗಿದೆ. 


ಕೊನೆ ದಿನವಾದ ಶುಕ್ರವಾರ ಸಮಾರೋಪ ಸಮಾರಂಭ ನಡೆಯಲಿದ್ದು ಪ್ರಖ್ಯಾತ ಗಾಯಕ  ರಾಜೇಶ್ ಕೃಷ್ಣನ್ ಅವರು ಬರುವುದರಿಂದ ಕೊನೆದಿನದ ಸಂಜೆ ಕಾರ್ಯಕ್ರಮ ತುಸು ಕಳೆಗಟ್ಟುವ ನಿರೀಕ್ಷೆ ‌ಇದೆ.


ಗ್ರಾಮೀಣ ದಸರಾವೇ ರದ್ದು: 
ಗುಂಡ್ಲುಪೇಟೆ ಪಟ್ಟಣದಲ್ಲಿ ಅಕ್ಟೋಬರ್ 20ರಂದು ನಡೆಯಬೇಕಿದ್ದ  ಗ್ರಾಮೀಣ ದಸರಾ ಅನುದಾನ ಬಿಡುಗಡೆಯಾಗದ ಹಿನ್ನೆಲೆ ರದ್ದುಗೊಂಡು ಕೇವಲ ಪಟ್ಟಣ ವ್ಯಾಪ್ತಿಯಲ್ಲಿ ದೀಪಾಲಂಕಾರಕ್ಕೆ ಸೀಮಿತವಾಗಿದೆ. ಚಾಮರಾಜನಗರ ಪಟ್ಟಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲು 10 ಲಕ್ಷ ರೂ. ಅಂದಾಜಿನ ರೂಪುರೇಷೆ ಸಿದ್ಧಪಡಿಸಲಾಗಿತ್ತು‌. ಆದರೆ ಗ್ರಾಮೀಣ ದಸರಾಗೆ ಅನುದಾನ ಕೊಡದ ಹಿನ್ನೆಲೆ ಗ್ರಾಮೀಣ ದಸರಾವೇ ರದ್ದಾಗಿದ್ದು ದೀಪಾಲಂಕಾರಕ್ಕೆ 50 ಸಾವಿರ ರೂ. ಬಿಡುಗಡೆಯಾದ ಹಿನ್ನೆಲೆ ಅ.17 ರಿಂದ 20 ರ ವರೆಗೆ ಪಟ್ಟಣದ ಪ್ರಮುಖ ರಸ್ತೆಗಳಿಗೆ ದೀಪಾಲಂಕಾರ ಮಾಡಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.